16ನೇ ವಿಧಾನಸಭೆಯ ಎರಡನೇ ದಿನದ ಅಧಿವೇಶನ ಕಲಾಪ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಅವಧಿಗೆ ಅಡ್ಡಿಪಡಿಸಿದ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟಿಸಿದ್ದನ್ನು ಖಂಡಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ಜನವಿರೋಧಿ ರಾಜಕಾರಣ ಬಿಜೆಪಿಯನ್ನು ಈಗಾಗಲೇ 63 ಮತ್ತೊಂದಕ್ಕೆ ತಂದು ನಿಲ್ಲಿಸಿದೆ. ಆದರೂ ಇವರು ಪಾಠ ