ಎಸ್ಎನ್ಡಿಪಿ ಸಂಯುಕ್ತ ಸಮರ ಸಮಿತಿಯ ಸದಸ್ಯರು ಮೇಲಂಗಿ ಧರಿಸಿ ಪಟ್ಟಣಂತಿಟ್ಟ ಜಿಲ್ಲೆಯ ಪೆರುನಾಡ್ನಲ್ಲಿರುವ ಕಕ್ಕತ್ ಕೋಯಿಕಲ್ ಶ್ರೀ ಧರ್ಮಶಾಸ್ತ ದೇವಸ್ಥಾನದಲ್ಲಿ ತೆರಳಿ ದರ್ಶನೆ ಪಡೆದರು.
ಮಾರ್ಚ್ 23ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ SNDP ಸಮಿತಿಯ ಅಡಿಯಲ್ಲಿ ಒಂದು ಗುಂಪು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಡಿಯಲ್ಲಿ ಬರುವ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಪುರುಷ ಭಕ್ತರ ಮೇಲಂಗಿ ತೆಗೆಯುವ ಅನಿಷ್ಟ ಪದ್ಧತಿ ಕೈಬಿಡಲು ನಿರ್ಧಾರ: ಕೇರಳ ಸಿಎಂ
ಇರಿಂಜಲಕುಡ ಕೂಡಲ್ಮಾಣಿಕ್ಯಂ ದೇವಾಲಯದ ಘಟನೆಯನ್ನು ಖಂಡಿಸಿ ಈ ಶಾಂತಿಯುತ ಪ್ರತಿಭಟನೆ ನಡೆಸಲಾಗಿದೆ. ಹಾಗೆಯೇ ಶಿವಗಿರಿ ಮಠದ ಅಧ್ಯಕ್ಷ ಸ್ವಾಮಿ ಸಚ್ಚಿದಾನಂದ ಅವರ ಹೇಳಿಕೆಯನ್ನು ಬೆಂಬಲಿಸಿ ಈ ಪ್ರತಿಭಟನೆ ನಡೆಸಲಾಗಿದೆ. ಇನ್ನು ಮೇಲಂಗಿ ಪದ್ಧತಿಯನ್ನು ಕೊನೆಗೊಳಿಸಬೇಕು ಎಂಬ ಸ್ವಾಮಿ ಸಚ್ಚಿದಾನಂದ ಅವರ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ಬೆಂಬಲಿಸಿದ್ದಾರೆ.
ಇರಿಂಜಲಕ್ಕುಡದ ಕೂಡಲ್ಮಾಣಿಕ್ಯಂ ದೇವಾಲಯದಲ್ಲಿ ಕೆಳ ಜಾತಿ ಎಂದು ಕರೆಸಿಕೊಳ್ಳುವ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಕಜಕಂ ಅಂದರೆ ದೇವರಿಗೆ ಹೂವಿನ ವಸ್ತ್ರಗಳನ್ನು ತಯಾರಿಸಲು ಮತ್ತು ಆಚರಣೆಗಳ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಲಾಗಿತ್ತು. ಅದಾದ ಬಳಿಕ ದೇವಾಲಯದ ಅರ್ಚಕರು ಎಲ್ಲಾ ಆಚರಣೆಗಳಿಂದ ದೂರವಿರಲು ನಿರ್ಧರಿಸಿದ್ದರು.
