- ‘ಹೆಣದ ಮೇಲೆ ರಾಜಕಾರಣ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದರು’
- ‘ಜನರ ಬಳಿ ಕ್ಷಮೆ ಕೇಳಿ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲಿ’
ತಮ್ಮ ಪಕ್ಷದ ನಾಯಕನ ಕೈಯಿಂದಲೇ ಕೊಲೆಯಾದ ಪೊಲೀಸ್ ಪೇದೆಯ ಕುಟುಂಬಕ್ಕೆ ಬಿಜೆಪಿ ನಾಯಕರು ಕ್ಷಮೆ ಕೇಳೋದಿರಲಿ, ಅತ್ತ ಕಡೆ ತಲೆ ಹಾಕಿಯೂ ಮಲಗಿಲ್ಲ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ರಾಜ್ಯ ಬಿಜೆಪಿ ನಾಯಕರು ಕೊಲೆಗಾರನ ರಾಜಕೀಯ ಹಿನ್ನಲೆ ಪತ್ತೆಯಾಗುವವರೆಗೆ ಮತ್ತೆ ಹೆಣದ ಮೇಲೆ ರಾಜಕಾರಣ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ ಕೊಲೆಗಾರ ಬಿಜೆಪಿಯವನೇ ಎಂದು ಗೊತ್ತಾದ ತಕ್ಷಣ ಇವರೆಲ್ಲರ ಬಾಯಿಗೆ ಬೀಗ ಬಿದ್ದಿದೆ” ಎಂದು ಕುಟುಕಿದ್ದಾರೆ.
“ಕಲಬುರಗಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್ ಹಾಕುವ ಕಾರ್ಯಾಚರಣೆ ವ್ಯಾಪಕವಾಗಿ ನಡೆಸಲಾಗಿದೆ. ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ, ಅಕ್ರಮ ದಂಧೆಗಳ ಮೂಲಕ ಹಣ ಸಂಪಾದಿಸಿ ಚುನಾವಣೆ ನಡೆಸುವ ಬಿಜೆಪಿ ಪಕ್ಷದ ನಾಯಕರಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿರಬೇಕು. ಆದ್ದರಿಂದ ಈ ಅಕ್ರಮ ನಿಯಂತ್ರಣ ಮಾಡಲು ಮುಂದಾಗಿದ್ದ, ನದಿಯಿಂದ ಅಕ್ರಮವಾಗಿ ಮರಳು ಸಾಗಿಸುವ ವೇಳೆ ಅದನ್ನು ತಡೆಯಲು ಬಂದ ಕರ್ತವ್ಯನಿರತ ಪೊಲೀಸ್ ಪೇದೆಯ ಮೇಲೆ ನೇರವಾಗಿ ಟ್ರಾಕ್ಟರ್ ಹತ್ತಿಸಿ ಕೊಲೆ ಮಾಡಲಾಗಿದೆ” ಎಂದು ಆರೋಪಿಸಿದರು.
“ಹೀಗೆ ಕೊಂದವರ ಬೆನ್ನು ಬಿದ್ದ ಪೋಲೀಸ್ ಇಲಾಖೆ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಪರಾರಿಯಾಗಿದ್ದ ಇನ್ನೊಬ್ಬ ಆರೋಪಿಯನ್ನ ಹಿಡಿದು ತರುವಾಗ ಆತ ಪೊಲೀಸ್ ಪೇದೆಗೆ ಚಾಕುವಿನಿಂದ ಹಲ್ಲೆ ಮಾಡಿ ಮತ್ತೆ ಪರಾರಿಯಾಗಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿ ನ್ಯಾಯಾಂಗ ಪ್ರಕ್ರಿಯೆ ಶುರು ಮಾಡಲಾಗಿದೆ. ತನಿಖೆ ವೇಳೆ ಈ ಕೊಲೆ ಆರೋಪಿ ಅಫಜಲ್ಪುರ ಬಿಜೆಪಿ ಮುಖಂಡನಾಗಿರುವುದು, ಚುನಾವಣೆಯಲ್ಲಿ ಹಲವಾರು ಬಿಜೆಪಿ ಅಭ್ಯರ್ಥಿಗಳು ಹಾಗೂ ನಾಯಕರೊಂದಿಗೆ ಕೆಲಸ ಮಾಡಿದ್ದು ಕಂಡುಬಂದಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಕ್ಕಿ ಕೊಡದಿರುವ ನೀಚ ಬುದ್ಧಿ ನಮಗಿಲ್ಲ: ಡಿ ವಿ ಸದಾಂದಗೌಡ ತಿರುಗೇಟು
“ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಚಿವ ಆರ್ ಅಶೋಕ್, ಮಾಜಿ ಸಚಿವ ಆರಗ ಜ್ಞಾನೇಂದ್ರರವರೇ, ಈಗ ನಿಮ್ಮದೇ ಪಕ್ಷದ ಅಭ್ಯರ್ಥಿ, ನಿಮ್ಮ ಎಂಎಲ್ಸಿ ಪುತ್ರ, ಬಿಜೆಪಿ ಜಿಲ್ಲಾಧ್ಯಕ್ಷರೆಲ್ಲಾ ಈ ಕೊಲೆಗಾರನ ಪರವಾಗಿ ಮಾತನಾಡುತ್ತಿದ್ದಾರೆ. ಇವರಿಗೆ ಏನ್ ಹೇಳ್ತೀರಾ? ನಿಮ್ಮ ಪಕ್ಷದ ಮುಖಂಡನಿಂದ ಸರ್ಕಾರಿ ನೌಕರನ ಕೊಲೆಯಾಗಿರುವಾಗ ಅವರ ಕುಟುಂಬಕ್ಕೇ ಕ್ಷಮೆ ಕೇಳುವ ಮಾನವೀಯತೆ ಕೂಡ ನಿಮ್ಮಲ್ಲಿ ಕೊರತೆಯಾಯಿತೇ” ಎಂದು ಪ್ರಶ್ನಿಸಿದ್ದಾರೆ.
