ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಎತ್ತನೇರಿ ಎತ್ತನರಸುವರು
ಭಾವದಲೊಬ್ಬ ದೇವರ ಮಾಡಿ ಮನದಲೊಂದು ಭಕ್ತಿಯ ಮಾಡಿದಡೆ
ಕಾಯದ ಕೈಯಲ್ಲಿ ಕಾರ್ಯವುಂಟೆ?
ವಾಯಕ್ಕೆ ಬಳಲುವರು ನೋಡಾ.
ಎತ್ತನೇರಿ ಎತ್ತನರಸುವರು
ಎತ್ತ ಹೋದರೈ ಗುಹೇಶ್ವರಾ?
ಪದಾರ್ಥ:
ಕಾಯದ ಕೈ = ದೇಹದಲ್ಲಿರುವ ಕೈ, ಕರಸ್ಥಲ
ಕಾರ್ಯ = ಕರಸ್ಥಲದ ಇಷ್ಟಲಿಂಗ
ವಾಯ = ವಿನಾಕಾರಣ
ವಚನಾರ್ಥ:
ಪ್ರತಿಯೊಬ್ಬನ ದೇಹ ಭಾವದಲ್ಲೂ ದೇವರು ನೆಲೆಸಿರುತ್ತಾನೆ. “ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಮಿತಃ” ಎಲೈ ಅರ್ಜುನ, ನಾನು ಎಲ್ಲಾ ಪ್ರಾಣಿಗಳ ಹೃದಯದಲ್ಲಿರುವ ಆತ್ಮನಾಗಿದ್ದೇನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅದರಂತೆ ನಮ್ಮ ದೇಹಭಾವದಲ್ಲಿರುವ ದೈವವನ್ನು ಕರಸ್ಥಲದಲ್ಲಿಟ್ಟು ಕಾಣಬೇಕು. ಹಾಗಲ್ಲದೆ ದೈವವನ್ನು ಹೊರಗೆಲ್ಲೊ ಹುಡುಕಿ ಅಲೆಯುತ್ತಾ ದೈಹಿಕ ಶ್ರಮದಿಂದ ಬಳಲಬಾರದು. ಇದನ್ನು ಅಲ್ಲಮಪ್ರಭು ಅದ್ಭುತವಾದ ಒಂದು ಉಪಮೆಯ ಮೂಲಕ ಸ್ಪಷ್ಟಪಡಿಸುತ್ತಾರೆ. ಎತ್ತಿನ ಮೇಲೆ ಕುಳಿತು ಸವಾರಿ ಮಾಡುತ್ತ ಅದೇ ಎತ್ತನ್ನು ಹುಡುಕಿಕೊಂಡು ಹೋದ ಹಾಗೆ. ಎತ್ತನೇರಿ ಎತ್ತನರಸುವರು
ಎತ್ತ ಹೋದರಯ್ಯ?
ಪದಪ್ರಯೋಗಾರ್ಥ:
ಎತ್ತನೇರಿ ಎತ್ತನರಸುವರು ಎಂಬ ಅಲ್ಲಮನ ಅನನ್ಯ ಪದಪ್ರಯೋಗವನ್ನು ಒಂದು ಸರಳ ಕಥೆಯೊಂದಿಗೆ ಸಮೀಕರಿಸಿ ನೋಡಬಹುದು.
ಒಬ್ಬ ಗುರುವಿನ ಹತ್ತು ಶಿಷ್ಯರ ಗುಂಪು ಹರಿಯುವ ನದಿಯನ್ನು ದಾಟಿ ಹೋಗುವ ಪ್ರಸಂಗ ಬಂತು. ನದಿ ದಾಟಿದ ನಂತರ ಎಲ್ಲಾ ಹತ್ತು ಶಿಷ್ಯರೂ ದಾಟಿ ಬಂದಿರುವರೆ ಎಂದು ಖಚಿತಪಡಿಸಿಕೊಳ್ಳಲು ಒಬ್ಬನು ತನ್ನನ್ನು ಬಿಟ್ಟು ಇತರರನ್ನು ಎಣಿಸಿ ಒಂಬತ್ತು ಶಿಷ್ಯರು ಮಾತ್ರ ಇದ್ದಾರೆಂದು ಆತಂಕಗೊಂಡ. ಪ್ರತಿಯೊಬ್ಬನು ಹೀಗೆಯೇ ತನ್ನನ್ನು ಬಿಟ್ಟು ಇತರರನ್ನು ಒಂಬತ್ತು ಎಂದು ಎಣಿಸುತ್ತ ಹತ್ತನೆಯವನು ನದಿಯಲ್ಲಿ ಮುಳುಗಿ ಹೋಗಿದ್ದಾನೆ ಅಂದುಕೊಂಡು ದುಃಖಿತರಾದರು. ಎಲ್ಲವೂ ತನ್ನಲ್ಲೇ ಇದ್ದುಕೊಂಡು ಅದೆಲ್ಲಿದೆ ಎಂದು ಹುಡುಕುತ್ತಾ ಹೋಗಿ ದುಃಖಿತನಾಗುವ ಮನುಷ್ಯನ ಮನಸ್ಥಿತಿಯನ್ನು ರಮಣ ಮಹರ್ಷಿಗಳು ಈ ಕಥೆಯ ಮೂಲಕ ಉದಹರಿಸಿದ್ದಾರೆ. ಅಲ್ಲಮ ಬಳಸಿರುವ ಎತ್ತನೇರಿ ಎತ್ತನರಸುವ ಅಪರೂಪದ ರೂಪಕ ಮತ್ತು ರಮಣರು ಹೇಳಿದ ಉಪದೇಶಾಮೃತ ಕಥೆಯ ಸಾರ ಎರಡೂ ಒಂದೇ. “ಭಾವದಲೊಬ್ಬ ದೇವರ ಮಾಡಿ” ಎಲ್ಲಾ ವಚನ ಗಾಯಕರ ಹಾಟ್ ಫೇವರಿಟ್ ವಚನ ಕೂಡಾ!
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.