ಏಪ್ರಿಲ್ 14 ರ ಒಳಗೆ ಕರ್ನಾಟಕ ಸರ್ಕಾರ ರೋಹಿತ್ ಕಾಯ್ದೆ ಜಾರಿ ಕುರಿತು ಘೋಷಣೆ ಮಾಡಬೇಕು ಎಂದು ರೋಹಿತ್ ಕಾಯ್ದೆಗಾಗಿ ಜನಾಂದೋಲನ ಸಂಘಟನೆ ಒತ್ತಾಯಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆಯ ಪ್ರತಿನಿಧಿಗಳು, “ಬಾಬಾಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನದ ಪೀಠಿಕೆ ಪ್ರತಿ ಪ್ರಜೆಗೆ ಅವಕಾಶ ಹಾಗೂ ಸ್ಥಾನಮಾನದ, ಸಮಾನತೆಯ ಭರವಸೆ ನೀಡುತ್ತದೆ. ಆದರೆ ಸಂವಿಧಾನ ಜಾರಿಯಾದ 75 ವರ್ಷಗಳ ನಂತರವೂ ದಲಿತ ಬಹುಜನ ಯುವಜನರಿಗೆ ಈ ಎರಡು ಭರವಸೆಗಳು ಈಡೇರಿಲ್ಲ. ರೋಹಿತ್ ವೇಮುಲ, ಪಾಯಲ್ ತದ್ವಿ ಅವರ ಸಾಂಸ್ಥಿಕ ಕೊಲೆಗಳು ಈ ಭರವಸೆಯ ನಿರಾಕರಣೆಯ ಉದಾಹರಣೆಯಾಗಿದೆ. 2014-2021ರ ಅವಧಿಯಲ್ಲಿ, ಐಐಟಿ, ಐಐಎಂ, ಎನ್ಐಟಿ ಮತ್ತು ಇತರ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು 2021ರಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದರು.
ಈ 122ರಲ್ಲಿ 68 ವಿದ್ಯಾರ್ಥಿಗಳು SC/ST/OBC ವರ್ಗಗಳಿಗೆ ಸೇರಿದವರು. ಜೊತೆಗೆ ಈ ಸಮಾನತೆಯ ನಿರಾಕರಣೆಯಿಂದ ಪ್ರತಿ ವರ್ಷ ಸಾವಿರಾರು ದಲಿತ ಬಹುಜನರು ಉನ್ನತ ಶಿಕ್ಷಣ ಸೇರಿದ ನಂತರ ಡ್ರಾಪ್ಔಟ್ ಆಗುತ್ತಿದ್ದಾರೆ. ಡಿಸೆಂಬರ್ 2023ರಲ್ಲಿ ಸರ್ಕಾರ ಸಂಸತ್ತಿನಲ್ಲಿ ನೀಡಿದ ಅಂಕಿ ಅಂಶಗಳ ಪ್ರಕಾರ, ಕೇವಲ ಕೇಂದ್ರೀಯ ವಿಶ್ವವಿದ್ಯಾಲಯಗಳಿಂದಲೇ, 2018-2023 ಮಧ್ಯೆ 13,000ಕ್ಕೂ ಹೆಚ್ಚು SC/ST/OBC ಸಮುದಾಯದ ವಿದ್ಯಾರ್ಥಿಗಳು ಡ್ರಾಪ್ಔಟ್ ಆಗಿದ್ದರು. ಜೊತೆಗೆ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಜಾತಿ ತಾರತಮ್ಯ ದಿನನಿತ್ಯ ಎದುರಿಸುವ ಹಿಂಸೆಯಾಗಿದೆ. ಈ ದಿನನಿತ್ಯದ ಹಿಂಸೆಯನ್ನು ನಿವೃತ್ತ ಯು.ಜಿ.ಸಿ ಅಧ್ಯಕ್ಷರಾದ ಸುಖದೇವ್ ಥೋರಟ್ ನೇತೃತ್ವದ ಸಮಿತಿಯ ವರದಿಯಲ್ಲಿ ವಿವರಿಸಲಾಯಿತು. ಹಾಸ್ಟೆಲ್ನಲ್ಲಿ, ಮೆಸ್ನಲ್ಲಿ, ಆಟದ ಮೈದಾನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಹ ಹೇಗೆ ಜಾತಿಯು ಅಡ್ಡವಾಗಿದೆ ಎಂದು ಅವರ ವರದಿ ವಿವರಿಸಿದೆ” ಎಂದು ಹೇಳಿದರು.
