- ನಿಗಮ ಹೊರಡಿಸಿದ ಸುತ್ತೋಲೆಯನ್ನು ಗಾಳಿಗೆ ತೂರಿದ ಬಸ್ ಸಿಬ್ಬಂದಿ
- ವಾಹನ ಚಲಿಸುವಾಗ ಪ್ರಯಾಣಿಕರಿಗೆ ಬಸ್ ಹತ್ತಲು ಅನುವು ಮಾಡುವ ಸಿಬ್ಬಂದಿ
ಸಾರಿಗೆ ನಿಗಮ ಪ್ರಯಾಣಿಕರ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ಮತ್ತು ಬಸ್ ಚಲಿಸುವ ಮೊದಲು ಬಸ್ ಬಾಗಿಲುಗಳನ್ನು ಮುಚ್ಚುವಂತೆ ಸುತ್ತೋಲೆ ಹೊರಡಿಸಿದ್ದರೂ, ನಗರದ ಅನೇಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಸಿಬ್ಬಂದಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ನಗರದಲ್ಲಿ ಸಂಚರಿಸುವ ಬಹುತೇಕ ಬಸ್ಗಳಲ್ಲಿ ನಿಗಮ ಹೊರಡಿಸಿದ ಸುತ್ತೋಲೆಯನ್ನು ಅನುಸರಿಸುತ್ತಿಲ್ಲ ಮತ್ತು ಪ್ರಯಾಣಿಕರನ್ನು ಫುಟ್ಬೋರ್ಡ್ಗಳ ಮೇಲೆ ನಿಲ್ಲಲು ಅನುಮತಿಸುತ್ತಿವೆ. ಇನ್ನೂ ಹೆಚ್ಚಿನ ಬಸ್ಗಳು ಬಾಗಿಲುಗಳನ್ನು ಮುಚ್ಚುತ್ತಿಲ್ಲ. ವಿಶೇಷವಾಗಿ ಪ್ರಯಾಣಿಕರು ಬಸ್ ಮುಂಭಾಗದ ಬಾಗಿಲು ಬಳಿ ನಿಂತಿರುತ್ತಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಶಾಂತಿನಗರದ ಬಿಎಂಟಿಸಿ ಪ್ರಯಾಣಿಕ ಮಧು ಕೃಷ್ಣ ಮಾತನಾಡಿ, “ಚಾಲಕರು ಎಂದಿಗೂ ಬಸ್ ಮುಂಭಾಗದ ಬಾಗಿಲನ್ನು ಮುಚ್ಚುವುದಿಲ್ಲ. ಬಸ್ ನಿಲ್ದಾಣಗಳ ಬಳಿ ವಾಹನ ಚಲಿಸುವಾಗ ಪ್ರಯಾಣಿಕರಿಗೆ ಬಸ್ ಹತ್ತಲು ಅನುಮತಿ ನೀಡುತ್ತಾರೆ. ಇದು ಪ್ರಯಾಣಿಕರ ಜೀವಕ್ಕೆ ಅಪಾಯ ಉಂಟುಮಾಡುತ್ತದೆ” ಎಂದು ಹೇಳಿದ್ದಾರೆ.
“ಬಸ್ ಸಿಬ್ಬಂದಿ ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಪ್ರಯಾಣ ಬೆಳೆಸುತ್ತಿದ್ದಾರೆ. ಪ್ರಯಾಣಿಕರನ್ನು ಫುಟ್ಬೋರ್ಡ್ನಲ್ಲಿ ನಿಲ್ಲುವಂತೆ ಮಾಡುತ್ತಾರೆ. ಶಕ್ತಿ ಯೋಜನೆ ಜಾರಿಗೆ ಬಂದ ನಂತರ, ಬಸ್ಗಳಲ್ಲಿ ನಿತ್ಯ ಸಾಕಷ್ಟು ಜನಸಂದಣಿ ಕಂಡುಬರುತ್ತಿದೆ. ವಿಶೇಷವಾಗಿ ಪೀಕ್ ಅವರ್ಗಳಲ್ಲಿ, ಬಸ್ಗಳು ಕಿಕ್ಕಿರಿದು ತುಂಬಿರುತ್ತವೆ. ಹೆಚ್ಚಿನ ಮಹಿಳೆಯರು ನಿಲ್ಲುವ ಮುಂಭಾಗದ ಬಾಗಿಲನ್ನು ಬಸ್ ಚಾಲಕ ಎಂದಿಗೂ ಮುಚ್ಚುವುದಿಲ್ಲ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಜನಸಂದಣಿಯ ಸಮಸ್ಯೆಗಳನ್ನು ಪರಿಹರಿಸಲು ಬಿಎಂಟಿಸಿ ಹೆಚ್ಚಿನ ಬಸ್ಗಳನ್ನು ಕಾರ್ಯಾಚರಣೆಗೆ ಇಳಿಸಬೇಕು” ಎಂದು ಬಸ್ ಪ್ರಯಾಣಕಿ ಶರಾವತಿ ಕೆ. ತಿಳಿಸಿದ್ದಾರೆ.
