ಸಂಸತ್ನಲ್ಲಿ ಎನ್ಡಿಎ ಸರ್ಕಾರ ಮಂಡಿಸಿದ ‘ವಕ್ಫ್ (ತಿದ್ದುಪಡಿ) ಮಸೂದೆ-2024’ಅನ್ನು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬೆಂಬಲಿಸಿದೆ. ಸಂಸತ್ನಲ್ಲಿ ಮಸೂದೆ ಪರವಾಗಿ ಮತ ಚಲಾಯಿಸಿದೆ. ಈ ಬೆನ್ನಲ್ಲೇ, ಬಿಹಾರದಲ್ಲಿ ಜೆಡಿಯು ಹಿರಯ ನಾಯಕರು ಪಕ್ಷಕ್ಕೆ ಸರಣಿ ರಾಜೀನಾಮೆ ನೀಡಿದ್ದಾರೆ. ಪಕ್ಷ ತೊರೆದು ಹೊರಬಂದಿದ್ದಾರೆ.
ಜೆಡಿಯು ಹಿರಿಯ ನಾಯಕರಾದ ಮೊಹಮ್ಮದ್ ಖಾಸಿಮ್ ಅನ್ಸಾರಿ ಮತ್ತು ಮೊಹಮ್ಮದ್ ನವಾಜ್ ಮಲಿಕ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪ್ರತ್ಯೇಕ ಪತ್ರಗಳಲ್ಲಿ ಬರೆದಿದ್ದಾರೆ. ಪಕ್ಷವು ಜಾತ್ಯತೀತ ಸಿದ್ಧಾಂತವನ್ನು ಒಳಗೊಂಡಿತ್ತು. ಅದನ್ನೇ ನಾವು ನಂಬಿದ್ದೆವು. ಆದರೆ, ಈಗ ಪಕ್ಷವು ಮುಸ್ಲಿಮರ ಎಲ್ಲ ನಂಬಿಕೆಯನ್ನು ಕಳೆದುಕೊಂಡಿದೆ” ಎಂದು ಹೇಳಿದ್ದಾರೆ.
“ನನ್ನ ಜೀವನದ ಹಲವಾರು ವರ್ಷಗಳನ್ನು ಪಕ್ಷದ ಸಂಘಟನೆಗೆ ನೀಡಿದ್ದಕ್ಕಾಗಿ ನಾನು ನಿರಾಶೆಗೊಂಡಿದ್ದೇನೆ” ಎಂದು ಅನ್ಸಾರಿ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
“ನಮ್ಮಂತಹ ಲಕ್ಷಾಂತರ ಭಾರತೀಯ ಮುಸ್ಲಿಮರು ನೀವು ಸಂಪೂರ್ಣವಾಗಿ ಜಾತ್ಯತೀತ ಸಿದ್ಧಾಂತದ ಧ್ವಜವಾಹಕರು ಎಂದು ಅಚಲ ನಂಬಿಕೆಯನ್ನು ಹೊಂದಿದ್ದರು. ಆದರೆ, ಈಗ ಈ ನಂಬಿಕೆ ಮುರಿದುಹೋಗಿದೆ. ನಮ್ಮಂತಹ ಲಕ್ಷಾಂತರ ಸಮರ್ಪಿತ ಭಾರತೀಯ ಮುಸ್ಲಿಮರು ಮತ್ತು ಕಾರ್ಯಕರ್ತರು ಜೆಡಿಯು ನಿಲುವಿನಿಂದ ತೀವ್ರವಾಗಿ ಆಘಾತಕ್ಕೊಳಗಾಗಿದ್ದಾರೆ” ಎಂದು ಹೇಳಿದ್ದಾರೆ.
“ವಕ್ಫ್ ಮಸೂದೆಯು ಭಾರತೀಯ ಮುಸ್ಲಿಮರ ವಿರುದ್ಧವಿದೆ. ಅದನ್ನು ಯಾವುದೇ ಸಂದರ್ಭಗಳಲ್ಲಿಯೂ ಸ್ವೀಕರಿಸುವುದಿಲ್ಲ. ಈ ಮಸೂದೆಯ ಮೂಲಕ, ಭಾರತೀಯ ಮುಸ್ಲಿಮರನ್ನು ಅವಮಾನಿಸಲಾಗುತ್ತಿದೆ. ನೀವು ಅಥವಾ ನಿಮ್ಮ ಪಕ್ಷ ಇದನ್ನು ಅರಿತುಕೊಳ್ಳುತ್ತಿಲ್ಲ. ನಾನು ನನ್ನ ಜೀವನದ ಹಲವು ವರ್ಷಗಳನ್ನು ಪಕ್ಷಕ್ಕಾಗಿ ವ್ಯಯಿಸಿದ್ದಕ್ಕೆ ನನಗೆ ವಿಷಾಧವಿದೆ” ಎಂದಿದ್ದಾರೆ.
“ವಕ್ಫ್ ಮಸೂದೆಯು ಸಂವಿಧಾನದಲ್ಲಿ ತಿಳಿಸಲಾದ ಅನೇಕ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ” ಎಂದು ನವಾಜ್ ಮಲಿಕ್ ಹೇಳಿದ್ದಾರೆ.
