- ‘ಜಲಾನಯನ ಪ್ರದೇಶದ ಪುನಶ್ವೇತನಕ್ಕೆ 600 ಕೋಟಿಯ ನೆರವು’
- ಕೃಷಿ ಉದ್ಯಮಗಳಿಗೆ ಪ್ರೋತ್ಸಾಹ ನೀಡಿ: ಸಚಿವ ಚಲುವರಾಯಸ್ವಾಮಿ
ವಿಶ್ವ ಬ್ಯಾಂಕಿನ ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕ ಜಾನ್ ರೂಮ್ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗ ನಾಲ್ಕು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಿದ್ದು, ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮತ್ತು ಸರ್ಕಾರದ ಉನ್ನತ ಅಧಿಕಾರಿಗಳ ಜತೆ ನಿಯೋಗ ಸಭೆ ನಡೆಸಿದೆ.
ಈ ಭೇಟಿಯ ಭಾಗವಾಗಿ, ವಿಶ್ವಬ್ಯಾಂಕ್ ತಂಡ ಪ್ರಸ್ತುತ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿಶ್ವಬ್ಯಾಂಕ್ ಅನುದಾನಿತ ರಿವಾರ್ಡ್ ಯೋಜನೆ ಮತ್ತು ರಾಜ್ಯದಲ್ಲಿ ಜಲಾನಯನ ಅಭಿವೃದ್ಧಿಗಾಗಿ ಪರಸ್ಪರ ಸಹಯೋಗವನ್ನು ಮುಂದುವರೆಸುವ ಕುರಿತು ಚರ್ಚಿಸಲಾಯಿತು.
ಸಿರಿ ಧಾನ್ಯ ಬೆಳೆಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಹಾಗೂ ರಫ್ತು, ರಾಜ್ಯದ ವಿವಿಧ ವಲಯಗಳ ಕೃಷಿ ಮೂಲ ಸೌಕರ್ಯಗಳ ಅಭಿವೃದ್ಧಿ, ದೀರ್ಘಾವಧಿ ಉಪಚಾರಗಳಿಂದ ಮಣ್ಣಿನ ಸಾವಯವ ಇಂಗಾಲದ ಮರುಸ್ಥಾಪನೆ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರಗಳಿಗೆ ವಿಧಾನ ಬಳಸಿ ಕ್ರಿಯಾತ್ಮಕ ಕೃಷಿ ಅಭಿವೃದ್ಧಿ, ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಗ್ರಾಮೀಣ ಮಾರುಕಟ್ಟೆಗಳನ್ನು ಸ್ಥಾಪಿಸುವುದು ಹಾಗೂ ಕೃಷಿ ಉದ್ಯಮಗಳಿಗೆ ಪ್ರೋತ್ಸಾಹ ನೀಡಿ ಜಾಗತಿಕ ಮಾರುಕಟ್ಟೆಗೆ ಸಮೀಕರಿಸುವ ಬಗ್ಗೆ ಕೃಷಿ ಸಚಿವರು ವಿಶ್ವಬ್ಯಾಂಕ್ ತಂಡದ ಚರ್ಚಿಸಿದರು.
ವಿಶ್ವಬ್ಯಾಂಕ್ ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕ ಜಾನ್ ರೂಮ್ ಮಾತನಾಡಿ, “ವೈಜ್ಞಾನಿಕವಾದ ಭೂ ಮತ್ತು ಜಲ ಸಂಪನ್ಮೂಲಗಳ ದತ್ತಾಂಶ ಹಾಗೂ ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ರಾಜ್ಯದ ಉಪಕ್ರಮಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿ, ಕರ್ನಾಟಕದ ಮಾದರಿಯನ್ನು ದೇಶದ ಇತರೆ ಭಾಗಗಳಲ್ಲಿಯೂ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಅಲ್ಲದೆ ರಾಜ್ಯವೂ ಸಹ ಕೃಷಿ ಕ್ಷೇತ್ರದಲ್ಲಿ ಇತರ ದೇಶಗಳ ಉತ್ತಮ ತಾಂತ್ರಿಕತೆ / ಮಾದರಿಗಳನ್ನು ಅಳವಡಿಸಿಕೊಂಡು ಪ್ರಗತಿಯನ್ನು ಸಾಧಿಸಬಹುದಾಗಿದೆ” ಎಂದು ತಿಳಿಸಿದರು.
600 ಕೋಟಿಯ ನೆರವು
“ರಾಜ್ಯದಲ್ಲಿ ಜಲಾನಯನ ಪ್ರದೇಶದ ಪುನಶ್ವೇತನಕ್ಕೆ 600 ಕೋಟಿಯ ನೆರವು ನೀಡಲು ವಿಶ್ವಬ್ಯಾಂಕ್ ಈಗಾಗಲೇ ಸಮ್ಮತಿಸಿದೆ. ಐದು ವರ್ಷಗಳ ‘ರಿವಾರ್ಡ್’ (ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನೆ) ಮೂಲಕ ಜಲಾನಯನ ಪ್ರದೇಶವನ್ನು ಅಭಿವೃದ್ಧಿಗೊಳಿಸಲಾಗುವುದು’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.