ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರನ್ನು ಭೇಟಿ ಮಾಡಿ ಬುಧವಾರ ದೂರು ಸಲ್ಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ರಾಜಭವನ ಎನ್ನುವುದು ಬಿಜೆಪಿ ಕಚೇರಿಯಂತಾಗಿದೆ ಎನ್ನುವ ಆರೋಪಕ್ಕೆ ಬಿಜೆಪಿ ನಾಯಕರಿಗೆ ಅತೀ ಸುಲಭವಾಗಿ ರಾಜ್ಯಪಾಲರು ಸಿಗುತ್ತಿರುವುದು ಈ ಆರೋಪವನ್ನು ಮತ್ತಷ್ಟು ಇಂಬು ಮಾಡಿದೆ.
ಬಜೆಟ್ ಅಧಿವೇಶನ ಆರಂಭದ ದಿನವೇ ‘ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುತ್ತಿದ್ದಾರೆ’ ಎಂದು ಆರೋಪಿಸಿ ಶಾಸಕರ ಭವನದಿಂದ ವಿಧಾನಸೌಧದವರೆಗೆ ರಾಜ್ಯ ಬಿಜೆಪಿಯ ನಾಯಕರು ಪಾದಯಾತ್ರೆ ನಡೆಸಿದರು. ಬಳಿಕ ರಾಜ್ಯಪಾಲರನ್ನು ಭೇಟಿಯಾಗಿ ದೂರು ಸಹ ಸಲ್ಲಿಸಿದರು.
ವಾರ ಕಳೆಯುತ್ತಿದ್ದಂತೆ ಬುಧವಾರ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಗದ್ದಲ ಉಭಯ ಸದನದಲ್ಲಿ ಬುಧವಾರ ಪ್ರತಿಭಟಿಸಿ, ನಂತರ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ರಾಜಭವನಕ್ಕೆ ಕಾಲ್ನಡಿಗೆ ಮೂಲಕ ತೆರಳಿ ರಾಜ್ಯಪಾಲರಿಗೆ ದೂರು ನೀಡಿದರು. ನಿಯೋಗದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಸೇರಿದಂತೆ ಇತರರು ಇದ್ದರು.
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ ಮತ್ತು ಅಶೋಕ್, “ಗ್ಯಾರಂಟಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಅಧ್ಯಕ್ಷರನ್ನು ನೇಮಿಸಿದ್ದು ಇದು ಸಂಪೂರ್ಣವಾಗಿ ರಾಜ್ಯದ ಕಾಂಗ್ರೆಸ್ ಸರಕಾರದ ಅಸಾಂವಿಧಾನಿಕ ನಡೆ ಎಂಬುದನ್ನು ಗೌರವಾನ್ವಿತ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ” ಎಂದು ತಿಳಿಸಿದರು.
“ರಾಜ್ಯದ ಜನರ ತೆರಿಗೆ ಹಣದ ದುರುಪಯೋಗ ಆಗಿದೆ ಎಂದು ಮನದಟ್ಟು ಮಾಡಲಾಗಿದೆ. ಈ ಸರಕಾರಕ್ಕೆ ತಿಳಿಹೇಳುವ ಕೆಲಸ ಮಾಡುವಂತೆ ಹಾಗೂ ಮಧ್ಯಸ್ಥಿಕೆ ವಹಿಸಲು ಮನವಿ ಮಾಡಿದ್ದೇವೆ. ನನ್ನ ವಿಧಾನಸಭಾ ಕ್ಷೇತ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಲೆ ಮತ್ತು ಕಾಲೇಜುಗಳ ಉಸ್ತುವಾರಿ ಸಮಿತಿಗಳಿಗೆ ಶಿಕಾರಿಪುರ ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಕೊಟ್ಟ ಹೆಸರನ್ನು ಪರಿಗಣಿಸಲು ಸೂಚಿಸಿದ್ದಾರೆ. ಇಂಥ ಕೆಲಸ ಬೇರೆ ಕಡೆಯೂ ನಡೆಯುತ್ತಿದೆ. ಈ ಸಂಬಂಧ ಸದನದಲ್ಲಿ ಹಕ್ಕುಚ್ಯುತಿಯನ್ನು ಮಂಡಿಸಲಿದ್ದೇವೆ ಎಂದು ತಿಳಿಸಿದರು. ಸಚಿವರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕೆಲಸ ಆಗುತ್ತಿದೆ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರ ಹೆಸರಲ್ಲಿ ಬಿಜೆಪಿ ಅಧಿಕ ಪ್ರಸಂಗ
ಬಿಜೆಪಿಗರಿಗೆ ಮಾತ್ರ ಸುಲಭವಾಗಿ ಸಿಗುವ ರಾಜ್ಯಪಾಲರು!
