ಆರು ಎಕರೆ ಜಮೀನು ಇದ್ದರೂ, ಆಸ್ತಿ ವಿಷಯದಲ್ಲಿ ತನ್ನದೇ ಹೆಣ್ಣುಮಕ್ಕಳ ಕಾಟ ತಾಳಲಾರದೆ ಮನೆ ಬಿಟ್ಟು ಬಂದು ಉಡುಪಿಯ ಸರಕಾರಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಶಿವಮೊಗ್ಗ ಜಿಲ್ಲೆಯ ನಗರದ ನಿವಾಸಿ ಜಯಮ್ಮ (80) ಹಾಗೂ ಆಕೆಯ ಮಗ ಮಂಜುನಾಥ ಎಂಬವರನ್ನು ಸಮಾಜ ಸೇವಕ ವಿಶು ಶೆಟ್ಟಿಯವರು ರಕ್ಷಿಸಿದ್ದಾರೆ.
ವೃದ್ಧೆ ಜಯಮ್ಮ ಅವರನ್ನು ಕೊಳಲಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಿಸಲಾಗಿದ್ದು, ಅನಾರೋಗ್ಯ ಪೀಡಿತ ಮಂಜುನಾಥನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಜಯಮ್ಮ ಅವರ ಗಂಡ ಕೊರೊನಾ ಸಂದರ್ಭದಲ್ಲಿ ತೀರಿಕೊಂಡಿದ್ದು, ನಂತರ ಆಸ್ತಿ ವಿಚಾರದಲ್ಲಿ ಈಕೆಯ ನಾಲ್ಕು ಮಂದಿ ಹೆಣ್ಮಕ್ಕಳು ಇನ್ನಿಲ್ಲದ ತಗಾದೆ ತೆಗೆದಿದ್ದಾರೆ. ಅವರು ದಿನನಿತ್ಯ ನೀಡುತ್ತಿರುವ ಹಿಂಸೆ ತಾಳಲಾರದೆ ಅನಾರೋಗ್ಯ ಪೀಡಿತ ಮಗನೊಂದಿಗೆ ಬೀದಿ ಪಾಲಾದೆ ಎಂದು ಆಕೆ ತಿಳಿಸಿದ್ದಾರೆ. ಹೆಣ್ಮಕ್ಕಳ ಇಚ್ಚೆಯಂತೆ ಆಸ್ತಿಯನ್ನು ಕೊಡಲು ನನಗೆ ಸಾಧ್ಯವಿಲ್ಲ. ಹೀಗಾಗಿ ನನ್ನೆಲ್ಲಾ ಆಸ್ತಿಪಾಸ್ತಿಯ ದಾಖಲೆಗಳೊಂದಿಗೆ ಮನೆ ಬಿಟ್ಟು ಬಂದಿದ್ದೇನೆ. ನನ್ನನ್ನು ಯಾವುದಾದರೂ ಆಶ್ರಮಕ್ಕೆ ಸೇರಿಸಿ, ಹಿಂಸೆಯಿಂದ ಪಾರುಮಾಡಿ ಎಂದು ಆಕೆ ಅಂಗಲಾಚಿದ್ದಾರೆ.
ಸತ್ಯ ಅಸತ್ಯತೆಯ ಬಗ್ಗೆ ಏನನ್ನು ಹೇಳಲಾಗುವುದಿಲ್ಲ. ವೃದ್ದಪ್ಯದ ಸಮಯದಲ್ಲಿ ಈ ರೀತಿ ಬೀದಿಪಾಲಾಗುವುದು ಸರಿಯಲ್ಲ. ವೃದ್ದೆಗೆ ಸಂಬಂಧಪಟ್ಟವರು ಸರಿಯಾದ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಆಗ್ರಹಿಸಿದ್ದಾರೆ.