ಇಂದು ಸಹ ಕರ್ನಾಟಕದಲ್ಲಿ ಜಾತಿ ಸಾಮಾನ್ಯ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಒಂದು ಕಡೆ ಸರ್ಕಾರ ಸಾರ್ವಜನಿಕ ಶಿಕ್ಷಣಕ್ಕಾಗಿ ನೀಡುತ್ತಿರುವ ಅನುದಾನ ಸಾಲುತ್ತಿಲ್ಲ. ಇನ್ನೊಂದೆಡೆ ಶಿಕ್ಷಣದ ಖಾಸಗೀಕರಣ ವೇಗವಾಗಿ ಮುಂದುವರಿಯುತ್ತಿದೆ. ಇದರ ಜೊತೆಗೆ NEP, CUET, NEET ನಂತಹ ನೀತಿಗಳಿಂದ ಶಿಕ್ಷಣದ ಕೇಂದ್ರೀಕರಣವಾಗುತ್ತಿದೆ. ಇದರ ಪರಿಣಾಮ ಉನ್ನತ ಶಿಕ್ಷಣ ದಲಿತ-ಬಹುಜನರಿಂದ ದೂರವಾಗಿದೆ. ಇದಕ್ಕೆ ಎರಡು ಇತ್ತೀಚಿನ ಉದಾಹರಣೆಗಳೆಂದರೆ, ಎರಡು ದಿನಗಳ ಹಿಂದೆ ತಾನೇ, ಸರ್ಕಾರ SC/ST/OBC ಸಮುದಾಯದ ವಿದ್ಯಾರ್ಥಿಗಳಿಗೆ ನಡೆಸುವ ಹಾಸ್ಟೆಲ್ಗಳು ಇಂತಹ ಹೀನಾಯ ಪರಿಸ್ಥಿತಿಯಲ್ಲಿವೆ ಎಂಬ ವರದಿ ಮುಖ್ಯವಾಹಿನಿಗಳ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿತ್ತು. ವಿದ್ಯಾರ್ಥಿಗಳಿಗೆ ಪ್ರತಿದಿನ ಸ್ನಾನ ಮಾಡಲು ಸಹ ಆಗದ, ಆರೋಗ್ಯಕರ ಊಟ ಸಿಗದ ಪರಿಸ್ಥಿತಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಇತ್ತೀಚಿಗೆ ಬಿಡುಗಡೆಯಾದ ‘ಶಿಕ್ಷಣ, ಮಹಿಳೆಯರು, ಮಕ್ಕಳು,ಯುವಜನರ ಹಾಗು ಕ್ರೀಡಾ ಸ್ಥಾಯಿ ಸಮಿತಿ’ಯ (Parliamentary Standing Committee on Education, Women, Children, Youth and Sports) ವರದಿಯ ಪ್ರಕಾರ ದೇಶದ 30 ದೊಡ್ಡ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ SC ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 5%!. ಇದನ್ನು ತಡೆಯಲು ಬಿಗಿ ಕಾಯ್ದೆಯ ಅಗತ್ಯವಿದೆ ಎಂದರು.
ರೋಹಿತ್ ಕಾಯ್ದೆಯ ಅಗತ್ಯ
ರೋಹಿತ್ ವೇಮುಲ ಅವರ ತಾಯಿ ಹಾಗೂ ಪಾಯಲ್ ತದ್ವಿ ಅವರ ತಾಯಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಸರ್ಕಾರ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು 2019ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋದರು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತಾರತಮ್ಯವನ್ನು ತಡೆಯಲು ಯು.ಜಿ.ಸಿ ನಿಯಮಗಳೇನೋ ಇವೆ (ಉದಾಹರಣೆಗೆ – Equal Opportunity Cell), ಆದರೆ ಅವುಗಳು ಸಂಪೂರ್ಣವಾಗಿ ಜಾರಿಯಾಗದೇ ತಾರತಮ್ಯವನ್ನು, ದಲಿತ ಬಹುಜನ ವಿದ್ಯಾರ್ಥಿಗಳು ಶಿಕ್ಷಣ ತೊರೆಯುವುದನ್ನು ತಡೆದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣವನ್ನು ದಾಖಲಿಸಿ ಆರು ವರ್ಷಗಳಾಗಿದ್ದು ಹಾಗೂ ಯು.ಜಿ.ಸಿ ನಿಯಮಾವಳಿ ಜಾರಿಯಾಗಿ 13 ವರ್ಷಗಳಾಗಿದ್ದರೂ, ದೇಶದ ವಿಶ್ವವಿದ್ಯಾಲಯಗಳ ಮೇಲ್ವಿಚಾರಣೆ ಮಾಡುವ ಯು.ಜಿ.