ದಕ್ಷಿಣ ರಾಜ್ಯಗಳ ನ್ಯಾಯಯುತ ತೆರಿಗೆಯ ಪಾಲನ್ನು, ಅನುದಾನವನ್ನು ಸಮರ್ಪಕವಾಗಿ ಹಂಚಿದ್ದಿಲ್ಲ. ಈಗಲೇ ಈ ಮಟ್ಟಿಗಿನ ತಾರತಮ್ಯವಿರುವಾಗ, ಅಕಸ್ಮಾತ್ ಕ್ಷೇತ್ರ ಪುನರ್ವಿಂಗಡಣೆಯಿಂದ ಉತ್ತರ ಪ್ರದೇಶ 143 ಸ್ಥಾನಗಳಿಗೆ ಏರಿಕೆಯಾಗಿದ್ದೇ ಆದರೆ, ಏನಾಗಬಹುದು?
‘ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ವ್ಯಕ್ತಿಯು ಬೆಂಕಿ ಹೊತ್ತಿಕೊಂಡ ಒಣ ಹುಲ್ಲಿನಂತೆ ನಾಶವಾಗುತ್ತಾನೆ’ -ಇದು ತಮಿಳಿನ ಸಂತ ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಅವರ ಸುಪ್ರಸಿದ್ಧ ಹೇಳಿಕೆಗಳಲ್ಲೊಂದು.
ಕೇಂದ್ರ ಸರ್ಕಾರ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಮುಂದಾಗಿರುವ ಈ ಸಂದರ್ಭದಲ್ಲಿ ಇದನ್ನು ನೆನಪು ಮಾಡಿಕೊಂಡವರು ಮತ್ತು ಸೂಕ್ತ ಪ್ರತಿಕ್ರಿಯೆಯಾಗಿ ಬಳಸಿಕೊಂಡವರು ಜನಪ್ರಿಯ ನಟ ಕಮಲ್ ಹಾಸನ್. ಅಂದರೆ, ‘ದೇಶಕ್ಕೆ ಹಾನಿ ಎದುರಾಗುವ ಮುನ್ನ ಎಚ್ಚೆತ್ತುಕೊಳ್ಳಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ’ ಎಂದು ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡಿದ್ದಾರೆ. ಮುಂದುವರೆದು, ‘ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಿದ ರಾಜ್ಯಗಳನ್ನು ಶಿಕ್ಷಿಸಬಾರದು’ ಎಂದು ಕೇಂದ್ರ ಸರ್ಕಾರಕ್ಕೆ ಒಕ್ಕೂಟ ವ್ಯವಸ್ಥೆಯ ಪಾಠವನ್ನೂ ಮಾಡಿದ್ದಾರೆ.
ನಟ ಕಮಲ್ ಹಾಸನ್ ಇಷ್ಟೆಲ್ಲ ಕಾಳಜಿಯಿಂದ ಮಾತನಾಡಿದ್ದು, ಕೇಂದ್ರ ಸರ್ಕಾರ 2026ರಲ್ಲಿ ಮಾಡಲು ಮುಂದಾಗಿರುವ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತು. ಅದರಿಂದ ದೇಶದ ಕೆಲವು ರಾಜ್ಯಗಳ ಜನರಿಗೆ ಆಗುವ ಅನ್ಯಾಯದ ವಿರುದ್ಧ ಈಗಲೇ ದನಿ ಎತ್ತುವುದು ಸೂಕ್ತವೆಂದು; ಅದರಿಂದ ಕೇಂದ್ರದ ಮೋದಿ ಸರ್ಕಾರದ ವಂಚನೆಯಿಂದ ಪಾರಾಗಬಹುದೆಂದು ಎಚ್ಚರಿಸಿದ್ದಾರೆ. ಹಾಗೆಯೇ ಕ್ಷೇತ್ರ ಪುನರ್ವಿಂಗಡಣೆ ವಿರೋಧಿಸಲು ಸರ್ವಪಕ್ಷ ಸಭೆ ಆಯೋಜಿಸಿದ್ದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತಮಿಳುನಾಡಿನ ಎಲ್ಲಾ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದನ್ನು ಕಮಲ್ ಹಾಸನ್ ಶ್ಲಾಘಿಸಿದ್ದಾರೆ.
