ಪರಿಶಿಷ್ಟ ಜಾತಿ ಸಮುದಾಯಕ್ಕಾಗಿ ಒಳ ಮೀಸಲಾತಿ ಜಾರಿ ಮಾಡಲು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಸಲಹೆ ಪಡೆಯದೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಸ್ಟೀಸ್ ನಾಗಮೋಹನ್ದಾಸ್ ನೇತೃತ್ವದ ಏಕ ಸದಸ್ಯ ವಿಚಾರಣ ಸಮಿತಿ ನೇಮಕ ಮಾಡಿದ್ದು ಸಂವಿಧಾನ ಬಾಹಿರವಾಗಿದೆ ಎಂದು ಡಾ.ಬಿ.ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಆರೋಪಿಸಿದರು.
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ನೀಡಲು ಪರಿಶಿಷ್ಟ ಜಾತಿಯರಲ್ಲಿ ಮಾದಿಗ ಮತ್ತು ಅದರ ಸಂಬಂಧಿತ ಜಾತಿಗಳು, ಹೊಲೆಯ ಅದರ ಸಂಬಂಧಿತ ಜಾತಿಗಳು, ಪರಿಶಿಷ್ಟ ಜಾತಿಯಲ್ಲದ ಲಮಾಣಿ, ಭೋವಿ, ಕೊರಚ, ಕೊರಮ ಜಾತಿಗಳನ್ನು ಹಾಗೂ ಅಲೆಮಾರಿ ಉಪ ಜಾತಿಗಳು ಸೇರಿ ನಾಲ್ಕು ಗುಂಪುಗಳಾಗಿ ಮಾಡಿದೆ. ಇದರ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ಮಾಡಿದರೆ ಸಂವಿಧಾನದ ಅನುಚ್ಛೇದ 19(1) ಜೆ ಉಲ್ಲಂಘನೆ ಯಾಗುತ್ತದೆ” ಎಂದು ಹೇಳಿದರು.
“ಸುಪ್ರೀಂ ಕೋರ್ಟ್ನ 7 ನ್ಯಾಯಾಧೀಶರ ಪೀಠ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ನೀಡಬಹುದು ಎಂದು ಸಲಹೆ ನೀಡಿ, ಕೆನೆ ಪದರದ ಪರಿಕಲ್ಪನೆ ಜಾರಿ ಮಾಡಲು ಹೇಳಿದರೂ ತರಾತುರಿಯಲ್ಲಿ ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಸಮಿತಿ ರಚನೆ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ನ್ಯಾಯಾಲಯದ ಸಲಹೆಯನ್ನೂ ಉಲ್ಲಂಘನೆ ಮಾಡಿದೆ” ಎಂದು ಆರೋಪಿಸಿದರು.
ಈ ಸುದ್ಡಿ ಓದಿದ್ದೀರಾ? ರಾಯಚೂರು |ಆಹಾರ ಸೇವನೆಯಲ್ಲಿ ಏರುಪೇರು ವಾಂತಿಬೇದಿ ಪ್ರಕರಣ; 10 ಜನ ಅಸ್ವಸ್ಥ
“ಕರ್ನಾಟಕ ಹೈಕೋರ್ಟ್ನಲ್ಲಿ 2024ರ ಏಪ್ರಿಲ್4 ರಂದು ಕೊರಮ, ಕೊರಚ, ಭೋವಿ, ಲಮಾಣಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರತೆಗೆಯಬೇಕು ಎಂದು ರಿಟ್ ಅರ್ಜಿ ಸಲ್ಲಿಸಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಹಾಗಾಗಿ ನ್ಯಾಯಾಲಯದ ಆದೇಶ ಬಾಕಿ ಇರುವಾಗಲೇ ಒಳ ಮೀಸಲಾತಿ ಜಾರಿ ಮಾಡಬಾರದು” ಎಂದು ಮನವಿ ಮಾಡಿದರು.
ಈ ವೇಳೆ ಹುಸೇನ್ ಬಾಷ ಪಲಕನಮರಡಿ, ನರಸಿಂಹಲು ಪೋತಗಲ್ ಇದ್ದರು.
