ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸ್ ಇಲಾಖೆಯ ಎಎಸ್ಐ ಸೇರಿ ನಾಲ್ಕು ಜನ ಆರೋಪಿಗಳನ್ನು ರಾಯಚೂರು ಪಶ್ಚಿಮ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಡಿಎಆರ್ ಎಎಸ್ಐ ಮರಿಲಿಂಗ, ಸದ್ದಾಂ, ಸಿದ್ದಲಿಂಗಪ್ಪ ಹಾಗೂ ರವಿ ಬಂಧಿತ ಆರೋಪಿಗಳು.
ರಾಯಚೂರು ಗಡಿಭಾಗದ ಗ್ರಾಮಗಳಲ್ಲಿ ಹಾಗೂ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಖೋಟಾ ನೋಟುಗಳ ಚಲಾವಣೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿತ್ತು. ಗಡಿಭಾಗದ ಅನೇಕ ಪೆಟ್ರೋಲ್ ಬಂಕ್ ಗಳಲ್ಲಿ ನಕಲಿ ನೋಟುಗಳು ಪತ್ತೆಯಾಗಿತ್ತು. ಇದರ ಜಾಡು ಹಿಡಿದು ಎಸ್ ಪಿ ಪುಟ್ಟಮಾದಯ್ಯ ನೇತೃತ್ವದ ಪೊಲೀಸರ ತಂಡ ಸಕ್ರಿಯವಾಗಿ ತನಿಖೆ ನಡೆಸುತ್ತಿತ್ತು.
ಪರಿಣಾಮ ಇಂದು ಆಶಾಪುರ ರಸ್ತೆಯ ಆರೋಪಿ ಸದ್ದಾಂ ಮನೆಯಲ್ಲಿ ನಕಲಿ ನೋಟುಗಳ ಸಮೇತ ನಾಲ್ವರನ್ನು ಪಶ್ಚಿಮ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ರಾಯಚೂರು| ಹಳೆ ದ್ವೇಷ ಹಿನ್ನೆಲೆ; ನಡು ರಸ್ತೆಯಲ್ಲಿ ವ್ಯಕ್ತಿಯ ಕೊಲೆ
ಬಂಧಿತರಲ್ಲಿ ಮೂವರು ಟ್ರಾನ್ಸ್ ಪೋರ್ಟ್ ನಲ್ಲಿ ಚಾಲಕ, ಕ್ಲೀನರ್ ಹಾಗೂ ಲಾರಿ ಮಾಲಿಕರಾಗಿದ್ದು ಆಂಧ್ರಪ್ರದೇಶದಿಂದ ನಕಲಿ ನೋಟುಗಳನ್ನು ಪಡೆದು ಜಿಲ್ಲೆಯಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದರು. ನಕಲಿ ನೋಟುಗಳನ್ನು ಪಡೆದು 1 ಸಾವಿರ ರೂಪಾಯಿಗೆ 3 ಸಾವಿರ ಪಡೆದು ಮನಿ ಡಬ್ಲಿಂಗ್ ಮಾಡುತ್ತಿದ್ದರು. ಆರೋಪಿಗಳು ನಕಲಿ ನೋಟಿನ ದಂಧೆ ಶುರು ಮಾಡಿದ ಮೊದಲನೇ ದಿನವೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
