- ಬೈಕ್ನ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಬಾಲಕರು
- ಬೈಕ್ನ ಬಿಡಿಭಾಗಗಳ ಮಾರಾಟ ಮಾಡಿದ ಆರೋಪಿಗಳು
ಬೈಕ್ನ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ 16 ವರ್ಷದ ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಆಂಧ್ರಪ್ರದೇಶ ಸೇರಿದಂತೆ ನಾನಾ ನಗರಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಬಾಲಕರು ಬರೋಬ್ಬರಿ 44 ಬೈಕ್ಗಳನ್ನು ಕಳ್ಳತನ ಮಾಡಿದ್ದಾರೆ. ಪೊಲೀಸರು ಬಾಲಕರನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಿದ್ದಾರೆ. ಇವರು ಬಹುತೇಕ ಗೇರ್ಲೆಸ್ ಸ್ಕೂಟರ್ಗಳನ್ನು ಕಳ್ಳತನ ಮಾಡಿದ್ದಾರೆ.
ಪೊಲೀಸರು, ಅಪ್ರಾಪ್ತ ವಯಸ್ಕರನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳುವುದನ್ನು ನಿಷೇಧಿಸಿರುವುದರಿಂದ ಬಾಲಕರನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸುವ ಮೊದಲು ಅವರ ಪೋಷಕರು ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳ ಸಮ್ಮುಖದಲ್ಲಿ ಅವರನ್ನು ವಿಚಾರಣೆ ಮಾಡಿದ್ದಾರೆ.
ವಿಚಾರಣೆ ವೇಳೆ ಬಾಲಕರು ಬೈಕ್ನ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇಬ್ಬರು ಬಾಲಕರ ಪೈಕಿ ಓರ್ವ ಬಾಲಕ ಬೆಂಗಳೂರಿನಲ್ಲಿ ತಾಯಿ ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದನು. ಇವರಿಗೆ ಬಾಲಕ ಪ್ರತಿನಿತ್ಯ ಕಾಟ ಕೊಡುತ್ತಿದ್ದನು ಮತ್ತು ಜಗಳವಾಡುತ್ತಿದ್ದನು. ಬಾಲಕನಿಗೆ ತಂಬಾಕು ಸೇವನೆಯ ಚಟವಿತ್ತು. ಹೀಗಾಗಿ, ಇತನನ್ನು ಸರಿದಾರಿಗೆ ತರಲು ಇತನ ತಾಯಿ ಒಂದೆರಡು ವರ್ಷಗಳ ಹಿಂದೆ ಮಗನನ್ನು ರಿಮ್ಯಾಂಡ್ ಹೋಮ್ಗೆ ಸೇರಿಸಿದ್ದಳು.
“ರಿಮ್ಯಾಂಡ್ ಹೋಮ್ನಲ್ಲಿರುವ ಇನ್ನೊಬ್ಬ ಹುಡುಗನೊಂದಿಗೆ ಸ್ನೇಹ ಬೆಳೆಸಿದ ಇತ ದ್ವಿಚಕ್ರ ವಾಹನಗಳ ಹ್ಯಾಂಡಲ್ ಮುರಿದು ಬೈಕ್ ಹೇಗೆ ಖದೀಯಬೇಕು ಹಾಗೂ ಎಲೆಕ್ಟ್ರಿಕಲ್ ಸರ್ಕ್ಯೂಟ್ ಅನ್ನು ಟ್ಯಾಂಪರಿಂಗ್ ಮಾಡಿ ಕಳ್ಳತನ ಮಾಡಿ ಒಡಿಸುವದನ್ನು ಕಲಿತನು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
“ಇನ್ನೊಬ್ಬ ಹುಡುಗನ ತಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಗುತ್ತಿಗೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಗೃಹಿಣಿ. ಇಬ್ಬರೂ ಹುಡುಗರು ಹೈಸ್ಕೂಲ್ ಡ್ರಾಪ್ ಔಟ್ ಆಗಿದ್ದಾರೆ. ಒಬ್ಬನು 7 ನೇ ತರಗತಿ ಮತ್ತೋಬ್ಬ 8 ನೇ ತರಗತಿಯವರೆಗೆ ಮಾತ್ರ ಶಿಕ್ಷಣ ಕಲಿತಿದ್ದಾರೆ. ಇವರು ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದರಿಂದ ನಿಕಟ ಸ್ನೇಹಿತರಾದರು” ಎಂದರು.
