ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಘಾಮಾ ತಾಂಡಾ ನಿವಾಸಿಗಳು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪಿಡಿಒ ಜತೆ ವಾಗ್ವಾದ ನಡೆಸಿ ಕೈ ಕೈ ಮಿಲಾಯಿಸಿರುವ ಘಟನೆ ಬೀದರ್ ಜಿಲ್ಲೆ ಔರಾದ್ ತಾಲೂಕಿನಲ್ಲಿ ನಡೆದಿದೆ.
ತೆಲಂಗಾಣ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಘಾಮಾ ತಾಂಡಾದ ಮಹಿಳೆಯರು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಕಚೇರಿಗೆ ಬೀಗ ಹಾಕಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸ್ಥಳಕ್ಕೆ ಬಂದ ಪಿಡಿಒ ಶ್ವೇತಾ ಜತೆ ವಾಗ್ವಾದ ನಡೆಸಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
“ನಮ್ಮ ತಾಂಡಾ ಜನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನಿತ್ಯ 2 ರಿಂದ 3 ಕಿ.ಮೀ. ನಡೆದುಕೊಂಡು ಹೋಗಿ ನೀರು ತರುತ್ತಿದ್ದರೂ ಗ್ರಾಮ ಪಂಚಾಯಿತಿಯವರು ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ. ಪ್ರತಿಭಟನೆ ಮಾಡಲು ಬಂದ ನಮ್ಮ ಮೇಲೆಯೇ ಪಿಡಿಒ ಬೆದರಿಕೆ ಹಾಕುತ್ತಿದ್ದಾರೆ” ಎಂದು ಘಾಮಾ ತಾಂಡಾ ಮಹಿಳೆಯರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ನೀರು ಪೂರೈಕೆಗೆ ಆಗ್ರಹ; ಖಾಲಿ ಕೊಡ ಹಿಡಿದು ಗ್ರಾ.ಪಂ ಕಚೇರಿಗೆ ಮುತ್ತಿಗೆ
“ಘಾಮಾ ತಾಂಡಾಕ್ಕೆ ಬಾವಿಯಿಂದ ಪೈಪ್ಲೈನ್ ಮಾಡಿ ಕುಡಿಯಲು ನೀರು ಪೂರೈಸಿದ್ದೇವೆ. ಆದರೆ, ತಾಂಡಾ ನಿವಾಸಿಗಳೇ ಪದೇಪದೆ ಆ ಪೈಪ್ ಒಡೆದು ಹಾಕುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದೆ. ನಿನ್ನೆ ಪಂಚಾಯಿತಿಗೆ ಬಂದಾಗ ಕೆಲವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಪೊಲೀಸರಿಗೂ ದೂರು ನೀಡಿದ್ದೇನೆ” ಎಂದು ಪಿಡಿಒ ಶ್ವೇತಾ ತಿಳಿಸಿದ್ದಾರೆ.