ಸರ್ಕಾರದ ವಿರುದ್ಧ ಬಿಜೆಪಿ ಏನೇ ಆರೋಪ ಮಾಡಿದರೂ ನಂತರದ ದೂರು ಅದು ರಾಜ್ಯಪಾಲರಿಗೆ ಇರುತ್ತದೆ. ಬಿಜೆಪಿಯ ಪ್ರತೀ ಪ್ರತಿಭಟನೆಗಳು ಒಂದು ರೀತಿಯಲ್ಲಿ ದಾಖಲಾತಿ ತರ ರಾಜಭವನ ಸೇರುತ್ತಿವೆ. ಮುಡಾ ಹಗಣರಣದಲ್ಲಿ ಸಿಎಂ ಕುಟುಂಬದ ವಿರುದ್ಧ ಆರೋಪ ಮಾಡಿದ್ದ ಮೈಸೂರಿನ ಸ್ನೇಹಮಯಿ ಕೃಷ್ಣ ಸಹ ಸಾಕಷ್ಟು ಸಲ ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಿದ್ದಿದೆ.
ಆಡಳಿತ ಪಕ್ಷದ ಸದಸ್ಯರಿಗೆ ಅಷ್ಟು ಸುಲಭವಾಗಿ ಸಿಗದ ರಾಜ್ಯಪಾಲರು ಪ್ರತಿಪಕ್ಷಗಳ ನಾಯಕರಿಗೆ ಹೇಗೆ ಸಿಗುತ್ತಾರೆ? ವಾಸ್ತವ ಸ್ಪಷ್ಟವಿದೆ. ಸಂವಿಧಾನದತ್ತವಾಗಿ ರಾಷ್ಟ್ರಪತಿಯವರಿಂದ ನೇಮಕವಾಗುವ ರಾಜ್ಯಪಾಲರು ಬಹುತೇಕ ಕೇಂದ್ರ ಸರ್ಕಾರದ ಕೈಗೊಂಬೆ ಎಂಬುದು ಪದೇ ಪದೆ ಸಾಬೀತಾದ ಸಂಗತಿ. ‘ಯಾವುದಾದರೂ ಕ್ಷೇತ್ರವೊಂದರಲ್ಲಿ ಪ್ರಖ್ಯಾತರಾದವರನ್ನು, ಸಕ್ರಿಯ ರಾಜಕೀಯದಿಂದ ದೂರ ಇರುವವರನ್ನು ರಾಜ್ಯಪಾಲರನ್ನಾಗಿ ನೇಮಿಸಬೇಕು’ ಎಂದು 1988ರಲ್ಲಿ ಸಲ್ಲಿಕೆಯಾದ ಸಾರ್ಕರಿಯಾ ಆಯೋಗದ ವರದಿ ಸೂಚಿಸಿತ್ತು. ಆದರೆ ಈವರೆಗೆ ನೇಮಕವಾದ ಬಹುತೇಕರು ರಾಜಕಾರಣದ ಭಾಗವೇ ಆಗಿದ್ದಾರೆ. ಅವರೆಲ್ಲ ಕೇಂದ್ರ ಸರ್ಕಾರದ ಅಣತಿಯಂತೆ ನಡೆದುಕೊಳ್ಳುತ್ತ ಬರುತ್ತಿದ್ದಾರೆ.
ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಎಲ್ಲ ಅಸ್ತ್ರಗಳನ್ನು ಅಶಕ್ತವಾಗಿ ಬಳಸುವ ಕಲೆಯನ್ನು ಸಿದ್ಧಿಸಿಕೊಂಡಿದೆ ಕೇಂದ್ರ ಬಿಜೆಪಿ ಸರ್ಕಾರ. ಆ ಅಸ್ತ್ರಗಳಲ್ಲಿ ಜಾರಿ ನಿರ್ದೇಶನಾಲಯ, ಸಿಬಿಐ ಜೊತೆಗೆ ‘ರಾಜ್ಯಪಾಲ’ ಹುದ್ದೆ ಎಂಬ ಬತ್ತಳಿಕೆಯೂ ಸೇರಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಿರಿಂದ ಸಹಜವಾಗಿಯೇ ರಾಜಭವನ ಪ್ರತಿಪಕ್ಷವಾದ ಬಿಜೆಪಿ ಕಡೆಯೇ ಹೆಚ್ಚು ವಾಲುತ್ತದೆ. ಬಿಜೆಪಿಯವರು ಪ್ರತಿಭಟನೆ ಮಾಡುವುದು ಕೇವಲ ಪ್ರಚಾರದ ಗಿಮಿಕ್ ಅಷ್ಟೇ ಆಗಿದ್ದರೂ ಇತ್ತೀಚೆಗೆ ರಾಜ್ಯಪಾಲರಿಗೆ ದೂರು ನೀಡುವುದು ಒಂದು ರೀತಿಯಲ್ಲಿ ಸಂಪ್ರದಾಯ ತರ ಮಾಡಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ ರಾಜಭವನ ಎಂಬುದು ಬಿಜೆಪಿ ಪತ್ರಗಳ ಸ್ವೀಕರಿಸುವ ಪೋಸ್ಟ್ ಆಫೀಸ್ ತರ ಆಗಿ ಹೋಗಿದೆ.