ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ಬಸವಕಲ್ಯಾಣ ತಾಲ್ಲೂಕು ಕಸಾಪ ಅಧ್ಯಕ್ಷರನ್ನಾಗಿ ಡಾ.ರುದ್ರಮಣಿ ಮಠಪತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಬೀದರ್ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದ್ದಾರೆ.
ʼಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶಾಂತಲಿಂಗ ಮಠಪತಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿರುತ್ತಾರೆ. ಶಾಂತಲಿಂಗ ಮಠಪತಿ ಅವರಿಂದ ತೆರವಾದ ಸ್ಥಾನಕ್ಕೆ ಉಳಿದ ಅವಧಿಗೆ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ರುದ್ರಮಣಿ ಮಠಪತಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಕಳೆದ ಮೂರು ವರುಷಗಳಲ್ಲಿ ಶಾಂತಲಿಂಗ ಮಠಪತಿ ಅವರು ಕ್ರಿಯಾಶೀಲವಾಗಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಮುಖ್ಯವಾಗಿ ದಾನಿಗಳಾದ ಮಲ್ಲಿಕಾರ್ಜುನ ಕುರಕೊಟೆ ಅವರು ಕಸಾಪಕ್ಕೆ ನೀಡಿರುವ ನಿವೇಶನವನ್ನು ನಗರಸಭೆಯಿಂದ ಸಾಹಿತ್ಯ ಪರಿಷತ್ತಿಗೆ ವರ್ಗಾಯಿಸಿರುತ್ತಾರೆ. ಜೊತೆಗೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಪ್ರತಿಯೊಂದು ಶಾಲಾ-ಕಾಲೇಜಿನ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಿರುವ ಕಾರ್ಯ ಶ್ಲಾಘನೀಯʼ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸಾಲದ ಕಂತು ಕಟ್ಟಿಲ್ಲವೆಂದು ರೈತನ ಮೇಲೆ ಹಲ್ಲೆ; ಬ್ಯಾಂಕ್ ಸಿಬ್ಬಂದಿ ವಿರುದ್ಧ ದೂರು ದಾಖಲು
ಡಾ.ರುದ್ರಮಣಿ ಮಠಪತಿ ಅವರು ಸುಮಾರು ದಶಕಗಳಿಂದ ಸಾಂಸ್ಕೃತಿಕ ಸಂಘಟಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಈ ಹಿಂದೆ ಬಸವಕಲ್ಯಾಣ ತಾಲ್ಲೂಕಿನ ಕಸಾಪ ಅಧ್ಯಕ್ಷರಾಗಿ ಹೊಸ ನಿವೇಶನ ಹಾಗೂ ಎರಡು ತಾಲ್ಲೂಕು ಸಮ್ಮೇಳನ, ಯುವ ಸಮ್ಮೇಳನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ನಾಡು ನುಡಿಯ ನಿಷ್ಠ ಸೇವಕರಾಗಿ ಅನೇಕ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರುದ್ರಮಣಿ ಮಠಪತಿ ಅವರನ್ನು ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು ಅವರು ಹುದ್ದೆಯನ್ನು ಸ್ವೀಕರಿಸಿ ಕಾರ್ಯಪ್ರವೃತ್ತರಾಗಲು ಕಸಾಪ ಸೂಚಿಸಿದೆ.