ಕೇಂದ್ರ ಸರಕಾರವು ಕೈಗೊಳ್ಳಲು ಉದ್ದೇಶಿಸಿರುವ ಕ್ಷೇತ್ರ ಪುನರ್ವಿಂಗಡಣೆಯನ್ನು ವಿರೋಧಿಸುವಲ್ಲಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮುಂಚೂಣಿಯಲ್ಲಿದೆ. 2026ರ ನಂತರ ನಡೆಯುವ ನಿರೀಕ್ಷೆಯಿರುವ ಕೇತ್ರ ಪುನರ್ವಿಂಗಡಣೆಯಿಂದಾಗಿ ದಕ್ಷಿಣದ ರಾಜ್ಯಗಳಿಗೆ ಲೋಕಸಭಾ ಕ್ಷೇತ್ರಗಳು ನಷ್ಟವಾಗುತ್ತವೆ ಮತ್ತು ಸಂಸತ್ತಿನಲ್ಲಿ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎನ್ನುವುದು ಡಿಎಂಕೆ ನಾಯಕ ಸ್ಟಾಲಿನ್ ಅವರ ವಾದವಾಗಿದೆ.
ಈ ನಿಟ್ಟಿನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಮುಂದಾಗಿ ಸರ್ವಪಕ್ಷ ಸಭೆ ಕರೆದು ಚರ್ಚಿಸಿದ್ದಾರೆ. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದ್ದಾರೆ. ಇದಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕೇಂದ್ರದ ಕಾಯ್ದೆ ಒಪ್ಪದವರನ್ನು ಅನಾಗರಿಕರು ಎನ್ನುವುದು ಎಷ್ಟು ಸರಿ?
ಲೋಕಸಭಾ ಕ್ಷೇತ್ರವು ಪುನರ್ವಿಂಗಡಣೆಯಾದರೆ, ಹಿಂದಿ ಭಾಷೆಯನ್ನು ಮಾತನಾಡುವ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶ- 80ರಿಂದ 143 ಸ್ಥಾನಗಳಿಗೆ ಹೆಚ್ಚಾಗಲಿದೆ. ಅದೇ ರೀತಿ, ಬಿಹಾರ- 40ರಿಂದ 79 ಸ್ಥಾನಗಳಿಗೆ ಏರಿಕೆಯಾಗಲಿದೆ ಎಂಬ ಅಂದಾಜಿದೆ. ಒಟ್ಟಾರೆಯಾಗಿ, ಹಿಂದಿ ಭಾಷೆ ಮಾತನಾಡುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಬಿಹಾರ, ಛತ್ತೀಸ್ಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿನ ಲೋಕಸಭಾ ಸ್ಥಾನಗಳ ಪ್ರಮಾಣವು ಶೇ. 42ರಿಂದ ಶೇ. 48ಕ್ಕೆ ಏರಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ದಕ್ಷಿಣ ರಾಜ್ಯಗಳಾದ ತಮಿಳುನಾಡು ಎಂಟು, ಕರ್ನಾಟಕ ಎರಡು ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಲಿವೆ ಎನ್ನಲಾಗುತ್ತಿದೆ.
