ಉಡುಪಿಯ ಮಲ್ಪೆಯಲ್ಲಿ ಬಂಜಾರ ಸಮುದಾಯದ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಅಮಾನವೀಯ ಕೃತ್ಯವನ್ನು ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘ ತೀವ್ರವಾಗಿ ಖಂಡಿಸಿದೆ.
ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ಅಧ್ಯಕ್ಷ ಗಿರೀಶ್ ಡಿ ಆರ್, “ಇವತ್ತು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ.. ನಾಳೆ ಸಾಯಿಸಿ ಸಮುದ್ರಕ್ಕೆ ಎಸೆಯಬಹುದು. ಪರಿಶಿಷ್ಟ ಜಾತಿ ಸಮುದಾಯಗಳ ಮೇಲೆ ಈ ರೀತಿ ಶೋಷಣೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗದೇ ಇರುವುದು ವ್ಯವಸ್ಥೆಯ ವೈಫಲ್ಯ” ಎಂದರು.
ಇದೇ ವೇಳೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಸಂಘದ ವತಿಯಿಂದ ಈ ಕೆಳಗಿನಂತೆ ಹಕ್ಕೊತ್ತಾಯ ಮನವಿ ಸಲ್ಲಿಸಲಾಯಿತು.
1. ಕೇವಲ ಮೀನು ಕದ್ದ ಆರೋಪದಡಿಯಲ್ಲಿ ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಹಾಕಿ ಥಳಿಸಿ, ಜಾತಿನಿಂದನೆ ಮಾಡಿರುವುದು ಖಂಡನೀಯ. ಪ್ರಕರಣದಲ್ಲಿ ಪೊಲೀಸರು ಈವರೆಗೆ ಐದು ಜನರನ್ನು ಮಾತ್ರ ಬಂಧಿಸಿದ್ದು, ಇನ್ನು ಸಾಕಷ್ಟು ಜನರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಇಲಾಖೆ ಮತ್ತೊಮ್ಮೆ ಪಾರದರ್ಶಕ ತನಿಖೆ ಮಾಡಿ ಕೃತ್ಯದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ ಕಾನೂನು ಶಿಕ್ಷೆ ವಿಧಿಸಬೇಕು.
2. ಪ್ರಕರಣ ಸಂಬಂಧ ಮೀನುಗಾರಿಕಾ ಸಂಘದ ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು “ತಪ್ಪು ಮಾಡಿದ ಮಹಿಳೆಯನ್ನು ಹೊಡೆದರೆ ತಪ್ಪೇನು?ಆಕೆಯನ್ನು ಮರಕ್ಕೆ ಕಟ್ಟಿ ಹಾಕಿದ್ದು ಸರಿ, ಕಟ್ಟಿ ಹಾಕಲೇಬೇಕು’ ಎಂದು ಕೃತ್ಯವನ್ನು ಸಮರ್ಥನೆ ಮಾಡಿ ಮಹಿಳೆಯನ್ನು ನಿಂದಿಸುವ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಸದರಿ ಸಂಬಂಧಿಸಿದಂತೆ ಪ್ರಮೋದ್ ಮಧ್ವರಾಜ್ ಅವರು ಕೂಡಲೇ ಕ್ಷಮೆಯಾಚಿಸಬೇಕು.
3. ಪ್ರಕರಣದ ಸತ್ಯಾಸತ್ಯತೆಯ ವಿಡಿಯೋ ರಾಜ್ಯದಲ್ಲೆಡೆ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಕೃತ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿ ‘ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ನಿಂದನೆ ಕೇಸ್ ‘ ಅನ್ವಯವಾಗುವುದಿಲ್ಲ ಎಂದು ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದು, ಅವರ ಹೇಳಿಕೆ ಕಾನೂನು ವಿರೋಧಿಯಾಗಿದ್ದು, ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು.
4. ಸಾರ್ವಜನಿಕವಾಗಿ ಥಳಿತ, ನಿಂದನೆ ಹಾಗೂ ಅಪಮಾನಕ್ಕೆ ಒಳಗಾದ ಸಂತ್ರಸ್ತ ಮಹಿಳೆಗೆ “ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ತಡೆ ಕಾಯ್ದೆ 1989 ಅಡಿ ನೀಡಲಾಗುವ ಪರಿಹಾರವನ್ನು ಕೂಡಲೇ ಒದಗಿಸಬೇಕು.
5. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯ ವಿರುದ್ಧವಾಗಿ ರಾಜಕೀಯ ಪ್ರೇರಿತವಾಗಿ ಮನಸೋ ಇಚ್ಛೆ ಹೇಳಿಕೆ ನೀಡುವರ ವಿರುದ್ಧ ಪೋಲಿಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಬೇಕು.
6. ಪ್ರಕರಣದ ತೀವ್ರತೆಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಕೃತ್ಯ ನಡೆದ ಸ್ಥಳದಲ್ಲಿ ಕೂಡಲೇ “ಶಾಂತಿ ಸಭೆ” ಆಯೋಜಿಸಿ ಎಲ್ಲರ ಮಧ್ಯೆ ಸೌಹಾರ್ದತೆಯನ್ನು ತರುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.
7. ನಾಗರೀಕ ಸಮುದಾಯ ತಲೆತಗ್ಗಿಸುವನಂತಹ ಅಮಾನವೀಯ ಕೃತ್ಯಗಳು ಜರುಗದಂತೆ ಪೊಲೀಸ್ ಇಲಾಖೆ ಕ್ರಮ ವಹಿಸಬೇಕು ಹಾಗೂ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಹೊರ ಊರಿನ ಪರಿಶಿಷ್ಟರಿಗೆ ಸೂಕ್ತ ರಕ್ಷಣೆ ನೀಡಬೇಕು.
ಸುದ್ದಿಗೋಷ್ಠಿಯಲ್ಲಿ ಪುಷ್ಠಾ ಬಾಯಿ, ಮಂಜುನಾಯ್ಕ್, ಮಂಜುನಾಥ್ , ಸುನೀಲ್ ನಾಯ್ಕ್, ಕುಮಾರ್ ನಾಯ್ಕ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಉಡುಪಿ | ದೇವನ ಸಾಮಿಪ್ಯ ಗಳಿಸಲು ಇರುವ ದಾರಿಯೇ ಉಪವಾಸ – ಶಬ್ಬಿರ್ ಮಲ್ಪೆ