ಸಿ ತಾರತಮ್ಯವನ್ನು ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಪ್ರಸ್ತುತ ನಿಯಮಾವಳಿಯನ್ನು ಜಾರಿ ಮಾಡದೆ, ಸ್ವೇಚ್ಛಾನುಸಾರವಾಗಿ ನಿಶ್ಯಕ್ತವಾದ ನೂತನ ನಿಯಮಾವಳಿಯನ್ನು ಫೆಬ್ರವರಿ 2025ರಲ್ಲಿ ಜಾರಿಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೊಂದು ಕಡೆ ಜಾತಿ ತಾರತಮ್ಯವನ್ನು ತಡೆಯಲು ಇರುವ ಕಾಯ್ದೆ ಎಂದರೆ ಜಾತಿ ದೌರ್ಜನ್ಯ ತಡೆ ಕಾಯ್ದೆ. ದೌರ್ಜನ್ಯ ತಡೆ ಕಾಯ್ದೆ ಹಲ್ಲೆ, ಜಾತಿ ನಿಂದನೆ, ಲೈಂಗಿಕ ಅತ್ಯಾಚಾರದಂತಹ ಕ್ರಿಮಿನಲ್ ಆಚರಣೆಗಳಿಗೆ ಸೂಕ್ತ. ಆದರೆ ಕಾಲೇಜು ಮಟ್ಟದಲ್ಲಿ ನಡೆಯುವ ತಾರತಮ್ಯ ಈ ಕಾಯ್ದೆಯಡಿ ಪರಿಹರಿಸಲು ಸೂಕ್ತವಾಗಿರುವುದಿಲ್ಲ. ಈ ಕಾಯ್ದೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಸಾಧ್ಯವಿಲ್ಲ. ಥೋರಟ್ ಸಮಿತಿ ವರದಿ ಹೇಳಿದಂತೆ ಉತ್ತಮ ವಾತಾವರಣ ಸೃಷ್ಟಿಸಲು ದಲಿತ ಬಹುಜನ ವಿದ್ಯಾರ್ಥಿಗಳಿಗೆ ಆಂಗ್ಲದಲ್ಲಿ ವಿಶೇಷ ತರಬೇತಿ ನೀಡುವುದು, ದಮನಿಸುವ ಜಾತಿಗಳಿಗೆ ಸೇರಿದ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಜಾತಿ ಬಗ್ಗೆ caste sensitization workshops ಮಾಡಬೇಕು. ಅದು ಇಂದಿನ ನಿಯಮ-ಕಾನೂನುಗಳಲ್ಲಿ ಸಾಧ್ಯವಾಗುತ್ತಿಲ್ಲ.
ಹಾಗಾಗಿ ಈಗಿರುವ ನಿಯಮಗಳು ಹಾಗೂ ಕಾನೂನು ದಲಿತ ಬಹುಜನ ವಿದ್ಯಾರ್ಥಿಗಳಿಗೆ ಘನತೆ, ಸಮಾನ ಅವಕಾಶ, ಸ್ಥಾನಮಾನ ಖಾತ್ರಿಪಡಿಸಲು ವಿಫಲವಾದ ಕಾರಣ, ಇಂದು ರೋಹಿತ್ ಕಾಯ್ದೆ ಅಗತ್ಯವಾಗಿದೆ.
ಹಾಗಾಗಿ ರೋಹಿತ್ ಕಾಯ್ದೆ ಜಾರಿಯಾಗುವಂತೆ, ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಉತ್ತಮ, ಗುಣಮಟ್ಟ ಶಿಕ್ಷಣ ನೀಡುವಂತೆ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ನಿಯಂತ್ರಣ ಆಗುವಂತೆ ಒತ್ತಾಯಿಸಲು ನಾವು ರಾಜ್ಯಮಟ್ಟದ ಆಂದೋಲನ ಕೈಗೊಳ್ಳುತ್ತಿದ್ದೇವೆ. ರಾಜ್ಯದ ಯುವಜನರು ನಮ್ಮೊಂದಿಗೆ ಕೈಜೋಡಿಸುವಂತೆ ವಿನಂತಿಸುತ್ತೇವೆ. ಜಾತಿ ರಹಿತ ಕರ್ನಾಟಕವನ್ನು ಕಟ್ಟುವುದೇ ನಮ್ಮ ಅಂತಿಮ ಗುರಿ ಎಂದರು.
ಹಕ್ಕೊತ್ತಾಯಗಳು
1.ಏಪ್ರಿಲ್ 14, ಅಂದರೆ ಅಂಬೇಡ್ಕರ್ ಜಯಂತಿ, ಒಳಗೆ ರಾಜ್ಯ ಸರ್ಕಾರ ರೋಹಿತ್ ಕಾಯ್ದೆ ಜಾರಿಮಾಡಲು ಅಗತ್ಯ ಕ್ರಮವನ್ನು ಮುಖ್ಯಮಂತ್ರಿಗಳು ಘೋಷಿಸಬೇಕು.
2.ಜಾತಿ ವಿನಾಶವೇ ನಮ್ಮ ಅಂತಿಮ ಗುರಿ, ಅದಕ್ಕೆ ಸೂಕ್ತ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು.
3.ಕಾಯ್ದೆ ಜಾರಿ ಮಾಡಲು ದಲಿತ-ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳಿರುವ ಸಮಿತಿ ರಚನೆಯಾಗಬೇಕು.
4.ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರ ತಾರತಮ್ಯ ರಹಿತವಾಗುವಂತೆ, ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ಸೂಕ್ತ, ಶೀಘ್ರ ಕ್ರಮ ಕೈಗೊಳ್ಳಬೇಕು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ್ ಕೌತಾಳ್, ಮಾವಳ್ಳಿ ಶಂಕರ್, ಡಾ. ಕೆ.ಪಿ ಅಶ್ವಿನಿ, ಆಶ್ನಾ, ಡಾ. ನಂದಕುಮಾರ್, ಲೇಖಾ ಅಡವಿ, ಸರೋವರ್ ಬೆಂಕಿಕೆರೆ, ವೆಂಕಟೇಶ್ ಹಾಜರಿದ್ದರು.