ಉತ್ತರ ಪ್ರದೇಶದ ಆಗ್ರಾದಲ್ಲಿ ಸಮಾಜವಾದಿ ಪಕ್ಷದ ಸಂಸದ ಡಾ. ರಾಮ್ಜಿ ಲಾಲ್ ಸುಮನ್ ವಿರುದ್ಧ ಕರ್ನಿ ಸೇನಾ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿ ಹಲವರು ಶಸ್ತ್ರಾಸ್ತ್ರ ಹಿಡಿದು ರ್ಯಾಲಿ ನಡೆಸಿದ್ದಾರೆ. ಮಾರಕಾಸ್ತ್ರಗಳು ಮತ್ತು ದೊಣ್ಣೆಗಳೊಂದಿಗೆ ರ್ಯಾಲಿ ನಡೆಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಮೂಕಪ್ರೇಕ್ಷಕರಂತೆ ನಿಂದಿದ್ದದ್ದು ಕಂಡುಬಂದಿದೆ.
ಆಗ್ರಾದಲ್ಲಿ ನಡೆದ ರ್ಯಾಲಿಯಲ್ಲಿ ಕರ್ನಿ ಸೇನಾದ ಸಾವಿರಾರು ಕಾರ್ಯಕರ್ತರು ಶಸ್ತ್ರಾಸ್ತ್ರ ಹಿಡಿದು, ಅವುಗಳನ್ನು ಬೀಸುತ್ತಾ, ಜಳಪಿಸುತ್ತಾ ಮೆರವಣೆಗೆ ನಡೆಸಿದ್ದಾರೆ. ಸಮಾಜವಾದಿ ಪಕ್ಷದ ನಾಯಕರಿಗೆ ಬೆದರಿಕೆ ಹಾಕುವ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ, ಹೆಚ್ಚುವರಿ ಪೊಲೀಸ್ ಆಯುಕ್ತರು, ರಕ್ಷಣಾ ಪಡೆಗಳು ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ.
ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪೊಲೀಸರ ನಡೆಯ ಬಗ್ಗೆ ಆಕ್ರೋಶ, ಆಕ್ಷೇಪಗಳು ವ್ಯಕ್ತವಾಗಿವೆ.
A massive armed rally of the #KarniSena in #Agra’s #Etmadpur area on Saturday sparked tensions, as hundreds of youths carrying swords and guns assembled to mark the birth anniversary of #Rajput king #RanaSanga.
— Hate Detector 🔍 (@HateDetectors) April 12, 2025
The event, called the “Rakt Samman Sammelan” (Blood Self-Respect… pic.twitter.com/31V2xErZ2T
ಮೊಘಲ್ ದೊರೆ ಬಾಬರ್ನನ್ನು ರಜಪೂತ ರಾಜ ರಾಣಾ ಸಂಗಾ ಭಾರತಕ್ಕೆ ಆಹ್ವಾನಿಸಿದ್ದರು ಎಂದು ಎಸ್ಪಿ ಸಂಸದ ಡಾ. ರಾಮ್ಜಿ ಲಾಲ್ ಸುಮನ್ ಹೇಳಿದ್ದರು. ಇದಕ್ಕೆ ಐತಿಹಾಸಿಕ ದಾಖಲೆಗಳಿವೆ ಎಂದಿದ್ದರು. ಅವರ ಹೇಳಿಕೆಯ ವಿರುದ್ಧ ಕರ್ನಿ ಸೇನಾ ಪ್ರತಿಭಟನೆಗೆ ಕರೆಕೊಟ್ಟಿತ್ತು. ಈ ವೇಳೆ, ಕರ್ನಿ ಸೇನಾದ ಕಾರ್ಯಕರ್ತರು ಶಸ್ತ್ರಾಸ್ತ್ರ ಹಿಡಿದು ಮೆರವಣಿಗೆ ನಡೆಸಿದ್ದು, ಕಾನೂನು-ಸುವ್ಯವಸ್ಥೆಗೆ ಅಡ್ಡಿಯುಂಟುಮಾಡಿದ್ದಾರೆ.
ಇನ್ನು, ತಮ್ಮ ಹೇಳಿಕೆಗಾಗಿ ರಾಮ್ಜಿ ಲಾಲ್ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಯಾರ ಭಾವನೆಗಾದರೂ ಧಕ್ಕೆ ಉಂಟಾಗಿದ್ದರೆ, ವಿಷಾಧಿಸುವುದಾಗಿ ಹೇಳಿಕೊಂಡಿದ್ದಾರೆ.