ಕೋಲಾರದ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್ ಕೊಲೆ ಪ್ರಕರಣದ ತನಿಖೆಯನ್ನು ಕರ್ನಾಟಕ ಹೈಕೋರ್ಟ್ ಸಿಬಿಐಗೆ ನೀಡಿದೆ.
ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರ ಆಪ್ತರಾಗಿದ್ದ ಎಂ ಶ್ರೀನಿವಾಸ್ ಅವರನ್ನು 2023 ಅಕ್ಟೋಬರ್ 23ರಂದು ಶ್ರೀನಿವಾಸಪುರ ಹೊರವಲಯದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದರು.
ಶ್ರೀನಿವಾಸ್ ಅವರ ಪತ್ನಿ ಡಾ. ಎಸ್. ಚಂದ್ರಕಲಾ ಅವರು ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಹೈಕೋರ್ಟ್ಗೆ ಮನವಿ ಮಾಡಿದ್ದರು. ಇದೀಗ ಚಂದ್ರಕಲಾ ಅವರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಪ್ರಕರಣವನ್ನು ಸಿಬಿಐಗೆ ವಹಿಸಿ, ಸೋಮವಾರ (ಮಾ.17) ಮಹತ್ವದ ತೀರ್ಪು ನೀಡಿದೆ.
ವೈಯಕ್ತಿಕ ದ್ವೇಷದಿಂದ ಕೊಲೆಯಾಗಿದೆಯಾ? ಪರಿಚಯಸ್ಥರು ಕೊಲೆ ಮಅಡಿಸಿದ್ದಾರಾ? ಅಥವಾ ರಾಜಕೀಯ ದ್ವೇಷ ಅಡಗಿದೆಯಾ ಎಂಬುದು ಅನುಮಾನವಿದೆ. ಸ್ಥಳೀಯ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳು ಸಮರ್ಪಕ ತನಿಖೆ ನಡೆಸಿಲ್ಲ. ಸಿಬಿಐ ತನಿಖೆ ಅನಿವಾರ್ಯವೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಮೂರು ತಿಂಗಳಿನಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸಿಬಿಐಗೆ ಸೂಚನೆ ನೀಡಿದೆ. ಇನ್ನು ಸಿಬಿಐ ತನಿಖೆಗೆ ಸಹಕರಿಸುವಂತೆ ಪೊಲೀಸರಿಗೂ ಸಹ ಕೋರ್ಟ್ ಸೂಚಿಸಿದೆ.