“ಹಗಲು ರಾತ್ರಿ ಗೊತ್ತುಗುರಿಯಿಲ್ಲದೆ ತಿರುಗಾಡುತ್ತಾ, ಅವರು ಪ್ರತ್ಯೇಕ ಸ್ಥಳಗಳಲ್ಲಿ ಅಥವಾ ಮಂದ ಬೆಳಕಿನಲ್ಲಿರುವ ವಸತಿ ಪ್ರದೇಶಗಳಲ್ಲಿ ನಿಲ್ಲಿಸಿದ ಬೈಕ್ಗಳನ್ನು ಕದಿಯುತ್ತಿದ್ದರು. ತಾವು ಬ್ಯಾಂಕ್ಗಳಿಗೆ ರಿಕವರಿ ಏಜೆಂಟ್ಗಳಾಗಿ ಕೆಲಸ ಮಾಡುತ್ತಿದ್ದು, ಸಾಲವನ್ನು ಪಾವತಿಸದ ಕಾರಣ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೊಂಡು ಸುಮಾರು 18 ಬೈಕ್ಗಳನ್ನು ತಲಾ ₹5,000 ಗಾರ್ಮೆಂಟ್ಸ್, ಸೆಕ್ಯುರಿಟಿ ಏಜೆನ್ಸಿಗಳು ಅಥವಾ ಕಾರ್ಮಿಕರಾಗಿ ಕೆಲಸ ಮಾಡುವ ಪುರುಷರಿಗೆ ಮಾರಾಟ ಮಾಡಿದ್ದಾರೆ. ಮಾರಾಟವಾಗದ ವಾಹನಗಳನ್ನು ಬಿಟ್ಟುಬಿಡುವ ಮೊದಲು ಜಾಲಿ ರೈಡ್ ಮತ್ತು ವೀಲಿಂಗ್ ಮಾಡುತ್ತಿದ್ದರು. ಕೆಲವೊಮ್ಮೆ, ಬೈಕ್ನ ಟೈರ್ ಸೇರಿದಂತೆ ಬಿಡಿಭಾಗಗಳನ್ನು ಮಾರಾಟ ಮಾಡಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಕ್ರೀದ್ ಹಬ್ಬ | ಈದ್ಗಾ ಮೈದಾನದಲ್ಲಿ ಭರ್ಜರಿ ವ್ಯಾಪಾರ
ಪೊಲೀಸರ ಪ್ರಕಾರ, ಅಪ್ರಾಪ್ತರಿಬ್ಬರೂ ಯಾವುದೇ ಅಪರಾಧದ ಹಿನ್ನೆಲೆ ಹೊಂದಿಲ್ಲ. ಅವರ ಕೆಲವು ಹಿರಿಯ ಸ್ನೇಹಿತರು ದರೋಡೆ ಮತ್ತು ವಾಹನ ಕಳ್ಳತನದ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಬೆಂಗಳೂರಿನಲ್ಲಿ ಜೆಪಿ ನಗರ, ಬನಶಂಕರಿ, ಜಯನಗರ, ತಿಲಕನಗರ, ಮೈಕೋ ಲೇಔಟ್, ಎಚ್ಎಎಲ್, ಕೆಆರ್ ಪುರಂ, ಬೆಳ್ಳಂದೂರು, ಎಚ್ಎಸ್ಆರ್ ಲೇಔಟ್ ಮತ್ತು ಕಾಡುಗೋಡಿಯಲ್ಲಿ ಇವರಿಬ್ಬರು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದಾರೆ.