“ಉಪವಾಸವು ಉಪವಾಸಿಗನಲ್ಲಿ ತ್ಯಾಗ, ಬಲಿದಾನ, ಕ್ಷಮೆ ಮತ್ತು ಸಹಾನುಭೂತಿಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ದಾನ ಧರ್ಮ ಮತ್ತು ಸೇವಾ ಮನೋಭಾವ ಬೆಳೆಸುತ್ತದೆ. ಸಮಾಜದ ಬಡ, ದರಿದ್ರ, ಸಂಕಷ್ಟ ಪೀಡಿತ ಅಗತ್ಯವುಳ್ಳ ಜನರ ತೊಂದರೆಗಳನ್ನು ಅರಿಯಲು ಮತ್ತು ಅವರಿಗೆ ನೆರವಾಗಲು ಉಪವಾಸಿಗನನ್ನು ಪ್ರೇರೇಪಿಸುತ್ತದೆ. ಒಂದು ವೇಳೆ ಯಾರಿಗಾದರೂ ಹಸಿವು ಬಾಯಾರಿಕೆಯ ಅನುಭವವಿಲ್ಲದಿದ್ದರೆ ಅವನಿಗೆ ಸಮಾಜದ ದಾರಿದ್ರ್ಯ ಪೀಡಿತ ಜನರ ಸಂಕಷ್ಟ ಅರಿವಾಗುವುದು ಅಸಾಧ್ಯ” ಎಂದು ಹೊಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಇದ್ರೀಸ್ ಹೊಡೆ ಹೇಳಿದರು.
ಅವರು ಆನಗಳ್ಳಿ ಬಸ್ರೂರಿನ ಆದಿತ್ಯ ರೆಸಾರ್ಟ್ ನಲ್ಲಿ ಖಿದ್ಮಾ ಫೌಂಡೇಶನ್ ಕುಂದಾಪುರ ತಾಲೂಕು ವತಿಯಿಂದ ನಡೆದ ಸೌಹಾರ್ದ ಇಫ್ತಾರ್ ಕೂಟವನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು. ಅಹ್ಮದ್ ಸವೋದ್ ರವರ ಕುರ್ ಆನ್ ಪಠಣದೊಂದಿಗೆ ಸಭೆ ಆರಂಭವಾಯಿತು. ಮೌಲಾನಾ ಝಮೀರ್ ಅಹ್ಮದ್ ರಶಾದಿ “ಮನುಷ್ಯನ ಹುಟ್ಟು ಮತ್ತು ಸಾವು ಸಹಜ ಆದರೆ, ಇವೆರಡರ ಮಧ್ಯೆ ಹೇಗೆ ಬದುಕಬೇಕೆಂಬುದೇ ಜೀವನವಾಗಿದ್ದು, ಸ್ವಾರ್ಥಕ್ಕಾಗಿ ಬದುಕದೇ ಜೀವನವನ್ನು ಸಮಾಜ ಸೇವೆಗೆ ಮೀಸಲಾಗಿಡಬೇಕು, ಇದರಿಂದ ಬದುಕು ಸಾರ್ಥಕತೆಯ ಜೊತೆಗೆ ಸಮಾಧಾನವು ಇರುತ್ತದೆ. ಇಡೀ ಮಾನವ ಕುಲವು ಪ್ರಭುವಿನ ಕುಟುಂಬವಾಗಿದೆ. ಆದ್ದರಿಂದ ಮಾನವರ ಸೇವೆ ಮತ್ತು ಸಹಕಾರವು ಪ್ರಭುವಿನ ಪ್ರೀತಿ ಮತ್ತು ಸಾಮಿಪ್ಯದ ಮಾಧ್ಯಮವಾಗಿದೆ. ಪರೋಪಕಾರದ ತಿಂಗಳಾದ ಪವಿತ್ರ ರಮಝಾನ್ ನ ಈ ಶುಭ ಅವಸರದಲ್ಲಿ ಎಲ್ಲಾ ಸಮುದಾಯದ ಗಣ್ಯ ವ್ಯಕ್ತಿಗಳನ್ನು ಸೇರಿಸಿ ಸೌಹಾರ್ದ ಇಫ್ತಾರ್ ಕೂಟ ಏರ್ಪಡಿಸಲಾಗಿದೆ. ಎಂದು ಸಂಸ್ಥೆಯ ಸೇವಾ ಕಾರ್ಯ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುತ್ತಾ ಪ್ರಾಸ್ತಾವಿಕ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾದ ಸಹಬಾಳ್ವೆ ಕುಂದಾಪುರದ ಅಧ್ಯಕ್ಷರಾದ ರಾಮಕೃಷ್ಣ ಹೆರ್ಳೆ, ರಾಜಕೀಯ ನೇತಾರರಾದ ದೇವಾನಂದ ಶೆಟ್ಟಿ, ಕುಂದಾಪುರ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾದ ವಿನೋದ್ ಕ್ರಾಸ್ತಾ, ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಳೂರು ದಿನಕರ ಶೆಟ್ಟಿ, ನಿವೇದಿತಾ ಪ್ರೌಢ ಶಾಲೆ, ಬಸ್ರೂರಿನ ನಿವೃತ್ತ ಮುಖ್ಯೋಪಾಧ್ಯಾಯರಾದ ದಿನಕರ್ ಆರ್ ಶೆಟ್ಟಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ಕುಂದಾಪುರ ತಾಲೂಕಿನ ಸಂಚಾಲಕರಾದ ಕೆ.ಸಿ. ರಾಜು ಬೆಟ್ಟಿನಮನೆ ಸೌಹಾರ್ದತೆ, ಸಾಮರಸ್ಯ, ಸಹಬಾಳ್ವೆ, ಸಹೋದರತೆಯ ಅಗತ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ರಮಝಾನ್ ನ ಶುಭಾಶಯಗಳನ್ನು ಕೋರಿದರು. ಖಿದ್ಮಾ ಫೌಂಡೇಶನ್ ತಾಲೂಕು ಕುಂದಾಪುರ ಮತ್ತು ಬೈಂದೂರಿನ ಅಧ್ಯಕ್ಷರಾದ ಶೇಖ್ ಅಬು ಮುಹಮ್ಮದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಆದರ್ಶ್ ಆಸ್ಪತ್ರೆ ಕುಂದಾಪುರದ ಡಾ. ಆದರ್ಶ ಹೆಬ್ಬಾರ್, ಖಿದ್ಮಾ ರಿಯಾದ್ ನ ಪ್ರತಿನಿಧಿ ಶೇಖ್ ಹನೀಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ವಂಡ್ಸೆ, ವಿವಿಧ ಧರ್ಮದ ಅನುಯಾಯಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ಶೇಖ್ ಅಸ್ಗರ್ ಅಲಿ ವಂದಿಸಿದರು. ಮುನೀರ್ ಅಹ್ಮದ್ ಕಂಡ್ಲೂರು ನಿರೂಪಿಸಿದರು. ಇಫ್ತಾರ್ ನೊಂದಿಗ ಕಾರ್ಯಕ್ರಮ ಮುಕ್ತಾಯಗೊಂಡಿತು.
