ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಕೂಡಲಸಂಗಮದಲ್ಲಿ ಎರಡು ದಿನಗಳ ಕಾಲ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದರು.
ಬಾಗಲಕೋಟೆ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಬಸವಣ್ಣನವರ ತತ್ವ, ಸಂದೇಶಗಳನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ಕೂಡಲಸಂಗಮದಲ್ಲಿ ಎರಡು ದಿನಗಳ ಕಾಲ ಸಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
“ಸಾಂಸ್ಕೃತಿಕ ವೈಭವದಲ್ಲಿ ಮೊದಲ ದಿನ ಏಪ್ರಿಲ್ 29ರಂದು ಬೆಳಿಗ್ಗೆ 10ರಿಂದ ಸಂಜೆ 5:30ರವರೆಗೆ ವಚನ ಸಾಹಿತ್ಯ ಸಮಕಾಲೀನ ಸಂವೇದನ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಗೋಷ್ಟಿಯೊಂದರಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ವರ್ತಮಾನದ ಜರೂರು ವಿಷಯ ಕುರಿತು ರಂಜಾನ್ ದರ್ಗಾ, ಡಾ. ತಾರಣಿ ಶುಭದಾಯಿನಿ, ಡಾ. ವಿಕ್ರಂ ವಸಾಜೆ ವಿಷಯ ಮಂಡನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಪ್ರೊ. ಎಸ್ ಜಿ ಸಿದ್ದರಾಮಯ್ಯ ವಹಿಸುವರು. ಗೋಷ್ಠಿ ಎರಡರಲ್ಲಿ ವಚನ ಸಾಹಿತ್ಯ ಮತ್ತು ಭಾರತದ ಸಂವಿಧಾನ ಕುರಿತು ಡಾ. ಕೆ ನೀಲಾ, ಪ್ರೊ. ಎಂ ಎಸ್ ಶೇಖರ ಮಂಡನೆ ಮಾಡಲಿದ್ದಾರೆ. ಗೋಷ್ಠಿ ಮೂರರಲ್ಲಿ ವಚನ ಸಾಹಿತ್ಯ ಮತ್ತು ಮಹಿಳೆ ಕುರಿತು ಡಾ. ಬಸವರಾಜ ಸಾದಾರ್, ಡಾ. ಸಚಿತ ಬನ್ನಾಡಿ, ಡಾ. ಪ್ರಜ್ಞ ಮತ್ತಿಹಳ್ಳಿ ವಿಷಯ ಮಂಡನೆ ಮಾಡಲಿದ್ದಾರೆ. ಗೋಷ್ಠಿ ನಾಲ್ಕರಲ್ಲಿ ವಿಶ್ವಶಾಂತಿ ಹಾಗೂ ಸಾಮರಸ್ಯ ಕುರಿತು ಡಾ. ಮೀನಾಕ್ಷಿ ಬಾಳಿ, ಡಾ. ಡೊಮನಿಕ್, ಡಾ. ಮೈಸೂರು ಉಮೇಶ್ ಮಂಡನೆ ಮಾಡಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಸವಿತಾ ನಾಗಭೂಷಣ, ಪ್ರೊ. ಕಾಳೇಗೌಡ ನಾಗವಾರ ವಹಿಸಲಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಮೇ 20ರಂದು ದೇಶವ್ಯಾಪಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ; ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮೀ ಕರೆ
“ವೈಭವದ ಎರಡನೇ ದಿನ ಏಪ್ರಿಲ್ 30ರಂದು ಬೆಳಿಗ್ಗೆ 11ಕ್ಕೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಬಸವ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಪ್ರದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಲಿದ್ದಾರೆ. ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಪುಸ್ತಕವನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಹೊನಗುಂದ ಶಾಸಕ ಹಾಗೂ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ವಹಿಸಲಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಸಭಾಪತಿ ಯುಟಿ ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಸೇರಿದಂತೆ ಇತರರು ಸಚಿವ ಸಂಪುಟದ ಸಚಿವರು ವಿಧಾನಸಭೆ ಶಾಸಕರು, ವಿಧಾನ ಪರಿಷತ್ ಶಾಸಕರು ಹಾಗೂ ಗಣ್ಯರು ಸಾಹಿತಿಗಳು ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.