ನಿತೀಶ್ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ಮಲಿಕ್, “ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಜೆಡಿ(ಯು) ತೆಗೆದುಕೊಂಡ ನಿಲುವು ಸಮರ್ಪಿತ ಭಾರತೀಯ ಮುಸ್ಲಿಮರು ಮತ್ತು ನಮ್ಮಂತಹ ಪಕ್ಷದ ಕಾರ್ಯಕರ್ತರಿಗೆ ತೀವ್ರವಾಗಿ ನೋವುಂಟು ಮಾಡಿದೆ. ಲಾಲನ್ ಸಿಂಗ್ ಲೋಕಸಭೆಯಲ್ಲಿ ಮಾತನಾಡಿದ ಮತ್ತು ಈ ಮಸೂದೆಯನ್ನು ಬೆಂಬಲಿಸಿದ ರೀತಿ ನಮಗೆ ನಿರಾಶೆಯನ್ನುಂಟು ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಯುನ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ನವಾಜ್ ಮಲಿಕ್ ಕೂಡ ರಾಜೀನಾಮೆ ನೀಡಿದ್ದಾರೆ. ವಕ್ಫ್ ಮಸೂದೆಗೆ ಪಕ್ಷದ ಬೆಂಬಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ, ಲೋಕಸಭೆಯಲ್ಲಿ ವಕ್ಫ್ ಮಸೂದೆ ಬಗ್ಗೆ ಭಾರೀ ಚರ್ಚೆಗಳು ನಡೆದವು. ಚರ್ಚೆಯ ವೇಳೆ, ಕೇಂದ್ರ ಸಚಿವ ಮತ್ತು ಜೆಡಿಯು ನಾಯಕ ರಾಜೀವ್ ರಂಜನ್ ಸಿಂಗ್ ಅವರು ಮಸೂದೆಯನ್ನು ಸಮರ್ಥಿಸಿಕೊಂಡರು. ಅವರ ಸಮರ್ಥನೆ ಬೆನ್ನಲ್ಲೇ, ಜೆಡಿಯುಗೆ ಸರಣಿ ರಾಜೀನಾಮೆ ನೀಡುವುದು ಆರಂಭವಾಗಿದೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಮಸೂದೆ: ಮುಸ್ಲಿಮರ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಿಗೆ ಕಡಿತ ಖಂಡಿತ
ಲೋಕಸಭೆಯಲ್ಲಿ ವಕ್ಫ್ ಮಸೂದೆ ಕುರಿತು ಮಾತನಾಡಿದ್ದ ರಾಜೀವ್ ರಂಜನ್ ಸಿಂಗ್, “ಇದು ಪಾರದರ್ಶಕತೆಯನ್ನು ತರಲು ಮತ್ತು ಮುಸ್ಲಿಂ ಸಮುದಾಯದ ಎಲ್ಲ ವರ್ಗಗಳ ಕಲ್ಯಾಣವನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿದೆ. ಮಸೂದೆಯನ್ನು ‘ಮುಸ್ಲಿಂ ವಿರೋಧಿ’ಯೆಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಅಂತಹ ವಾದವನ್ನು ಒಪ್ಪಲಾಗದು” ಎಂದಿದ್ದರು.
“ವಕ್ಫ್ ಎಂಬುದು ಮುಸ್ಲಿಮರ ಹಿತಾಸಕ್ತಿಗಾಗಿ ಕೆಲಸ ಮಾಡಲು ರಚಿಸಲಾದ ಒಂದು ರೀತಿಯ ಟ್ರಸ್ಟ್ ಆಗಿದೆ. ಇದು ಧಾರ್ಮಿಕ ಸಂಘಟನೆಯಲ್ಲ… ಟ್ರಸ್ಟ್ ಎಲ್ಲ ವರ್ಗಗಳ ಮುಸ್ಲಿಮರಿಗೆ ನ್ಯಾಯ ಒದಗಿಸುವ ಹಕ್ಕನ್ನು ಹೊಂದಿದೆ. ಆದರೆ ಅದು ನಡೆಯುತ್ತಿಲ್ಲ… ಇಂದು, ಒಂದು ನಿರೂಪಣೆ ರಚಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಲಾಗುತ್ತಿದೆ. ನಿಮಗೆ ಅವರನ್ನು ಇಷ್ಟವಾಗದಿದ್ದರೆ, ಅವರನ್ನು ನೋಡಬೇಡಿ, ಆದರೆ ಅವರ ಒಳ್ಳೆಯ ಕೆಲಸವನ್ನು ಪ್ರಶಂಸಿಸಿ” ಎಂದು ರಂಜನ್ ಸಿಂಗ್ ಹೇಳಿದ್ದಾರೆ.
“ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಜೆಡಿಯು ಬೆಂಬಲವನ್ನು ನೀಡಿದ ನಂತರ ನಾವು ವಂಚನೆಗೊಳಗಾಗಿದ್ದೇವೆ. ಈಗ ಜಾತ್ಯತೀತ ಮತ್ತು ಕೋಮುವಾದಿ ಶಕ್ತಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲದಂತಾಗಿದೆ” ಎಂದು ಮಾಜಿ ರಾಜ್ಯಸಭಾ ಸದಸ್ಯ ಮತ್ತು ಜೆಡಿಯು ಪ್ರಧಾನ ಕಾರ್ಯದರ್ಶಿ ಗುಲಾಂ ರಸೂಲ್ ಬಲ್ಯಾವಿ ಹೇಳಿದ್ದಾರೆ.
ಜೆಡಿಯು ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಮತ್ತು ಬಿಹಾರ ವಿಧಾನ ಪರಿಷತ್ತಿನ ಉಪಾಧ್ಯಕ್ಷ ಸಲೀಂ ಪರ್ವೇಜ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಮಸೂದೆಯ ಬಗ್ಗೆ ಪಕ್ಷದ ಮುಸ್ಲಿಂ ಮುಖಂಡರ ಅಸಮಾಧಾನವನ್ನು ತಿಳಿಸುವುದಾಗಿ ಹೇಳಿದ್ದಾರೆ.