ಪ್ರೀತಿಸಿ, ಮದುವೆ ಆಗುವುದಾಗಿ ನಂಬಿಸಿ, ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿ ಸಂತೋಷ ಬಸಪ್ಪ ಮೇತ್ರೆಗೆ ಬೀದರ್ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ. ಸಾಕ್ಷ್ಯನಾಶ ಮಾಡಿದ ಡಾ.ವೈಜಿನಾಥ ಬಿರಾದಾರ್ ಎಂಬ ವೈದ್ಯನಿಗೂ 5 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸಚಿನ್ ಕೌಶಿಕ್ ಆರ್.ಎನ್. ಅವರು ಔರಾದ್ ತಾಲ್ಲೂಕಿನ ಸಂತಪುರ ಗ್ರಾಮದ ನಿವಾಸಿ ಸಂತೋಷ ಬಸಪ್ಪ ಮೇತ್ರೆ ಹಾಗೂ ಬೀದರ್ನ ಡಾ. ವೈಜಿನಾಥ ಬಿರಾದಾರ ಅವರಿಗೆ ಶಿಕ್ಷೆ ವಿಧಿಸಿದ್ದಾರೆ.
ನೊಂದ ಬಾಲಕಿಗೆ ಅಪರಾಧಿ ಸಂತೋಷ ₹1 ಲಕ್ಷ ದಂಡವನ್ನು ಪರಿಹಾರ ರೂಪದಲ್ಲಿ ನೀಡಬೇಕು. ದಂಡ ಭರಿಸಲು ತಪ್ಪಿದ್ದಲ್ಲಿ ಒಂದು ವರ್ಷ ಕಠಿಣ ಜೈಲು ಶಿಕ್ಷೆ ನೀಡಬೇಕು. ಇನ್ನು, ವೈದ್ಯ ವೈಜಿನಾಥ ಬಿರಾದಾರ್ಗೆ ₹20 ಸಾವಿರ ದಂಡ ವಿಧಿಸಿದ್ದಾರೆ. ದಂಡ ಭರಿಸಲು ಆಗದಿದ್ದಲ್ಲಿ ಆರು ತಿಂಗಳು ಕಠಿಣ ಜೈಲು ಶಿಕ್ಷೆ ವಿಧಿಸಬೇಕೆಂದು ಮಾ.5 ರಂದು ಆದೇಶದಲ್ಲಿ ತಿಳಿಸಿದ್ದಾರೆ.
ಅತ್ಯಾಚಾರದಿಂದ ಗರ್ಭಿಣಿಯಾದ ಬಾಲಕಿಗೆ ಡಾ.ವೈಜಿನಾಥ ಬಿರಾದಾರ ಗರ್ಭಪಾತ ಮಾಡಿ, ಸಾಕ್ಷ್ಯನಾಶ ಮಾಡಿದ್ದರು. ಈ ಸಂಬಂಧ ಅಂದಿನ ಸಂತಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು 2023ರ ಸೆಪ್ಟೆಂಬರ್ 2ರಂದು ಸಂತಪೂರ ಠಾಣೆಗೆ ದೂರು ಸಲ್ಲಿಸಿದ್ದರು. ಅಂದಿನ ಔರಾದ್ ಸಿಪಿಐ ರಘುವೀರಸಿಂಗ್ ಠಾಕೂರ ತನಿಖೆ ನಡೆಸಿ, ಪೋಕ್ಸೋ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪೋಕ್ಸೋ ಕಲಂ 4, 5, 6 ಹಾಗೂ ಭಾರತೀಯ ದಂಡ ಸಂಹಿತೆ ಕಲಂ 376(2) ಅಡಿಯಲ್ಲಿ ಅತ್ಯಾಚಾರಿಗೆ ಕಠಿಣ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. ಸಾಕ್ಷ್ಯನಾಶ ಮಾಡಿದ ವೈದ್ಯನ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 201 ಅಡಿಯಲ್ಲಿ ಶಿಕ್ಷೆ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮದ್ಯ ಕುಡಿದು ಶಾಲೆಯಲ್ಲಿ ಮಲಗಿದ್ದ ಮುಖ್ಯಶಿಕ್ಷಕ ಅಮಾನತು
ವಿಶೇಷ ಸರ್ಕಾರಿ ಅಭಿಯೋಜಕರಾಗಿ ಸಂತೋಷಕುಮಾರ ಟಿ. ಸಿದ್ಧೇಶ್ವರ ಸರ್ಕಾರದ ಪರ ವಾದ ಮಂಡಿಸಿದ್ದರು.