ಕನ್ನಡದ ಮೊದಲ ವಚನಕಾರ ದೇವರ ದಾಸಿಮಯ್ಯರ ವಚನಗಳು ವ್ಯಕ್ತಿಯ ಆತ್ಮ ಶುದ್ದಿಗೊಳಿಸುತ್ತವೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಂ ನಾಗರಾಜ ಹೇಳಿದರು.
ವಿವಿಯಲ್ಲಿ ಆಯೋಜಿಸಿದ್ದ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ದೇವರ ದಾಸಿಮಯ್ಯ ಅವರ ವಚನಗಳು ಸಮಾಜದಲ್ಲಿ ಮಹತ್ವದ ಪರಿವರ್ತನೆಗಳನ್ನು ಉಂಟುಮಾಡುವ ಶಕ್ತಿ ಹೊಂದಿವೆ. ಅವರ ವಚನಗಳಲ್ಲಿ ಶ್ರಮಪೂಜೆ, ಭಕ್ತಿ, ಮಾನವೀಯತೆ ಮತ್ತು ಸಮಾನತೆಯ ಆದರ್ಶಗಳು ಸ್ಪಷ್ಟವಾಗಿ ಪ್ರತಿಫಲಿಸುತ್ತವೆ. ಅವರ ವಚನಗಳು ಕೇವಲ ಭಕ್ತಿಯ ಸಾರವಲ್ಲ, ಅದು ಬದುಕಿನ ನೈತಿಕ ಮೌಲ್ಯಗಳಿಗೂ ದಾರಿದೀಪವಾಗಿದೆ. ಹೊಸ ತಲೆಮಾರಿಗೆ ದಾಸಿಮಯ್ಯನ ವಚನಗಳು ಸೌಹಾರ್ದತೆ, ಸತ್ಕಾರ್ಯ ಮತ್ತು ಮಾನವೀಯತೆಯ ಆಧಾರಶಿಲೆಯಾಗಿ ಕಾರ್ಯನಿರ್ವಹಿಸುತ್ತವೆ” ಎಂದರು.
ವಿವಿಯ ಯುಜಿ ಸ್ನಾತಕ ವಿಭಾಗದ ವಿಶೇಷಾಧಿಕಾರಿ ಪ್ರೊ. ಸಕಾಲ ಹೂವಣ್ಣ ಮಾತನಾಡಿ, “ದೇವರ ದಾಸಿಮಯ್ಯ ಅವರ ವಚನಗಳು ಇಂದಿಗೂ ಸಮಾಜದ ಸುಧಾರಣೆಗೆ ಪ್ರೇರಣೆಯಾಗಿದ್ದು, ಅವು ಬದುಕಿಗೆ ಮಾರ್ಗದರ್ಶಕ ಬೆಳಕಾಗಿ ಕೆಲಸ ಮಾಡುತ್ತವೆ. ವಿದ್ಯಾರ್ಥಿನಿಯರು ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಆದರ್ಶಗಳನ್ನು ಜ್ಞಾಪಿಸಿಕೊಳ್ಳಬೇಕು” ಎಂದರು.
ಇದನ್ನೂ ಓದಿ: ವಿಜಯಪುರ | ʼಏತ ನೀರಾವರಿ ಪೂರ್ಣಗೊಳಿಸಿ ರೈತರ ಹಿತ ಕಾಪಾಡಿʼ
ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕಿ ಡಾ. ಜಿ ಸೌಭಾಗ್ಯ, ಡಾ. ಚೆಲುವರಾಜು, ಸಾಂಸ್ಕೃತಿಕ ಸಂಯೋಜಕ ಡಾ. ಮೆಹರಾಜ್ ಹಾಗೂ ಬೋಧಕ , ಬೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.