ಐಪಿಎಲ್ 2025ರ ಆವೃತ್ತಿಯ ಮಹತ್ವದ ಪಂದ್ಯಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಒಂದ್ಯ ಮುಂಬೈನ ವಾಂಖೇಡೆಯಲ್ಲಿ ಇಂದು ಸಂಜೆ ನಡೆಯಲಿದೆ.
ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕಸನು ಉಭಯ ತಂಡದ್ದಾಗಿದೆ. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಈ ವೇಳೆ ತಂಡದ ಗೆಲುವಿಗೆ ಅಗತ್ಯ ಕಾಣಿಕೆಯನ್ನು ಇವರು ನೀಡಬಲ್ಲರು. ಉಭಯ ತಂಡಗಳು ಒಟ್ಟಾರೆ ಐಪಿಎಲ್ನಲ್ಲಿ 33 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 19 ಗೆಲುವು ದಾಖಲಿಸಿದೆ. ಆರ್ಸಿಬಿ 13 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಉಭಯ ತಂಡಗಳ ಪ್ಲೇ ಆಫ್ ಕನಸಿಗೆ ಪುಷ್ಠಿ ನೀಡಲು ಗೆಲುವು ಅನಿವಾರ್ಯವಾಗಿದೆ. ಒಟ್ಟಾರೆ ಈ ಮೈದಾನ 85 ಐಪಿಎಲ್ ಪಂದ್ಯಗಳಿಗೆ ಆತಿಥ್ಯ ನೀಡಿದೆ.
ಸಾಮಾನ್ಯವಾಗಿ ಮುಂಬೈನಲ್ಲಿ ಕೆಂಪು ಮಣ್ಣಿನ ಪಿಚ್ ಇರುತ್ತದೆ. ಈ ಪಿಚ್ಗಳಲ್ಲಿ ಬ್ಯಾಟರ್ಗಳು ಉತ್ತಮ ಬ್ಯಾಟಿಂಗ್ ನಡೆಸುತ್ತಾರೆ. ಈ ಮೈದಾನದಲ್ಲಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಮಾಡುವ ನಿರ್ಧಾರ ಕೈಗೊಳ್ಳಬಹುದು. ವಿರಾಟ್ ಮೇಲೆ ಚಿತ್ತ ಆರ್ಸಿಬಿ ತಂಡ ಈ ಬಾರಿ ಸಂಘಟಿತ ಆಟವನ್ನು ಪ್ರದರ್ಶಿಸಿ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು.
ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಚೆನ್ನೈನಲ್ಲಿ ಸಿಎಸ್ಕೆ ವಿರುದ್ಧ ಗೆಲುವಿನ ಹುಮ್ಮಸ್ಸಿನಲ್ಲಿತ್ತು. ಆದರೆ ಗುಜರಾತ್ ಟೈಟಾನ್ಸ್ ಇದಕ್ಕೆ ತಡೆ ನೀಡಿತು. ಹೀಗಾಗಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಬ್ಯಾಟರ್ಗಳು ಜವಾಬ್ದಾರಿಯುತ ಆಟವನ್ನು ಆಡುವ ಅನಿವಾರ್ಯತೆಯಿದೆ. ಆರಂಭಿಕ ಆಟಗಾರರಲ್ಲಿ ಕಾಣಿಸಿಕೊಳ್ಳುವ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ದೊಡ್ಡ ಇನಿಂಗ್ಸ್ ಕಟ್ಟಬೇಕಿದೆ.
ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ದೇವದತ್ ಪಡಿಕ್ಕಲ್ ತಮ್ಮ ನೈಜ ಆಟವನ್ನು ಆಡಬೇಕಿದೆ. ಇನ್ನು ನಾಯಕ ರಜತ್ ಪಟಿದಾರ್ ಈ ಲೀಗ್ನಲ್ಲಿ ತಮ್ಮ ಸ್ಥಿರ ಪ್ರದರ್ಶನದ ಮೂಲಕ ರನ್ಗಳನ್ನು ಕಲೆ ಹಾಕಿದ್ದಾರೆ. ಇದೇ ಪ್ರದರ್ಶನ ಮುಂದುವರೆಸಬೇಕಿದೆ. ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್ಸ್ಟೋನ್ ಫಿನಿಷರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕಿದೆ. ಇನ್ನು ಟೀಮ್ ಡೇವಿಡ್ ಡೆತ್ ಓವರ್ಗಳಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ನಿಂದ ಎದುರಾಳಿ ಬೌಲರ್ಗಳನ್ನು ಕಾಡಿದರೆ, ದೊಡ್ಡ ಮೊತ್ತ ಕಲೆ ಹಾಕಬಹುದಾಗಿದೆ.