ಇನ್ನು ಈ ಪ್ರತಿಭಟನೆ ವೇಳೆ ಪೊಲೀಸರು ಸ್ಥಳದಲ್ಲಿದ್ದರೂ ಮಧ್ಯಪ್ರವೇಶಿಸಿಲ್ಲ. “ಪ್ರತಿಭಟನೆ ಶಾಂತಿಯುತವಾಗಿ ನಡೆಸಲಾಗಿದೆ. ಅಂಗಿ ತೆಗೆಯದೆ ದೇವಸ್ಥಾನ ಪ್ರವೇಶಿಸಿದರೆ ಆಕ್ಷೇಪವಿಲ್ಲ ಎಂದು ಆಡಳಿತ ಮಂಡಳಿ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ಭಕ್ತರು ಅಂಗಿ ತೆಗೆಯುವ ಪದ್ಧತಿ ಇನ್ನೂ ಪಾಲಿಸುತ್ತಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅಂಗಿ ಕಳಚಿ ಎಂದರು, ನಾನು ದೇಗುಲದ ಒಳಗೆ ಕಾಲಿಡಲಿಲ್ಲ: ಕೇರಳ ಘಟನೆ ಮೆಲುಕು ಹಾಕಿದ ಸಿದ್ದರಾಮಯ್ಯ
“ದೇವಸ್ವಂ ಮಂಡಳಿಯು SNDP ಬಗ್ಗೆ ತಾರತಮ್ಯ ತೋರುತ್ತಿದೆ. ರಾಜ್ಯದ ಶೇ.65ರಷ್ಟು ಭಾಗವನ್ನು ಒಳಗೊಂಡಿರುವ SNDPಯ ಹಣ ಅಗತ್ಯವಿದೆ. ಹುದ್ದೆಯನ್ನು ಒಬ್ಬರಿಗೆ ಹಂಚಿದಾಗ ಅದನ್ನು ವಿರೋಧಿಸುವುದು ಸರಿಯಲ್ಲ. ನಾವು ಅಂತಹ ವಿರೋಧಿಗಳ ವಿರುದ್ಧ ಪ್ರತಿಭಟಿಸುತ್ತೇವೆ. ಅಂತಹ ತಾರತಮ್ಯದ ವಿರುದ್ಧ ಭಕ್ತರು ಬೃಹತ್ ಆಂದೋಲನವನ್ನು ನಡೆಸುತ್ತಿದ್ದಾರೆ” ಎಂದು ನಾಯಕ ವಿ.ಕೆ. ವಾಸುದೇವನ್ ಹೇಳಿದ್ದಾರೆ.
‘ದೇವರ ಸ್ವಂತ ನಾಡು’ ಎಂದೇ ಕರೆಯುವ ಕೇರಳದಲ್ಲಿ ಹಲವು ಮೌಡ್ಯ ಪದ್ಧತಿಗಳನ್ನು ಅನುಸರಿಸಲಾಗುತ್ತಿದೆ. ವರ್ಷಗಳು ಕಳೆದಂತೆ ಕೆಲವು ಪದ್ಧತಿಗಳನ್ನು ಯುವಕರು ಕೈಬಿಟ್ಟಿದ್ದರೂ ಇನ್ನೂ ಹಲವು ಮೂಢತನದ ಪದ್ಧತಿಗಳು ಚಾಲ್ತಿಯಲ್ಲಿದೆ. ಇಂದಿಗೂ ಹಲವು ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ದೇವಾಲಯದ ಇತರೆ ಕಾರ್ಯಗಳನ್ನು ಮಾಡಲು ದಲಿತರು ಮಾತ್ರವಲ್ಲ ಇತರೆ ಜಾತಿಗಳಿಗೂ ಅವಕಾಶವಿಲ್ಲ. ಆದರೆ ದೇವಾಲಯದ ಆಚರಣೆಗಳನ್ನು ನಿರ್ವಹಿಸುವ ‘ಕಜಕಂ’ ಎಂಬ ಸ್ಥಾನಕ್ಕೆ ಕೇರಳ ಲೋಕ ಸೇವಾ ಆಯೋಗ (PSC) ಕೆಳ ಜಾತಿ ಎಂದು ಕರೆಯಲಾಗುವ ಜಾತಿಗೆ ಸೇರಿದ ವ್ಯಕ್ತಿಯನ್ನು ನೇಮಿಸಿದೆ. ಜಾತಿ ವ್ಯವಸ್ಥೆಗೆ ಪೆಟ್ಟು ನೀಡುವ ಕೇರಳದ ಈ ನಿರ್ಧಾರ ಶ್ಲಾಘನೀಯ.
ಬಹುತೇಕ ದೇವಾಲಯಗಳಲ್ಲಿ ಪುರುಷರು ಮೇಲಂಗಿ ಧರಿಸದೆ ಪ್ರವೇಶಿಸಬೇಕು. ಈ ಹಿಂದೆ ಬ್ರಾಹ್ಮಣೇತರರು ಯಾರು ಎಂದು ಪತ್ತೆ ಹಚ್ಚಲೆಂದೇ ಈ ಪದ್ಧತಿ ಆರಂಭಿಸಲಾಗಿದೆ ಎಂಬ ವಾದವಿದೆ. ಜಾತಿ ತಾರತಮ್ಯವನ್ನು ಎತ್ತಿ ಹಿಡಿಯುವ ಈ ಪದ್ಧತಿಯನ್ನು ಕ್ರಮೇಣವಾಗಿ ಕೊನೆಗೊಳಿಸಲಾಗುತ್ತಿದೆ.