ದಕ್ಷಿಣ ರಾಜ್ಯಗಳ ವಿರೋಧಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ದಕ್ಷಿಣ ಭಾರತದ ರಾಜ್ಯಗಳು ಒಂದೇ ಒಂದು ಲೋಕಸಭಾ ಸ್ಥಾನವನ್ನು ಕಳೆದುಕೊಳ್ಳುವುದಿಲ್ಲ’ ಎಂದಿದ್ದಾರೆ. ಇದಕ್ಕೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ‘ಅಸ್ತಿತ್ವದಲ್ಲಿರುವ ಸಂಸತ್ ಸ್ಥಾನಗಳಲ್ಲಿ ಯಾವುದೇ ಇಳಿಕೆ ಇರುವುದಿಲ್ಲ ಎಂದು ಅಮಿತ್ ಶಾ ಹೇಳುತ್ತಾರೆ. ಆದರೆ ದಕ್ಷಿಣ ರಾಜ್ಯಗಳಿಗೆ ಸಿಗುವ ಸೀಟುಗಳ ಹೆಚ್ಚಳ ಎಷ್ಟು ಎಂದು ಹೇಳುತ್ತಿಲ್ಲ’ ಎಂದು ಅವರ ಮರೆಮೋಸವನ್ನು ಬಿಚ್ಚಿಟ್ಟಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಎಂದರೆ ಮತದಾರರ ಪ್ರಾದೇಶಿಕ ಗಡಿಗಳನ್ನು ಮರುರೂಪಿಸುವ ಪ್ರಕ್ರಿಯೆಯಾಗಿದೆ. ಸಂವಿಧಾನದ 82ನೇ ವಿಧಿಯು ಪ್ರತಿ ಜನಗಣತಿ ಪೂರ್ಣಗೊಂಡ ನಂತರ, ಪ್ರತಿ ರಾಜ್ಯಕ್ಕೆ ಲೋಕಸಭಾ ಸ್ಥಾನಗಳ ಹಂಚಿಕೆಯನ್ನು ಅವುಗಳ ಜನಸಂಖ್ಯೆಯಲ್ಲಿನ ಬದಲಾವಣೆಗಳ ಆಧಾರದ ಮೇಲೆ ಸರಿಹೊಂದಿಸಬೇಕು ಎಂದು ಹೇಳುತ್ತದೆ. ಕ್ಷೇತ್ರ ಪುನರ್ವಿಂಗಡಣೆ ವಿವಾದ ಪ್ರಸ್ತುತ ಲೋಕಸಭೆಯ ಸಂಯೋಜನೆಯು 1971ರ ಜನಗಣತಿಯನ್ನು ಆಧರಿಸಿ ಮಾಡಲಾಗಿತ್ತು. ಆದರೆ, 2026ರ ಜನಸಂಖ್ಯೆ ಆಧಾರಿತ ಕ್ಷೇತ್ರ ವಿಂಗಡಣೆಯು ಲೋಕಸಭೆಯಲ್ಲಿ ದೇಶದ ಉತ್ತರ ಮತ್ತು ಮಧ್ಯ ರಾಜ್ಯಗಳಿಗೆ ಅನಗತ್ಯ ಅನುಕೂಲಗಳನ್ನು ನೀಡಲಿದೆ ಎಂದು ದಕ್ಷಿಣದ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ.
ಅಷ್ಟೇ ಅಲ್ಲ, ಸಂಸತ್ತಿನಲ್ಲಿ ಹಿಂದಿ ಭಾಷೆ ಮಾತನಾಡದ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕುಸಿಯಲಿದೆ. ದಕ್ಷಿಣ ರಾಜ್ಯಗಳಲ್ಲಿ ಗೊಂದಲ ಸೃಷ್ಟಿಸುವ ದುರುದ್ದೇಶಪೂರಿತ ಉದ್ದೇಶದಿಂದಲೇ ಇದನ್ನು ಮಾಡಲಾಗಿದೆ ಎನ್ನುವ ಆರೋಪವೂ ಇದೆ. ಕ್ಷೇತ್ರ ಪುನರ್ವಿಂಗಡಣೆ ವೇಳೆ ಕೇವಲ ಜನಸಂಖ್ಯೆಯನ್ನು ಮಾತ್ರ ಮಾನದಂಡವನ್ನಾಗಿರಿಸದೆ, ರಾಜ್ಯದ ಒಟ್ಟು ದೇಶೀಯ ಉತ್ಪನ್ನ, ತಲಾ ಆದಾಯ, ಮೂಲಭೂತ ಅಭಿವೃದ್ಧಿಯನ್ನೂ ಪರಿಗಣಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.
