ಮಾರ್ಚ್ 18ರಂದು ಹೋಳಿ ಅಂಗವಾಗಿ ರಂಗಪಂಚಮಿ ಆಚರಣೆಯಿದ್ದು, ಆ ದಿವಸ ಬೆಳಿಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ಹುಬ್ಬಳ್ಳಿಯಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ನಗರದ ಕಾಳಮ್ಮನ ಅಗಸಿಯಿಂದ ಡಾಕಪ್ಪ ವೃತ್ತದವರೆಗೆ, ಡಾಕಪ್ಪ ವೃತ್ತದಿಂದ ಕೌಲ್ಪೇಟೆ ಕ್ರಾಸ್ವರೆಗೆ, ಡಾಕಪ್ಪ ವೃತ್ತದಿಂದ ಹಳೇ ಕೆಇಬಿ ಕಚೇರಿವರೆಗಿನ ಪ್ರದೇಶವನ್ನು ಅತಿಸೂಕ್ಷ್ಮಸ್ಥಳವೆಂದು ಗುರುತಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಈ ಮಾರ್ಗದಲ್ಲಿ ಮೆರವಣಿಗೆ, ಬೈಕ್ ರ್ಯಾಲಿ, ವಾಹನಗಳಲ್ಲಿ ಧ್ವನಿವರ್ಧಕ ಬಳಸುವುದು, ಬ್ಯಾನರ್, ಬಂಟಿಂಗ್ಸ್ ಉಪಯೋಗಿಸುವುದು, ಸಭೆ, ಸಮಾರಂಭ ಹಾಗೂ ಐದಕ್ಕಿಂತ ಹೆಚ್ಚು ಮಂದಿ ಸೇರುವುದನ್ನು ನಿಷೇಧ ಮಾಡಿದ್ದಾರೆ. ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದನ್ನು ನಿರ್ಬಂಧಿಸಲಾಗಿದ್ದು, ಪ್ರಚೋದನಕಾರಿ ಹಾಡು, ಕೂಗಾಟಕ್ಕೆ ಸಂಪೂರ್ಣ ನಿರ್ಬಂಧ ಹೇರಿದ್ದಾರೆ. ಬೇರೆ ಧರ್ಮಿಯರಿಗೆ ಅವರ ಅನುಮತಿಯಿಲ್ಲದೆ ಬಣ್ಣ ಹಚ್ಚಬಾರದು ಎಂದು ಪೊಲೀಸ್ ಆಯುಕ್ತರು ಆದೇಶದಲ್ಲಿ ಸೂಚಿಸಿದ್ದಾರೆ.