ಬಡವರ ಕಿಂಚಿತ್ತೂ ಕಾಳಜಿ ಇಲ್ಲದ ಶಾಸಕ ವೇದವ್ಯಾಸ ಕಾಮತ್ ಕೂಡಲೇ ರಾಜಿನಾಮೆ ನೀಡಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದ)ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆಗ್ರಹಿಸಿದರು.
ನಿವೇಶನರಹಿತರಿಗೆ ನಿವೇಶನ ಮಂಜೂರು ಮಾಡಲು ಹಾಗೂ ಇಡ್ಯಾ ಪ್ರದೇಶದಲ್ಲಿ ಜಿ+3 ಮಾದರಿಯ ಯೋಜಿತ ವಸತಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಹಾಗೂ ಉತ್ತರ ಸಮಿತಿಗಳ ಜಂಟಿ ನೇತೃತ್ವದಲ್ಲಿ ಪಾಲಿಕೆ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ಮಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದು 40 ವರ್ಷ ಕಳೆದಿದೆ. ದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಇಲ್ಲಿಯವರೆಗೆ ಒಂದೇ ಒಂದು ತುಂಡು ಭೂಮಿಯನ್ನು ಬಡವರಿಗೆ ನೀಡಿಲ್ಲ. ಕಳೆದ 25 ವರ್ಷಗಳಿಂದ ನಿವೇಶನರಹಿತರ ಹೋರಾಟ ನಡೆದ ಫಲವಾಗಿ ನಿವೇಶನ ರಹಿತರ ಪಟ್ಟಿ ರೆಡಿಯಾಗಿದ್ದರೂ, ಒಂದೆರಡು ಕಡೆಗಳಲ್ಲಿ ಭೂಮಿ ನಿಗದಿಪಡಿಸಿದ್ದರೂ ಅದನ್ನು ಇಲ್ಲಿನ ಬಿಲ್ಡರ್ ಮಾಫಿಯಾ ಯಾವುದಕ್ಕೂ ಅವಕಾಶವನ್ನೇ ನೀಡದೆ ಬಡವರನ್ನು ಮತ್ತಷ್ಟು ಬಡವರನ್ನಾಗಿಸುವ ಸಂಚು ನಡೆಸುತ್ತಲೇ ಇದೆ. ಇದೆಲ್ಲವನ್ನು ನೋಡುತ್ತಾ ಜನಪ್ರತಿನಿಧಿಗಳು ಅಂತಹವರಿಗೆ ಪ್ರೋತ್ಸಾಹಿಸುತ್ತಾ ಕಣ್ಮುಚ್ಚಿ ಕುಳಿತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈಗ ಮತ್ತೆ ಬಡವರಿಗೆ ಮನೆ ನಿವೇಶನ ಒದಗಿಸುವುದಾಗಿ ಜನತೆಯ ತೆರಿಗೆಯ ನೂರಾರು ಕೋಟಿ ರೂ.ಗಳನ್ನು ಖದೀಮ ಬಿಲ್ಡರ್ ಗಳ ಕೈಗೊಪ್ಪಿಸಿ ಅವರ ನಿರುಪಯೋಗಿ ಭೂಮಿಯನ್ನು ಟಿಡಿಆರ್ ಹೆಸರಲ್ಲಿ ಖರೀದಿಸಿ ಮತ್ತೆ ಬಡವರಿಗೆ ಮೋಸ ಮಾಡಿದ ಬಿಜೆಪಿ ದುರಾಡಳಿತದ ವಿರುದ್ಧ ನಿವೇಶನರಹಿತರು ಪ್ರಬಲ ಧ್ವನಿ ಎತ್ತಲು ಮುಂದಾಗಬೇಕು ಹಾಗೂ ಇದಕ್ಕೆಲ್ಲ ನೇರ ಕಾರಣೀಕರ್ತರಾಗಿರುವ ಬಡವರ ವಸತಿ ಯೋಜನೆಯ ಬಗ್ಗೆ ಎಳ್ಳಷ್ಟೂ ಮಾತನಾಡದ ಶಾಸಕ ವೇದವ್ಯಾಸ ಕಾಮತ್ ಹುದ್ದೆಯಿಂದ ಕೆಳಗಿಳಿಯಬೇಕು” ಎಂದು ಒತ್ತಾಯಿಸಿದರು.

ಸಿಪಿಐಎಂ ಜಿಲ್ಲಾ ನಾಯಕ ಜೆ ಬಾಲಕೃಷ್ಣ ಶೆಟ್ಟಿ ಮಾತನಾಡಿ, “ಮಂಗಳೂರು ನಗರದಲ್ಲಿ ನಿವೇಶನ ರಹಿತರು ಬಾಡಿಗೆ ಕಟ್ಟಲು ಸಾಧ್ಯವಿಲ್ಲದೆ ಬದುಕಲು ಹರಸಾಹಸ ಪಡುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಸತಿ ಯೋಜನೆಗಳು ಕೇವಲ ಪ್ರಚಾರಕ್ಕಾಗಿ ಮಾತ್ರ ಸೀಮಿತವಾಗಿದೆ” ಎಂದರು.
ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, “ಬಡಪಾಯಿ ನಿವೇಶನರಹಿತರನ್ನು ತನ್ನ ರಾಜಕೀಯ ಲಾಭಕ್ಕೆ ದುರುಪಯೋಗಪಡಿಸಿದ ಬಿಜೆಪಿ ಕಾಂಗ್ರೆಸ್ ಯಾವುದೇ ರೀತಿಯ ಸ್ಪಷ್ಟತೆಯನ್ನು ಹೊಂದಿಲ್ಲ. ಕನಿಷ್ಠ ಪಕ್ಷ ಮನಪಾ ಆಯುಕ್ತರನ್ನು ವಿಚಾರಿಸಲು ಭೇಟಿಯಾಗಲು ಬಂದರೆ ತೀರಾ ಉದ್ಧಟತನದಿಂದ ವರ್ತಿಸಿದ್ದು ಮಾತ್ರವಲ್ಲದೆ ಮಂಗಳೂರಿನ ಬಡ ನಿವೇಶನರಹಿತರ ಬಗ್ಗೆ ಅತ್ಯಂತ ಅವಮಾನಕಾರಿಯಾಗಿ ಮಾತನಾಡಿರುವುದು ತೀರಾ ಖಂಡನೀಯವಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರು | ಫೆಂಗಲ್ ಚಂಡಮಾರುತ, ಮಂಗಳವಾರ ಸಂಜೆಯವರೆಗೆ ಮಳೆಯ ಅಬ್ಬರ
ಪ್ರತಿಭಟನೆಯಲ್ಲಿ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಕ್ರಷ್ಣಪ್ಪ ಕೊಂಚಾಡಿ, ಜಯಂತಿ ಶೆಟ್ಟಿ, ಮನೋಜ್ ವಾಮಂಜೂರು, ಮಂಗಳೂರು ನಗರ ಮುಖಂಡರಾದ ಪ್ರಮೀಳಾ ಶಕ್ತಿನಗರ, ದಿನೇಶ್ ಶೆಟ್ಟಿ, ಶಶಿಧರ್ ಶಕ್ತಿನಗರ, ರವಿಚಂದ್ರ ಕೊಂಚಾಡಿ, ಭಾರತಿ ಬೋಳಾರ, ಲೋಕೇಶ್ ಎಂ, ನಾಗೇಶ್ ಕೋಟ್ಯಾನ್ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ರಶ್ಮಿ ವಾಮಂಜೂರು, ಜಯಲಕ್ಷ್ಮಿ, ಅಸುಂತ ಡಿಸೋಜ, ತಯ್ಯೂಬ್ ಬೆಂಗರೆ, ಅಶೋಕ್ ಶ್ರೀಯಾನ್, ಜಯಪ್ರಕಾಶ್ ಜಲ್ಲಿಗುಡ್ಡ, ಪ್ರಶಾಂತ್ ಕುದ್ಕೋರಿಗುಡ್ಡ ಮುಂತಾದವರು ಭಾಗವಹಿಸಿದ್ದರು.