ಏಕೆಂದರೆ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ, ದಕ್ಷಿಣದ ರಾಜ್ಯಗಳು ಇಲ್ಲಿಯವರೆಗೆ ಮಣೆ ಹಾಕಿದ್ದಿಲ್ಲ. ಆ ಕಾರಣಕ್ಕಾಗಿಯೇ ದಕ್ಷಿಣ ರಾಜ್ಯಗಳ ನ್ಯಾಯಯುತ ತೆರಿಗೆಯ ಪಾಲನ್ನು, ಅನುದಾನವನ್ನು ಸಮರ್ಪಕವಾಗಿ ಹಂಚಿದ್ದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಅತಿ ಹೆಚ್ಚು ಸಂಸತ್ ಸದಸ್ಯರನ್ನು ಹೊಂದಿರುವ ಉತ್ತರ ಪ್ರದೇಶಕ್ಕೆ ಭರಪೂರ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ತಡೆರಹಿತ ಅನುದಾನ ಬಿಡುಗಡೆ ಮಾಡುವುದು ನಿಂತಿಲ್ಲ. ಬಿಹಾರದ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಕೇಂದ್ರ ಬಜೆಟ್ನಲ್ಲಿ ಘೋಷಿಸಿರುವುದನ್ನು ಗಮನಿಸಿದರೆ, ಇದು ಇನ್ನಷ್ಟು ನಿಚ್ಚಳವಾಗಬಹುದು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಹುಲ್ ಸುತ್ತಮುತ್ತ ‘ದಿಬ್ಬಣದ ಕುದುರೆಗಳು’ ಇವೆ ಎಂಬ ದೂರೂ ಇದೆಯಲ್ಲ?
ಈಗಲೇ ಈ ಮಟ್ಟಿಗಿನ ಮಲತಾಯಿ ಧೋರಣೆ ತೋರುವ ಕೇಂದ್ರ, ಅಕಸ್ಮಾತ್ ಕ್ಷೇತ್ರ ಪುನರ್ವಿಂಗಡಣೆಯಿಂದ ಉತ್ತರ ಪ್ರದೇಶ 143 ಸ್ಥಾನಗಳಿಗೆ ಏರಿಕೆಯಾಗಿದ್ದೇ ಆದರೆ, ಆ ತಾರತಮ್ಯ ಇನ್ನಾವ ಹಂತಕ್ಕೆ ಹೋಗಲಿದೆ?
ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಬೇಕಾದ್ದು ಕೇಂದ್ರ ಸರ್ಕಾರದ ಜವಾಬ್ದಾರಿ. ಆದರೆ ಕೇಂದ್ರದ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿದರೆಂಬ ಕಾರಣಕ್ಕೆ, ಅನಾಗರಿಕರು ಎಂದು ಹೀಗಳೆಯುವ ಬಿಜೆಪಿ ನಾಯಕರು, ಮುಂದೆ ಕ್ಷೇತ್ರ ಪುನರ್ವಿಂಗಡಣೆ ನಂತರ ನಮ್ಮನ್ನು ಮನುಷ್ಯರನ್ನಾಗಿ ನೋಡುತ್ತಾರ?
ಆ ಕಾರಣಕ್ಕಾಗಿಯೇ ‘ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ವ್ಯಕ್ತಿಯು ಬೆಂಕಿ ಹೊತ್ತಿಕೊಂಡ ಒಣ ಹುಲ್ಲಿನಂತೆ ನಾಶವಾಗುತ್ತಾನೆ’ ಎನ್ನುವ ತತ್ವಜ್ಞಾನಿ ತಿರುವಳ್ಳುವರ್ ಮಾತನ್ನು ಮನನ ಮಾಡಿಕೊಳ್ಳಬೇಕಾದ ಅಗತ್ಯ ಈಗ ಬಂದಿದೆ. ಪ್ರಾತಿನಿಧ್ಯ ಪಡೆಯುವ ಬಗ್ಗೆ ಒಂದಾಗಿ, ಕೇಂದ್ರದ ವಿರುದ್ಧ ಸಮರ ಸಾರಬೇಕಾಗಿದೆ.
