ಪ್ರಮುಖ ವ್ಯಕ್ತಿಗಳು ಸೇರಿಕೊಂಡು ಸಂಘವನ್ನು ರಚನೆ ಮಾಡುವುದು ಸುಲಭವಾದ ಕಾರ್ಯ. ಆದರೆ, ಸಂಘಟನೆಯನ್ನು ಗಂಭೀರವಾಗಿ ಹಾಗೂ ತಾತ್ವಿಕವಾಗಿ ಮುನ್ನಡಿಸುವುದು ಮುಖ್ಯವಾದ ಕಾರ್ಯವಾಗಿದೆ ಎಂದು ಕೊಪ್ಪಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅಭಿಪ್ರಾಯಪಟ್ಟರು.
ನಗರದ ತಾಲೂಕ್ ಪಂಚಾಯತ್ ಸಭಾಭವನದಲ್ಲಿ ಸರ್ಕಾರಿ ಮಹಿಳಾ ನೌಕರ ಸಂಘ ಜಿಲ್ಲಾ ಘಟಕದ ಉದ್ಘಾಟನೆ, ಪದಗ್ರಹ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ತಮ್ಮ ಹಕ್ಕು ಹಾಗೂ ಬೇಡಿಕೆಗಳ ಈಡೇರಿಕೆಗಾಗಿ ಆಯ್ದ ವ್ಯಕ್ತಿಗಳು ಸೇರಿಕೊಂಡು ಸಂಘವನ್ನು ರಚನೆ ಮಾಡುವುದು ಬಹಳ ಸರಳವಾದ ವಿಧಾನವಾಗಿದೆ. ಕೇವಲ ಸಂಘವನ್ನು ರಚನೆ ಮಾಡಿದರೆ ಸಾಲದು ಆ ಸಂಘವು ತನ್ನ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದು ಹಾಗೂ ಅವರ ಬೇಕು-ಬೇಡಿಕೆಗಳನ್ನು ಸರಿಯಾದ ಸಮಯದಲ್ಲಿ ಈಡೇರಿಸಿದಾಗ ಮಾತ್ರ ಸಂಘವು ಸಂಘಟನೆಯಾಗಿ ಶಾಶ್ವತವಾಗಿ ಉಳಿಯುತ್ತವೆ. ಪ್ರಸ್ತುತ ದಿನಮಾನಗಳಲ್ಲಿ ಅನೇಕ ರೀತಿಯ ಸಂಘಟನೆಗಳು ಉದಯವಾಗುತ್ತಿದ್ದು, ಅವುಗಳು ಸದಸ್ಯರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಲಿ. ಮಹಿಳೆಯರ ಸಂಘವು ಕೂಡಾ ತನ್ನ ಸದಸ್ಯರ ಬೇಡಿಕೆಗಳಿಗೆ ಹಾಗೂ ಅವರ ಸಮಸ್ಯೆಗಳಿಗೆ ಧ್ವನಿಯಾಗಲಿ” ಎಂದು ಆಶಿಸಿದರು.
ನಗರಸಭೆಯ ಅಧ್ಯಕ್ಷರ ಅಮ್ಜದ್ ಪಟೇಲ್ ಮಾತನಾಡಿ, “ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಪ್ರಸ್ತುತ ದಿನಮಾನಗಳಲ್ಲಿ ಬಹಳ ಒತ್ತಡದಿಂದ ಕೆಲಸ ಮಾಡುತ್ತಿದ್ದು,ಸರ್ಕಾರವು ಅವರ ಒತ್ತಡ ಕಡಿಮೆ ಮಾಡಲು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸಬೇಕು. ಸಂಘವು ಹಮ್ಮಿಕೊಳ್ಳುವ ಎಲ್ಲಾ ಕಾರ್ಯಗಳಿಗೆ ಸಂಪೂರ್ಣವಾದ ಸಹಕಾರ ನೀಡುವೆ” ಎಂದು ಭರವಸೆ ನೀಡಿದರು.
ತಹಶೀಲ್ದಾರ್ ವಿಠ್ಠಲ್ ಚೌಗಲೇ ಮಾತನಾಡಿ, “ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೆ ಒಬ್ಬ ವ್ಯಕ್ತಿಯಿಂದ ಸಾಧ್ಯವಾಗುವುದಿಲ್ಲ. ಅದೇ ಸಂಘ ಹಾಗೂ ಸಂಘಟನೆಯ ಮೂಲಕ ಬೇಗ ಪಡೆಯಬಹುದಾಗಿದೆ. ಸರ್ಕಾರಿ ಸೇವೆಯಲ್ಲಿ ಇರುವ ಮಹಿಳೆಯರು ತಮ್ಮಲ್ಲಿ ಇರುವಂತ ಸಂಕುಚಿತವಾದ ಮನೋಭಾವನೆಯನ್ನು ಬಿಟ್ಟು ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ಇತರೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು” ಎಂದು ಹೇಳಿದರು.
ಇದನ್ನೂ ಓದಿ: ಕೊಪ್ಪಳ | ಪಿಯು ಫಲಿತಾಂಶ ಗಣನೀಯ ಕುಸಿತ; ತರಗತಿ ಮುಂದುವರೆಸಲು ಶಿಕ್ಷಣ ಇಲಾಖೆ ಆದೇಶ
ಸರ್ಕಾರಿ ಮಹಿಳೆಯರ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶೈಲಜಾ.ಸಿ.ವಿ. ಮಾತನಾಡಿ, “ಸರ್ಕಾರಿ ಸೇವೆ ಸಲ್ಲಿಸುತ್ತಿರುವ ಅನೇಕ ಮಹಿಳೆಯರು ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದು, ಅವುಗಳ ಪರಿಹಾರಕ್ಕಾಗಿ ಸಂಘಟನೆಯನ್ನು ಕಟ್ಟಲಾಗಿದೆ. ನೊಂದ ಸರ್ಕಾರಿ ಮಹಿಳಾ ನೌಕರರಿಗೆ ನ್ಯಾಯ ಒದಗಿಸಿ ಕೊಡುವ ಕೆಲಸ ಮಾಡಲಾಗುತ್ತದೆ. ಮುಂದಿನ ದಿನಗಳ ರಾಜ್ಯ ಎಲ್ಲಾ ಜಿಲ್ಲೆಯಲ್ಲಿ ಸಂಘಟನೆ ಕಟ್ಟಿ ರಾಜ್ಯ ಮಟ್ಟದ ಸಮ್ಮೇಳನ ಮಾಡುವ ಚಿಂತನೆ ಇದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ಪಿ ಆರ್, ಸಾಹಿತಿ ಅರುಣಾ ನರೇಂದ್ರ, ರಮಾ ಆರ್, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ, ಮಾರುತಿ ಮ್ಯಾಗಳಮನಿ, ಸುಜಾತ ಕುರಿ, ಶಂಕ್ರಮ್ಮ, ಶಾಂತಾ, ಅನ್ನಪೂರ್ಣ, ಹಾಗೂ ಇತರರಿದ್ದರು.