“ಬಿಜೆಪಿಯ ದುರಹಂಕಾರ, ಜನವಿರೋಧಿ ಹೇಳಿಕೆಗಳಿಂದ, ಈಗಾಗಲೇ ರಾಜ್ಯದ ಜನರು ಅವರನ್ನು 63 ಮತ್ತೊಂದಕ್ಕೆ ತಂದು ನಿಲ್ಲಿಸಿದ್ದಾರೆ. ಇದರಿಂದ ಇನ್ನೂ ಪಾಠ ಕಲಿಯಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ 6 ಮತ್ತೆ 3 ಕ್ಕೆ ಜನ ತಂದುಬಿಡಬಹುದೇನೋ. ತಮ್ಮಿಂದಾಗಿರುವ ತಪ್ಪುಗಳಿಗೆ ಬಿಜೆಪಿ ನಾಯಕರು ಜನರ ಬಳಿ ಕ್ಷಮೆ ಕೇಳಿ ಪಾಪ ಪ್ರಾಯಶ್ಚಿತ ಮಾಡಿಕೊಂಡು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲಿ” ಎಂದು ಆಗ್ರಹಿಸಿದ್ದಾರೆ.
“ಮೃತ ಪೊಲೀಸ್ ಪೇದೆಯ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡುತ್ತಿರುವುದಲ್ಲದೇ, ಕಾಂಗ್ರೆಸ್ ಪಕ್ಷದ ನಾಯಕರ ನಿಯೋಗದೊಂದಿಗೆ ನಾನೇ ಭೇಟಿ ಮಾಡಿ ಪಕ್ಷದ ವತಿಯಿಂದಲೂ ಪರಿಹಾರ ನೀಡಿದ್ದೇನೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಮರೀಚಿಕೆಯಾಗಿತ್ತು. ಪೊಲೀಸ್ ಅಧಿಕಾರಗಳ ಬರ್ತಡೇ ಪಾರ್ಟಿ ಆಯೋಜನೆ ಉಸ್ತುವಾರಿ ರೌಡಿಶೀಟರ್ ನೋಡಿಕೊಳ್ಳುವಂತಹ ಹೀನಾಯ ಪರಿಸ್ಥಿತಿಗೆ ನಮ್ಮ ಜಿಲ್ಲೆ ತಳ್ಳಲ್ಪಟ್ಟಿತ್ತು. ಬಿಜೆಪಿ ಸರ್ಕಾರದಲ್ಲಿ ಕಲಬುರ್ಗಿ ಜಿಲ್ಲೆಯನ್ನು ಅಕ್ರಮ ದಂಧೆಕೋರರ ಸುರಕ್ಷಿತ ತಾಣವಾಗಿಸಿ ಜಿಲ್ಲೆಯ ಹೆಸರನ್ನು ಮಣ್ಣು ಪಾಲು ಮಾಡಲಾಗಿತ್ತು. ಅದನ್ನಿಂದು ಬದಲಾಯಿಸುವ ಕೆಲಸ, ಕಾನೂನಿನ ಮೇಲೆ ಜನರಲ್ಲಿ ನಂಬಿಕೆ ಮೂಡಿಸುವ ಕೆಲಸಕ್ಕೆ ನಮ್ಮ ಸರ್ಕಾರ ಮುಂದಾಗಿದೆ” ಎಂದು ತಿಳಿಸಿದ್ದಾರೆ.