ಬೌಲಿಂಗ್ನಲ್ಲಿ ಜೋಶ್ ಹ್ಯಾಜಲ್ವುಡ್ಗೆ, ಸ್ವಿಂಗ್ ಸುಲ್ತಾನ್ ಭುವನೇಶ್ವರ್ ಕುಮಾರ್ ಉತ್ತಮ ಜೊತೆ ನೀಡಬೇಕಿದೆ. ಈ ಇಬ್ಬರೂ ಬೌಲರ್ಗಳು ಪವರ್ ಪ್ಲೇನಲ್ಲಿ ವಿಕೆಟ್ ಬೇಟೆ ನಡೆಸುವ ಅನಿವಾರ್ಯತೆ ಇದೆ. ಇನ್ನು ಮಿಡ್ಲ್ ಓವರ್ಗಳಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ ಬಿಗುವಿನ ದಾಳಿ ನಡೆಸಿ ಭರವಸೆಯನ್ನು ಮೂಡಿಸಿದ್ದಾರೆ. ಕೃನಾಲ್ ಪಾಂಡ್ಯ, ಸುಯೇಶ್ ಶರ್ಮಾ ತಮ್ಮ ನೈಜ ಸ್ಪಿನ್ ಮೋಡಿಯ ಮೂಲಕ ಎದುರಾಳಿ ಬ್ಯಾಟರ್ಗಳನ್ನು ಕಾಡಬೇಕಿದೆ. ಎಡಗೈ ವೇಗಿ ಯಶ್ ದಯಾಳ್ ಅಂತಿಮ ಓವರ್ಗಳಲ್ಲಿ ಬಿಗುವಿನ ದಾಳಿ ನಡೆಸಿ ತಂಡದ ಜಯದಲ್ಲಿ ಮಿಂಚಬೇಕಿದೆ.
ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿಗೆ ಮರಳಲು ಇದು ಉತ್ತಮ ಅವಕಾಶ. ಆಡಿದ ನಾಲ್ಕು ಪಂದ್ಯಗಳಲ್ಲಿ ಮುಂಬೈ ಕೇವಲ ಒಂದು ಗೆಲುವು ದಾಖಲಿಸಿದ್ದು, ಈ ಲೀಗ್ ಈ ತಂಡಕ್ಕೆ ಅಂದುಕೊಂಡಂತೆ ನಡೆಯುತ್ತಿಲ್ಲ. ತವರಿನಲ್ಲಿ ಕೆಕೆಆರ್ ವಿರುದ್ಧ ನೀಡಿದ ಪ್ರದರ್ಶನನ್ನು ಮತ್ತೆ ಮರುಕಳಿಸಬೇಕಿದೆ. ರೋಹಿತ್ ಶರ್ಮಾ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ನಿಶ್ಚಿತವಾಗಿ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇನ್ನು ರಯಾನ್ ರಿಕೆಲ್ಟನ್ ಭರವಸೆಯ ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬ್ಯಾಟ್ ಅಬ್ಬರ ನಡೆಸದೇ ಇರುವುದು ತಂಡದ ಆತಂಕ ಇಮ್ಮಡಿ ಗೊಳಿಸಿದೆ. ಸೂರ್ಯಕುಮಾರ್ ಯಾದವ್ ಈ ಲೀಗ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇವರಿಗೆ ಉಳಿದ ಬ್ಯಾಟರ್ಗಳು ಉತ್ತಮ ಸಾಥ್ ನೀಡಬೇಕಿದೆ.
ಮರಳಿದ ಬೂಮ್ರಾ
ಗಾಯದ ಸಮಸ್ಯೆಯಿಂದ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದ ಯಾರ್ಕರ್ ಪರಿಣಿತ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದಾರೆ. ಬುಮ್ರಾ ಆಗಮನದ ಸಂತಸ ಸುದ್ದಿಯನ್ನು ಮುಂಬೈ ಇಂಡಿಯನ್ಸ್ ತಂಡ ಖಚಿತಪಡಿಸಿದೆ.
ಕಳೆದ ವರ್ಷ ಸಿಡ್ನಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ 5ನೇ ಟೆಸ್ಟ್ನಲ್ಲಿ ಗಾಯಗೊಂಡಿದ್ದ ಬುಮ್ರಾ, ಆಸೀಸ್ನ ದ್ವಿತೀಯ ಇನಿಂಗ್ಸ್ ವೇಳೆ ಬೌಲಿಂಗ್ ಮಾಡಿರಲಿಲ್ಲ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 32 ವಿಕೆಟ್ ಪಡೆದ ನಂತರ ಬುಮ್ರಾ, ಸ್ಪರ್ಧೆಯಿಂದ ಹೊರಗಿದ್ದರು. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾಗವಹಿಸಿರಲಿಲ್ಲ. ಇದೀಗ ಬುಮ್ರಾ ಮುಂಬೈ ತಂಡಕ್ಕೆ ವಾಪಸ್ ಆಗಿದ್ದಾರೆ. ನಾಳೆ ಆರ್ಸಿಬಿ ವಿರುದ್ಧ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.