ಮಾಜಿ ಸಂಸದರ ಮೊಮ್ಮಗ ಐಟಿ ಕಂಪನಿಯೊಳಗೆ ಮನಬಂದಂತೆ ಗುಂಡು ಹಾರಿಸಿ ಪಿಸ್ತೂಲ್ನ ಹಿಂಬದಿಯಿಂದ ಇಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ.
ಐಟಿ ಕಂಪನಿಯೊಳಗೆ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿದ್ದಾನೆ. ಆರೋಪಿಯನ್ನು ವಿವೇಕ್ ಭದೌರಿಯಾ ಎಂದು ಗುರುತಿಸಲಾಗಿದ್ದು, ಆತ ಮಾಜಿ ಸಂಸದ ಅರ್ಜುನ್ ಸಿಂಗ್ ಬದೋರಿಯಾ ಅವರ ಮೊಮ್ಮಗ ಎಂದು ಹೇಳಲಾಗಿದೆ. ವಿವೇಕ್ನನ್ನು ಪೊಲೀಸರು ಬಂಧಿಸಿದ್ದಾರೆ.
ಕಂಪನಿಯ ಕಚೇರಿಯ ಬಳಿ ಭದೌರಿಯಾ ಇದ್ದಕ್ಕಿದ್ದಂತೆ ಬಂದು ಗುಂಡು ಹಾರಿಸಿದ್ದ, ಆರೋಪಿಯು ಕಚೇರಿ ನಿರ್ವಾಹಕ ಅನುಜ್ ಕುಮಾರ್ ವೈಶ್ಯ ಮತ್ತು ಅಮಿತೇಶ್ ಶ್ರೀವಾಸ್ತವ ಅವರ ಮೇಲೆ ತನ್ನ ಪಿಸ್ತೂಲಿನ ಹಿಂಭಾಗದಿಂದ ಹಲ್ಲೆ ನಡೆಸಿದ್ದಾನೆ. ಗುಂಡು ಹಾರಿಸುವ ಮೊದಲು ಹಲವು ಉದ್ಯೋಗಿಗಳಿಗೆ ಹಲ್ಲೆ ನಡೆಸಿದ್ದಾನೆ.
ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರು ಘಟನಾ ಸ್ಥಳದಿಂದ ಎರಡು ಬಂದೂಕುಗಳು, ಖಾಲಿ ಕಾರ್ಟ್ರಿಡ್ಜ್ಗಳು ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ ಮತ್ತು ಈ ವಿಷಯದ ಬಗ್ಗೆ ತನಿಖೆ ಮುಂದುವರೆದಿದೆ.
ಅರ್ಜುನ್ ಸಿಂಗ್ ಬದೋರಿಯಾ ಅವರು ಜನತಾ ಪಕ್ಷದಿಂದ 1977 ರಿಂದ 1980ರವರೆಗೆ ಜನತಾ ಪಕ್ಷದಿಂದ ಉತ್ತರ ಪ್ರದೇಶದ ಎತ್ವಾ ಕ್ಷೇತ್ರದಿಂದ ಸಂಸದರಾಗಿದ್ದರು.
ಸಿಗರೇಟ್ ತರಲು ನಿರಾಕರಿಸಿದ್ದಕ್ಕೆ ಗುಂಡು
ಅಂಗಡಿಯಿಂದ ಸಿಗರೇಟ್ ತರಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ 8 ವರ್ಷದ ಬಾಲಕನ ಹಣೆಗೆ ಗುಂಡು ಹಾರಿಸಿರುವ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕ ವಿಪರೀತ ಚಳಿ ಎಂದು ಮನೆಯ ಹೊರಗಡೆ ಬೆಂಕಿ ಹಾಕಿಕೊಂಡು ಅದರ ಮುಂದೆ ಕುಳಿತಿದ್ದ, ಆಗ ಅದೇ ಊರಿನ ನಿತೀಶ್ ಕುಮಾರ್ ಬಾಲಕ ಬಳಿ ಬಂದು ತುಂಬಾ ಅಂಗಡಿಯಿಂದ ಸಿಗರೇಟ್ ತೆಗೆದುಕೊಂಡು ಬಾ ಎಂದು ಹೇಳಿದ್ದಾನೆ.
ಈ ಸುದ್ದಿ ಓದಿದ್ದೀರಾ? ಪಿಎಫ್ಐ ಪ್ರಕರಣ | ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನದ ಬೆನ್ನಲ್ಲೇ ಹಲವೆಡೆ ಇಡಿ ದಾಳಿ
ತುಂಬಾ ಚಳಿ ಇದೆ ನನಗೆ ಹೋಗಲು ಸಾಧ್ಯವಿಲ್ಲ ಎಂದು ಬಾಲಕ ಹೇಳಿದ್ದಾನೆ, ಅದಕ್ಕೆ ಕೋಪಗೊಂಡ ನಿತೀಶ್ ಕುಮಾರ್ ಪಿಸ್ತೂಲ್ ಹೊರ ತೆಗೆದು ಹುಡುಗನ ಹಣೆಗೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳಿ ಕುಟುಂಬಸ್ಥರು ಮತ್ತು ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ನೋಡಿದಾಗ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಗ್ರಾಮಸ್ಥರ ಸಹಾಯದಿಂದ ಧರಹರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿನ ವೈದ್ಯರು ಅವರನ್ನು ಉನ್ನತ ಚಿಕಿತ್ಸೆಗಾಗಿ ಮುಂಗೇರ್ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದು, ನಂತರ ಉನ್ನತ ವೈದ್ಯಕೀಯ ಸೌಲಭ್ಯಕ್ಕಾಗಿ ಬೇರೆಡೆಗೆ ಕರೆದೊಯ್ಯಲಾಗಿದೆ.
