ಪರಿಸರಸ್ನೇಹಿ ಕೀಟನಾಶಕ ಬಳಕೆ ಕುರಿತು ಅರಿವಿನ ಅಗತ್ಯವಿದ್ದು, ಈ ಬಗ್ಗೆ ಕೀಟಶಾಸ್ತ್ರಜ್ಞರು ಸಂಶೋಧನೆಗೆ ಒತ್ತು ನೀಡಬೇಕಾಗಿದೆ ಎಂದು ಕೃಷಿ ಮಹಾವಿದ್ಯಾಲಯ ಡೀನ್ ಡಾ. ಅಶೋಕ ಎಸ್. ಸಜ್ಜನ ಹೇಳಿದರು.
ಅವರಿಂದು ನಗರ ಹೊರವಲಯದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಕೀಟಶಾಸ್ತ್ರ ವಿಭಾಗದ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
“ಕೃಷಿ ಕೀಟಶಾಸ್ತ್ರ ಕ್ಷೇತ್ರದಲ್ಲಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಗುಣಮಟ್ಟವನ್ನು ನೀಡುವುದು ಮತ್ತು ನಿರ್ವಹಿಸುವುದು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕೃಷಿ ಕೀಟಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನಾ ಕಾರ್ಯಕ್ರಮವನ್ನು ರೂಪಿಸಲು ಮತ್ತು ಸ್ವತಂತ್ರ ಸಂಶೋಧನೆ ನಡೆಸಲು ಸಜ್ಜುಗೊಳಿಸಬೇಕಾಗಿದೆ. ಇಂದು ಅನೇಕ ಕೀಟಗಳು ಬೆಳೆಗಳನ್ನು ಬಾದಿಸುತ್ತವೆ. ಅವುಗಳ ಹತೋಟಿಗಾಗಿ ವಿವಿಧ ಕೀಟನಾಶಕ ಬಳಕೆ ಅನಿವಾರ್ಯವಾದರೂ, ಪರಿಸರಸ್ನೇಹಿ ಕೀಟನಾಶಕ ಬಳಕೆಯ ಕುರಿತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು” ಎಂದು ಅಭಿಪ್ರಾಯಪಟ್ಟರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, “ಕೃಷಿ ಸಮುದಾಯಕ್ಕೆ ಸೇವೆ ಸಲ್ಲಿಸುವುದರ ಜೊತೆಗೆ ಕೃಷಿಯಲ್ಲಿ ಕೀಟ, ಕೀಟಗಳ ಸವಾಲುಗಳಿಗೆ ನವೀನ ಮತ್ತು ಪ್ರಾಯೋಗಿಕ ಪರಿಹಾರಗಳನ್ನು ಒದಗಿಸಲು, ನವೀನ ಸಂಶೋಧನಾ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಮತ್ತು ಸೃಜನಶೀಲ, ಹೆಚ್ಚು ಗೋಚರಿಸುವ, ಸಮಸ್ಯೆ-ಪರಿಹಾರ ವಿಸ್ತರಣಾ ಕಾರ್ಯಕ್ರಮಗಳನ್ನು ಒದಗಿಸಲು ವಿಭಾಗದ ಪ್ರಾಧ್ಯಾಪಕರು ಬದ್ಧರಾಗಿದ್ದಾರೆ. ಇಂದು ರೈತರು, ಬೆಳೆಗಳಲ್ಲಿನ ಕೀಟಗಳ ನಿಯಂತ್ರಣಕ್ಕೆ ಹಲವು ಬಗೆಯ ಕೀಟನಾಶಕಗಳ ಬಳಕೆ ಮಾಡುತ್ತಿದ್ದ ಸಮಗ್ರ ಕೀಟನಾಶಕ ಬಳಕೆಯತ್ತ ತಮ್ಮ ಗಮನ ಹರಿಸಬೇಕು” ಎಂದರು.
ಕೀಟಶಾಸ್ತ್ರ ವಿಭಾಗದ ವಿವಿ ಮುಖ್ಯಸ್ಥ ಡಾ. ಎಸ್. ಬಿ. ಜಗ್ಗಿನವರ ಮಾತನಾಡಿ, “ಒಟ್ಟು 31 ಕೀಟ ವಿಜ್ಞಾನಿಗಳಿದ್ದು, ಅವರೆಲ್ಲರು ಕೃಷಿ ಕೀಟಶಾಸ್ತ್ರದಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಣಕಾಸಿನ ಮಂಜೂರಾತಿಗಳೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ. ರೈತರಿಗೆ ಅನುಕೂಲವಾಗುವ ತಂತ್ರಜ್ಞಾನ ಅಭಿವೃದ್ಧಿಪಡಿಸುವದರ ಮೂಲಕ ಸುಸ್ಥಿರ ಕೀಟ ನಿರ್ವಹಣೆ ಸ್ಥಾಪಿಸಲು ಅನುಕೂಲವಾಗಿದೆ” ಎಂದರು.
ಇದನ್ನೂ ಓದಿ: ವಿಜಯಪುರ | ವಕ್ಫ್ ತಿದ್ದುಪಡಿ ಮಸೂದೆ 2024ರ ವಿರುದ್ಧ ಮೌನ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಉಪಕೃಷಿ ನಿರ್ದೇಶಕ ಡಾ. ಬಾಲರಾಜ ಬಿರಾದಾರ, ಡಾ. ಎಸ್ ಎಸ್ ಕರಭಂಟನಾಳ, ಡಾ. ಎ ಪಿ ಬಿರಾದಾರ ಡಾ. ಎನ್ ಡಿ ಸುನಿತಾ, ಡಾ. ಮಹಾಬಲ್ಲೇಶ್ವರ ಹೆಗಡೆ, ಡಾ. ಸಿ ಪಿ ಮಲ್ಲಾಪೂರ, ಡಾ. ಎ ಪಿ ಬಿರಾದಾರ, ಡಾ. ಸಿ ಎಮ್ ರಫೀ, ಡಾ. ಡಿ ಎನ್ ಕಾಂಬ್ರೇಕರ, ಡಾ. ರೂಪಾ ಪಾಟೀಲ, ಡಾ. ಎ ಹೆಚ್ ಬಿರಾದಾರ, ಡಾ. ರವಿಕುಮಾರ ಹೊಸಮನಿ, ಡಾ. ಸಿ ಎಮ್ ತಿಪ್ಪಣ್ಣವರ, ಡಾ. ಎಸ್ ಟಿ ಪ್ರಭು, ಡಾ. ರೋಹಿಣಿ ಸುಗಂದಿ ಸೇರಿದಂತೆ ಧಾರವಾಡ ಕೃಷಿ ವಿವಿ ವ್ಯಾಪ್ತಿಯ ಪ್ರಾಧ್ಯಾಪಕರು ಸಂಶೋಧನಾ ಹಾಗೂ ವಿಸ್ತರಣಾ ವಿಜ್ಞಾನಿಗಳು ಭಾಗವಹಿಸಿದ್ದರು.