ಮಂಗಳೂರಿನ ಅತ್ತಾವರದ ನಂದಿಗುಡ್ಡೆ ಫ್ಲ್ಯಾಟ್ವೊಂದರಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣದ ಎಲ್ಲಾ 17 ಆರೋಪಿಗಳನ್ನು ಮಂಗಳೂರು ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿ ಆದೇಶಿಸಿದೆ.
ಮಂಗಳೂರಿನಲ್ಲಿ ಸಂಚಲನವುಂಟುಮಾಡಿದ್ದ ಈ ಪ್ರಕರಣವನ್ನು ಅಂದಿನ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ನೇತೃತ್ವದ ತಂಡ ದಾಳಿ ನಡೆಸಿ, ಉಳ್ಳಾಲದ ಪ್ರಭಾವಿ ರಾಜಕಾರಣಿಗಳ ಸಹವರ್ತಿಗಳು ಮತ್ತು ಪ್ರಮುಖ ಸ್ಥಳೀಯ ಬಿಲ್ಡರ್ಗಳು ಸೇರಿದಂತೆ 17ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ಕಾಸರಗೋಡಿನ ಉಪ್ಪಳದ ಶಮೀನಾ ಎಂಬಾಕೆ ಆಕೆಯ ಪತಿ ಅಬೂಬಕರ್ ಸಿದ್ದಿಕ್ ಮತ್ತು ಸಹವರ್ತಿಗಳಾದ ಅಸ್ಮಾ, ಐಸಮ್ಮ, ರೆಹಮತ್ ಮತ್ತು ಉಮ್ಮರ್ ಕುಂಞಿ ಅವರೊಂದಿಗೆ ಸೇರಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿತ್ತು.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಯುವತಿಯರನ್ನು, ಅದರಲ್ಲೂ ಕಾಲೇಜು ವಿದ್ಯಾರ್ಥಿನಿಯರನ್ನು ಐಷಾರಾಮಿ ಜೀವನಶೈಲಿ ಮತ್ತು ದೊಡ್ಡ ಮೊತ್ತದ ಹಣದ ಆಮಿಷವೊಡ್ಡಿ ಕರೆತರಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ಇಬ್ಬರು ಮುಸ್ಲಿಂ ಯುವತಿಯರನ್ನು ರಕ್ಷಿಸಲಾಗಿದ್ದು, ಮೂವರು ಮಹಿಳೆಯರು ಮತ್ತು 75 ವರ್ಷದ ವೃದ್ಧ ಸೇರಿದಂತೆ 15 ಜನರನ್ನು ಬಂಧಿಸಲಾಗಿತ್ತು. ಖಾಸಗಿ ಅಪಾರ್ಟ್ಮೆಂಟ್ಗಳಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಭೇಟಿಯಾಗಬಹುದು ಎಂದು ನಂಬಿಸಿ ವಂಚಿಸಲಾದ ಗ್ರಾಹಕರಲ್ಲಿ ಕೇರಳದ ಶ್ರೀಮಂತ ವ್ಯಕ್ತಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 28 ರಂದು, ಮಂಗಳೂರು ಜಿಲ್ಲಾ ಹೆಚ್ಚುವರಿ ಪೋಕ್ಸೋ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಆರೋಪಿಗಳ ಪರವಾಗಿ ತೀರ್ಪು ನೀಡಿದೆ. ವಿಚಾರಣೆ ಸಂದರ್ಭದಲ್ಲಿ ಪ್ರಮುಖ ಆರೋಪಿ ಶಮೀನಾ ಮೃತಪಟ್ಟಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ಮಂಗಳೂರು | ನಕಲಿ ಐಡಿ, ಮೀಡಿಯಾ ಸ್ಟಿಕ್ಕರ್ ದುರ್ಬಳಕೆ ತಡೆಗೆ ಕ್ರಮ: ಪೊಲೀಸ್ ಕಮಿಷನರ್
ಆರೋಪಿಗಳು ಕಾಲೇಜು ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ, ಅವರನ್ನು ಹೊರಗೆ ಕರೆದುಕೊಂಡು ಹೋಗಿ, ನಂತರ ಲಕ್ಷಾಂತರ ರೂಪಾಯಿಗಳನ್ನು ನೀಡಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿ 86 ಸಾಕ್ಷಿಗಳನ್ನು ಹಾಜರುಪಡಿಸಿದರೂ, ಪ್ರಮುಖ ಸಾಕ್ಷಿಗಳು ಪ್ರಕರಣಕ್ಕೆ ಪೂರಕ ಸಾಕ್ಷಿ ನೀಡಲು ವಿಫಲರಾದ ಕಾರಣ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.