ಮುಂಗಾರು ಮಳೆ ಆಗಮನಕ್ಕೆ ವಿಳಂಬ ಆಗುತ್ತಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕುಡಿಯುವ ನೀರು ಸೇರಿದಂತೆ ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಬೇಕು ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಾಕೀತು ಮಾಡಿದರು.
ಬೀದರ್ ಜಿಲ್ಲೆ ಭಾಲ್ಕಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಹಲವು ಇಲಾಖೆ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದರು.
“ಮುಂಗಾರು ಆರಂಭಗೊಂಡು ತಿಂಗಳು ಕಳೆಯುತ್ತಿದೆ. ಆದರೆ, ಈವರೆಗೂ ಮಳೆರಾಯನ ದರ್ಶನ ಆಗಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಬಹುದು. ಈ ಹಿನ್ನಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಜಂಟಿ ಸಭೆ ನಡೆಸಿ ಸೂಕ್ತ ಕ್ರಮಕೈಗೊಂಡು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕು” ಎಂದರು.
“ನೆಟೆ ರೋಗದ ಪರಿಹಾರ ಅರ್ಹ ರೈತರಿಗೆ ತಲುಪಬೇಕು. ಬಿತ್ತನೆ ಬೀಜದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಸಾಲ ಭಾದೆಯಿಂದ ಮೃತಪಟ್ಟಿರುವ ರೈತರ ಕುಟುಂಬಕ್ಕೆ ಆತ್ಮಹತ್ಯೆ ಶೀಘ್ರವೇ ಪರಿಹಾರ ಧನ ಕೊಡಬೇಕು” ಎಂದು ಕೃಷಿ ಅಧಿಕಾರಿಗೆ ಸೂಚಿಸಿದರು.
ಕಲುಷಿತ ನೀರು ಪೂರೈಕೆ ಆದರೆ ಅಧಿಕಾರಿಗಳ ತಲೆದಂಡ:
“ಕಲುಷಿತ ನೀರು ಪೂರೈಕೆಯಿಂದ ಜಿಲ್ಲೆಯ ಔರಾದ್ ತಾಲೂಕಿನ ಕರಕ್ಯಾಳ ಗ್ರಾಮದ ಇಪ್ಪತ್ತಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದಾರೆ. ಅಂತಹ ಘಟನೆ ತಾಲೂಕಿನಲ್ಲಿ ನಡೆಯಬಾರದು. ಒಂದು ವೇಳೆ ಕಲುಷಿತ ನೀರು ಪೂರೈಕೆ ಕಂಡು ಬಂದರೆ ಸಂಬಂಧಿತ ಅಧಿಕಾರಿಗಳ ತಲೆದಂಡ ಆಗಲಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಖಡಕ್ ಎಚ್ಚರಿಕೆ ನೀಡಿದರು.
“ಕಲುಷಿತ ನೀರು ಕುಡಿದು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹತ್ತಾರು ಮಂದಿ ಮೃತಪಟ್ಟಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಓವರ್ ಹೆಡ್ ಟ್ಯಾಂಕ್ ಸಕಾಲಕ್ಕೆ ಸ್ವಚ್ಛಗೊಳಿಸಬೇಕು. ತ್ಯಾಜ್ಯಗಳ ತಿಪ್ಪೆಗುಂಡಿ ನಿರ್ಮಾಣ ಆಗದಂತೆ ಎಚ್ಚರ ವಹಿಸಬೇಕು. ಸಮರ್ಪಕವಾಗಿ ಕಸ ವಿಲೇವಾರಿ ಆಗಬೇಕು. ಎಚ್ಚರಿಕೆಯ ನಡುವೆಯೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಅಸಡ್ಡೆ ತೋರಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಇಓ ರಮೇಶ ನಾತೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ವರ್ಗಾವಣೆ ಮಾಡಿಕೊಳ್ಳಿ; ಪುರಸಭೆ ಸಿಒಗೆ ಎಚ್ಚರಿಕೆ
ಪಟ್ಟಣದಲ್ಲಿ ಮೂರು ದಿನದಿಂದ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಕೆಲ ಬಡಾವಣೆಗಳಲ್ಲಿ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾದರೆ ಹೇಗೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಪ್ರಶ್ನಿಸಿದರು.
ಪುರಸಭೆ ಮುಖ್ಯಾಧಿಕಾರಿ ನಾಗಣ್ಣ ಪರೀಟ್ ಅವರು ಸಮಜಾಯಿಷಿ ಉತ್ತರ ನೀಡಲು ಮುಂದಾದರು. ಇದಕ್ಕೆ ಕೆರಳಿದ ಸಚಿವರು “ಎರಡ್ಮೂರು ದಿನ ನೀರು ಸರಬರಾಜು ಮಾಡದಿದ್ದರೆ ಜನರ ಪರಿಸ್ಥಿತಿ ಏನಾಗಬೇಕು. ಏನೇ ಸಮಸ್ಯೆ ಇದ್ದರೂ 24 ಗಂಟೆಯೊಳಗೆ ಸರಿಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಇಲ್ಲಸಲ್ಲದ ಸಬೂಬು ಹೇಳುವುದು ಸರಿಯಲ್ಲ. ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿ ಕೆಲಸ ಮಾಡಿ. ಇಲ್ಲದಿದ್ದರೆ ವರ್ಗಾವಣೆ ಮಾಡಿಕೊಂಡು ಹೋಗಬಹುದು” ಎಂದು ಎಚ್ಚರಿಕೆ ನೀಡಿದರು.
ಜುಲೈ 1ರಂದು ವನಮಹೋತ್ಸವ:
ಜುಲೈ 1 ರಂದು ಜಿಲ್ಲೆಯಲ್ಲಿ ವನಮಹೋತ್ಸವ ಆಚರಿಸಲಾಗುತ್ತಿದ್ದು, ಒಂದೇ ದಿನ ಸುಮಾರು 2 ಲಕ್ಷ ಸಸಿಗಳನ್ನು ನೆಡಲು ಅರಣ್ಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ತಾಲೂಕಿನಲ್ಲಿ ಒಂದೇ ದಿನ 1 ಲಕ್ಷ ಸಸಿಗಳನ್ನು ನೆಡಲಾಗುವುದು. ಪಟ್ಟಣದಲ್ಲಿ 2-5 ಸಾವಿರ ಸಸಿಗಳು ಸೇರಿ ಪ್ರತಿ ಗ್ರಾಮ ಪಂಚಾಯಿತಿಗೆ 1 ಸಾವಿರದಂತೆ 40 ಗ್ರಾಪಂ ವ್ಯಾಪ್ತಿಗಳಲ್ಲಿ 40 ಸಾವಿರ ಸಸಿಗಳನ್ನು ನೆಡಲು ಗುರಿ ಹಾಕಿಕೊಳ್ಳಲಾಗಿದೆ. ಹಾಗಾಗಿ ಸರ್ಕಾರಿ ಕಚೇರಿ, ಸರ್ಕಾರಿ ನಿವೇಶನ, ಶಾಲಾ-ಕಾಲೇಜು ಆವರಣ, ರಸ್ತೆ ಬದಿ ಸೇರಿ ಅಗತ್ಯ ಇರುವ ಎಲ್ಲ ಕಡೆಗಳಲ್ಲಿ ವಾರದೊಳಗೆ ಗುಂಡಿ ತೋಡಿ ಸಸಿ ನೆಡಲು ಸಿದ್ಧತೆ ಮಾಡಿಕೊಳ್ಳಬೇಕು” ಎಂದು ಸೂಚನೆ ನೀಡಿದರು.