ಸುತ್ತೋಲೆಯ ಆದೇಶ ಏನು?
ಹಾವೇರಿ ಜಿಲ್ಲೆಯಲ್ಲಿ ಕಿಕ್ಕಿರಿದು ತುಂಬಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್ಡಬ್ಲ್ಯುಕೆಆರ್ಟಿಸಿ) ಬಸ್ನಿಂದ ಕೆಳಗೆ ಬಿದ್ದು 14 ವರ್ಷದ ಶಾಲಾ ಬಾಲಕಿ ಇತ್ತೀಚೆಗೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಲಾಗಿದೆ.
ಜೂನ್ 13ರಂದು ರಸ್ತೆ ಸಾರಿಗೆ ನಿಗಮ ಹೊರಡಿಸಿದ ಸುತ್ತೋಲೆ ಪ್ರಕಾರ, ಡಿಪೋದಿಂದ ಟ್ರಿಪ್ಗಾಗಿ ಬಸ್ ಪ್ರಾರಂಭವಾಗುವ ಮೊದಲು ಎಲ್ಲ ಬಸ್ ಬಾಗಿಲುಗಳನ್ನು ಪರಿಶೀಲಿಸಬೇಕು. ಯಾವುದೇ ಪ್ರಯಾಣಿಕರು ಬಸ್ನ ಫುಟ್ಬೋರ್ಡ್ನಲ್ಲಿ ನಿಲ್ಲಲು ಅನುಮತಿಸಬಾರದು. ಮುಂಭಾಗ ಮತ್ತು ಹಿಂಭಾಗದ ಎರಡೂ ಬಾಗಿಲುಗಳನ್ನು ಸರಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಲು ಬಸ್ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ಬಸ್ ನಿಲ್ದಾಣವನ್ನು ತಲುಪಿ ಮೀಸಲಾದ ಪ್ಲಾಟ್ಫಾರ್ಮ್ನಲ್ಲಿ ನಿಲ್ಲುವವರೆಗೆ ಬಸ್ ಸಿಬ್ಬಂದಿ ಬಾಗಿಲು ತೆರೆಯಬಾರದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಸವಾರರ ಬಂಧನ
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಎಲ್ಲ ನಿಗಮಗಳಿಗೆ ಪ್ರಯಾಣಿಕರ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ಮತ್ತು ಬಸ್ ಚಲಿಸುವ ಮೊದಲು ಬಸ್ ಬಾಗಿಲುಗಳನ್ನು ಮುಚ್ಚುವಂತೆ ಸೂಚನೆಗಳನ್ನು ನೀಡಿದ್ದರು.
ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಜಿ. ಮಾತನಾಡಿ, “ಸಿಬ್ಬಂದಿಯಿಂದ ಇಂತಹ ಉಲ್ಲಂಘನೆಗಳನ್ನು ಪರಿಶೀಲಿಸಲು ಬಿಎಂಟಿಸಿಯು ‘ಸಾರಥಿ’ ವಾಹನಗಳನ್ನು ನಿಯೋಜಿಸಿದ್ದು, ಬಸ್ ಸಿಬ್ಬಂದಿ ನಿಯಮ ಅನುಸರಿಸದಿದ್ದಲ್ಲಿ ಸಾರಥಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ” ಎಂದು ಹೇಳಿದ್ದಾರೆ.