ಜಮ್ಮು ಕಾಶ್ಮೀರದ ಕಥುವಾದಲ್ಲಿ ಸೋಮವಾರ ಉಗ್ರರ ಮತ್ತು ಭದ್ರತಾ ಪಡೆಯ ನಡುವೆ ಎನ್ಕೌಂಟರ್ ಆರಂಭವಾಗಿದ್ದು, ಸೇನೆಯತ್ತ ಉಗ್ರರು ಗುಂಡು ಹಾರಿಸಿದ ಬೆನ್ನಲ್ಲೇ ಈ ಚಕಮಕಿ ಆರಂಭವಾಗಿದೆ. ಕಳೆದ 9 ದಿನದಲ್ಲಿ ಕಥುವಾದಲ್ಲಿ ನಡೆಯುತ್ತಿರುವ 3ನೇ ಕಾರ್ಯಾಚರಣೆ ಇದಾಗಿದೆ.
ರಾಮಕೋಟೆ ಪ್ರದೇಶದ ಪಂಜ್ತೀರ್ಥಿಯಲ್ಲಿ ನಡೆದಿರುವ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾತ್ರಿ ವಿಧಿಸಿರುವ ಪಹರೆಯಲ್ಲಿ ಮೂವರು ಉಗ್ರಗಾಮಿಗಳು ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದ್ದು, ಇವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇಪ್ಪತ್ತು ಗಂಟೆಗಳ ಸುಧೀರ್ಘ ಕಾರ್ಯಾಚರಣೆಯಲ್ಲಿ ಇಬ್ಬರು ಜೈಶ್-ಇ-ಮೊಹ್ಮದ್ ಸಂಘಟನೆ ಉಗ್ರರು ಹತರಾದ ಎರಡು ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಕಳೆದ ಗುರುವಾರ ಮಾ.27ರಂದು ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಸೈನಿಕರು ಮೃತಪಟ್ಟಿದ್ದರು. ಕಾಡಿನಲ್ಲಿ ಅಡಗಿಕೊಂಡಿದ್ದ ಪಾಕಿಸ್ತಾನಿ ಉಗ್ರರ ಜತೆ ಈ ಚಕಮಕಿ ನಡೆದಿತ್ತು. ಮಾ.23 ರಂದು ಸೇನೆ ಹಾಗೂ ಉಗ್ರರ ನಡುವೆ ನಡೆದ ಕಾಳಗದಲ್ಲಿ ಒಬ್ಬ ಸ್ಥಳೀಯ ಬಾಲಕಿ ಗಾಯಗೊಂಡಿದ್ದಳು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಎಂಪುರಾನ್’ ವಿವಾದ: ಹಿಂದುತ್ವ ರಾಜಕಾರಣಕ್ಕೆ ಬೆಚ್ಚಿದ ಚಿತ್ರತಂಡ
ಉಗ್ರಗಾಮಿಗಳು ಎನ್ನಲಾದ ಮೂವರು ತಪ್ಪಿಸಿಕೊಂಡಿದ್ದಾರೆ ಹಾಗೂ ಅವರ ಸಂಶಯಾಸ್ಪದ ಚಲನ ವಲನ ಕಂಡುಬರುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವೈಮಾನಿಕ ಕಣ್ಗಾವಲು ಮತ್ತು ಶ್ವಾನಪಡೆಯ ಸಹಾಯದಿಂದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಡಿಐಜಿ ಶಿವಕುಮಾರ್ ಶರ್ಮಾ, ಕಟ್ಟಕಡೆಯ ಉಗ್ರಗಾಮಿ ಹತನಾಗುವವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಯಾವುದೇ ಅನುಮಾನಾಸ್ಪದ ಚಲನ ವಲನಗಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಗಡಿಭಾಗದ ನಿವಾಸಿಗಳಲ್ಲಿ ಅವರು ಮನವಿ ಮಾಡಿದ್ದಾರೆ.