ಕೆಎಸ್ಆರ್ಟಿಸಿ ಬಸ್ ನಲ್ಲೇ ಮೆಕ್ಯಾನಿಕ್ ಒಬ್ಬರು ನೇಣಿಗೆ ಶರಣಾದ ಘಟನೆ ಬೆಳಗಾವಿಯ ಡಿಪೋ-1ರಲ್ಲಿ ನಡೆದಿದೆ. ಹಳೆ ಗಾಂಧಿನಗರದ ನಿವಾಸಿ ಕೇಶವ ಕಮಡೊಳಿ (57) ಆತ್ಮಹತ್ಯೆ ಮಾಡಿಕೊಂಡವರು.
ಮೃತರು ಡಿಪೋದಲ್ಲಿ ಬಸ್ ವಾಶಿಂಗ್ ಕೆಲಸ ಮಾಡುತ್ತಿದ್ದರು. ಆದರೆ, ಪಂಚರ್ ತೆಗೆಯುವ ಕೆಲಸ ನೀಡಲಾಗಿದ್ದು, ಬೆನ್ನು ನೋವು ಇರುವುದರಿಂದ ಅವರನ್ನು ಬೇರೆ ಕೆಲಸಕ್ಕೆ ನಿಯೋಜಿಸಲು ಕುಟುಂಬಸ್ಥರು ಮನವಿ ಮಾಡಿದ್ದರು. ಇದನ್ನು ದಿಟ್ಟಿಸದೇ, ಡಿಪೋ ಮ್ಯಾನೇಜರ್ ಲಿಂಗರಾಜ ಲಾಠಿ ಮತ್ತು ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್ ಅವರು ಡ್ಯೂಟಿ ಬದಲಿಸದೆ ನಿರ್ಲಕ್ಷ್ಯ ತೋರಿದರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕೆಲಸದ ಒತ್ತಡವನ್ನು ತಡೆದುಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಮೃತರ ಕುಟುಂಬಸ್ಥರು ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.