ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ತಾವರಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅರಳಿಹೊಂಡ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಏಳೆಂಟು ಕುಟುಂಬಗಳು ಕಳೆದ ಹದಿನೈದು ವರ್ಷಗಳಿಂದ ಉಳ್ಳವರ ದೌರ್ಜನ್ಯಕ್ಕೆ ತುಳಿತಕ್ಕೊಳಗಾಗಿ ಬಲಹೀನರಾಗಿ ಬದುಕುತ್ತಿದ್ದು, ತುಳಿದವರ ವಿರುದ್ಧ ಧ್ವನಿಯೆತ್ತಲಾರದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರ ಜಾಗೆಗಳಲ್ಲಿ ಓಡಾಡುವಂತಿಲ್ಲ, ಹೆಚ್ಚು ಮಾತನಾಡುವಂತಿಲ್ಲ, ಹರಿಜನರು ತಮ್ಮ ಮನೆಗಳ ಮುಂದೆಯೂ ಗಿಡ, ಮರ ನೆಡುವಂತಿಲ್ಲ. ತಿರುಗಿ ಬೀಳಲು ಪ್ರಯತ್ನಿಸಿದರೆ ಬಡಿಸಿಕೊಳ್ಳಬೇಕು ಅಥವಾ ಸತ್ತಂತೆ ಇರಬೇಕು ಇದರಿಂದ ಜಾತಿ ತಾರತಮ್ಯ ಇಂದಿಗೂ ಜೀವಂತವಾಗಿದೆ ಎಂಬುದು ನೊಂದವರ ಮಾತುಗಳೇ ಸಾಕ್ಷಿ.
ಆ ಹಿನ್ನೆಲೆಯಲ್ಲಿ 2025 ಮಾರ್ಚ್ 24ರಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹೆಸ್ಕಾಂ ಅಧಿಕಾರಿ, ಈದಿನ.ಕಾಮ್ ಮತ್ತು ಗ್ರಾಮದ ಹಿರಿಯರ ಸಹಭಾಗಿತ್ವದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಣ್ಣದಾದ ಸಭೆಯೊಂದನ್ನು ಕರೆದಿದ್ದರು. ಸಭೆಯಲ್ಲಿ ಪರಸ್ಪರ ವಾದ-ವಿವಾದ, ದೂರು-ಪ್ರತಿದೂರ ಬಂದನಂತರ ಕಳೆದ ಐದಾರು ವರ್ಷಗಳಿಂದ ಎಸ್.ಸಿ ಕಾಲೋನಿಗೆ ಖುಲ್ಲಾ ಬಿದ್ದ, ಗಾವಠಾಣ ಜಾಗೆ ನಮ್ಮ ಹೆಸರಿಗಿದೆ ನಾವು ವಿದ್ಯುತ್ ಕಂಬಗಳನ್ನು ಹಾಕಲು ಬಿಡುವುದಿಲ್ಲ ಎಂದು ತಕರಾರು ತೆಗದಿದ್ದ ಗೌಡರು ಇದೀಗ ಸಭೆಯ ನಂತರ ಕಂಬಗಳನ್ನು ಹಾಕಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಾವು ಹಣ ಕೊಟ್ಟು ಈ ಜಾಗೆಯನ್ನು ಖರೀದಿ ಮಾಡಿದ್ದೇವೆ. ನಮ್ಮ ಜಾಗೆ ಅವರ (ಎಸ್.ಸಿ) ಮನೆಯ ಹೊಸ್ತಿಲದ ತನಕ ಇದೆ. ನಾವೇ ಉದಾರಿಗಳಾಗಿ ಅವರ ಮನೆಯ ಮುಂದೆ ಕಾಂಕ್ರೀಟ್ ರಸ್ತೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದೇವೆ. ಆದರೂ ನಮ್ಮನ್ನೇ ಬೈದುಕೊಳ್ಳುತ್ತಾರೆ ಎಂದರು.

ಇತ್ತ ಸಭೆಯಲ್ಲಿ ನೊಂದ ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ಮತ್ತು ಮಹಿಳೆಯರು ಮಾತನಾಡಿ, ಉತ್ತಮ ಕುಲದವರೆನಿಸಿಕೊಂಡವರು ಅದೆಷ್ಟೇ ನೋವು, ದೌರ್ಜನ್ಯ, ಕಷ್ಟ ಕೊಟ್ಟರೂ ಬೆರಳೆಣಿಯಲ್ಲಿದ್ದ ನಾವು (ಪರಿಶಿಷ್ಟ ಜಾತಿ) ಅವರ ವಿರುದ್ಧ ಧ್ವನಿಯೆತ್ತಲಾರದೆ ಸತ್ತಂತೆ ಬದುಕುತ್ತಿದ್ದೇವೆ. ತಮಗೆ ಉಳ್ಳವರಿಂದ ಆಗುತ್ತಿದ್ದ ಅನ್ಯಾಯದ ಬಗ್ಗೆ ನೋವು ತೋಡಿಕೊಂಡ ಅವರು, ಕಳೆದ ಹದಿನೈದು ವರ್ಷಗಳಿಂದ ನಾವುಗಳು ಮನೆಯಲ್ಲಿ ವಿದ್ಯುತ್ ಇಲ್ಲದೆಯೇ ಜೀವನ ಸಾಗಿಸುತ್ತಿದ್ದೆವು. ವಿದ್ಯುತ್ ಕಂಬಗಳನ್ನು ಹಾಕಲು ತಕರಾರು ಮಾಡಿದ್ದ, ನಾಲ್ಕೈದು ಗೌಡರ ಮನೆತನದವರು ತಾವು ಜಾಗೆಯನ್ನು ದುಡ್ಡು ಕೊಟ್ಟು ಖರೀದಿ ಮಾಡಿಕೊಂಡಿದ್ದೇವೆ. ನಿಮಗೇಕೆ? ಪುಕ್ಕಟ್ಟೆಯಾಗಿ ಕೊಡಬೇಕು ಎಂದು ನಮ್ಮನ್ನು ದಬಾಯಿಸುತ್ತಿದ್ದರು. ಹುಲ್ಲು, ದಂಟು ಏರಿದ್ದ ಟ್ರ್ಯಾಕ್ಟರ್’ಗಳು ನಮ್ಮ ಮನೆಯ ಮುಂದೆ ಹಾದುಹೋಗುವಾಗ ನಮ್ಮ ಗುಡಿಸಲುಗಳೇ ಕಿತ್ತು ಹೋಗವಂತಿತ್ತು. ಈ ಕುರಿತು ಪ್ರಶ್ನಿಸಿದರೆ; ನಮ್ಮನ್ನೇ ಬಡಿದು ಹೋದರು, ಆಗಲೂ ಸುಮ್ಮನಾದೆವು. ಏಕೆಂದರೆ; ನಾವು ಬೆರಳೆಣಿಕೆಯಲ್ಲಿದ್ದೇವೆ.
ಇನ್ನು ನಮ್ಮ ಮಕ್ಕಳು ಮನೆಯ ಮುಂದೆ ಆಟವಾಡಿದರೂ ಸಹಿಸಿಕೊಳ್ಳದೆ ಅವಾಚ್ಯ ಶಬ್ಧಗಳಿಂದ ಬಯ್ಯುವುದು. ನಮ್ಮ ಮಕ್ಕಳು ಓದುವಾಗಲೂ ಇವರೇನು ಡಾಕ್ಟರ್, ಇಂಜಿನಿಯರ್ ಆಗುತ್ತಾರೆ ಬಿಡು ಎಂದು ನಗಾಡಿಕೊಳ್ಳುವುದು ಇತ್ಯಾದಿ. ಇವರ ಹಿತ್ತಲು’ಗಳಲ್ಲಿ ಶೌಚಾಲಯ ಮತ್ತು ತಿಪ್ಪೆಗುಂಡಿಗಳಿವೆ. ಮಳೆಗಾಲ ಶುರುವಾದರೆ ಸಾಕು ಆ ಎಲ್ಲ ಗಲೀಜು ನಮ್ಮ ಮನೆಯ ಪಡಸಾಲೆಗೆ ಬಂದು ಸೇರುತ್ತದೆ. ಅನೇಕ ಸಲ ನಾವು ರಾತ್ರಿಯಿಡೀ ನಿದ್ದೆ ಮಾಡದೆ ಎಚ್ಚರವಿದ್ದಿದ್ದೂ ಇದೆ. ಈ ಕುರಿತೂ ಅನೇಕಬಾರಿ ಅವರೊಂದು ಜಗಳಗಳೂ ನಡೆದಿದೆ. ಕೊನೆಗೆ ನಾಲ್ಕೈದು ವರ್ಷಗಳಿಂದ ಕಲಘಟಗಿ ತಾಲ್ಲೂಕು ತಹಶಿಲ್ದಾರರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಏನೂ ಪ್ರಯೋಜನವಾಗಿಲ್ಲ. ಅಧಿಕಾರಿಗಳಾದರೂ ಬಂದು ನೋಡಿಕೊಂಡು ಸರಿಪಡಿಸಲಾಗುವುದು ಎಂದು ಹಾರಿಕೆ ಉತ್ತರ ನೀಡುತ್ತ ಬಂದರು ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಈ ಕುರಿತು ಪಿಡಿಓ ಮಾತನಾಡಿ, ಕ್ರಮೇಣವಾಗಿ ಈ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕುತ್ತ ಸಾಗೋಣ. ಇನ್ನುಮುಂದೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡುತ್ತೇವೆ ಎಂದರು. ಎಸ್.ಸಿ ಕಾಲೋನಿಗೆ ವಿದ್ಯುತ್ ಕಂಬಗಳ ಅಳವಡಿಕೆಗೆ ತಕರಾರು ತೆಗದಿದ್ದವರನ್ನೂ ಕರೆಯಿಸಿ, ಇದೆಲ್ಲವೂ ಸರ್ಕಾರಿ ಜಾಗ ಮತ್ತು ಮುಖ್ಯವಾಗಿ ಎಲ್ಲರೂ ಎಲ್ಲರಿಗೂ ಸಹಕಾರಿಯಾಗಿ, ಮಾನವೀಯತೆಯಿಂದ ಬದುಕಿದರೆ; ಗ್ರಾಮ ಉಳಿಯುತ್ತದೆ ಎಂದು ತಿಳಿಹೇಳಿದರು. ಹೆಸ್ಕಾಂ ಅಧಿಕಾರಿಗಳನ್ನು ವಿದ್ಯುತ್ ಕಂಬ ಹಾಕಿಕೊಡುವುದದಾಗಿ ತಿಳಿಸಿದರು. ಇನ್ನು ಎಸ್.ಸಿ ಸಮುದಾಯದವರ ಒಂದು ಮನೆಗೂ ಶೌಚಾಲಯವಿಲ್ಲ. ಹಾಕಿಸಿಕೊಳ್ಳಲೂ ಜಾಗವಿಲ್ಲ. ಇನ್ನಾದರೂ ಅವರು ಜಾತಿ ತಾರತಮ್ಯದಿಂದ ಹೊರಬರಲಿ, ಅವರೂ ನಮ್ಮಮತೆಯೇ ಮನುಷ್ಯರೆಂಬ ಭಾವ ಉಳ್ಳವರು ಎನಿಸಿಕೊಂಡವರಲ್ಲಿ ಮೂಡುವಂತಾಗಲಿ ಎಂಬುದು ಅವಮಾನ ನೊಂದು ಸಹಿಸಿಕೊಂಡ ಮಹಿಳೆಯರ ಆಶಯ.
ಜಾತಿಯಿಲ್ಲ, ಜಾತಿ ತಾರತಮ್ಯವಿಲ್ಲ, ನಾವೆಲ್ಲ ಒಟ್ಟಿಗೆ ಬದುಕುತ್ತಿದ್ದೇವೆ, ನಾವೆಲ್ಲ ಒಂದೇ ಎಂದು ಓಟು ಗಿಟ್ಟಿಸಿಕೊಳ್ಳಲು ವೇದಿಕೆಯ ಮೇಲೆ ಭಾಷಣ ಮಾಡುವ ರಾಜಕಾರಣಿಗಳಿಗೆ ಇಂತಹ ಹಳ್ಳಿಗಳು ಗಮನಕ್ಕೆ ಬರಲಿ. ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡಲಿ. ಸ್ವಾತಂತ್ರ್ಯ ದೊರಕಿ ದಶಕಗಳೇ ಕಳೆದರೂ ನಿಜವಾಗಿ ಸ್ವಾತಂತ್ರ್ಯ ದೊರಕಲಾರದೆ ಅದೆಷ್ಟೇ ಜೀವಗಳು ಒದ್ದಾಡುತ್ತಿದ್ದಾರೆ. ಅವರೆಲ್ಲ ಜಾತಿ ಸಂಕೋಲೆ ಮತ್ತು ಮುಖ್ಯವಾಗಿ ಉತ್ತಮರೆಸಿಕೊಂಡವರ ನಿಂದನೆಗಳು ಮರುಕಳಿಸದಂತೆ ಸರ್ಕಾರವೂ ಎಚ್ಚರವಹಿಸಿ ಸಂವಿಧಾನದ ಆಶಯ ಮತ್ತು ಸರ್ವ ಜನಾಂಗದ ಶಾಂತಿಯ ತೋಟದ ಉದ್ದೇಶವನ್ನು ಕಾಪಾಡಬೇಕಿದೆ.
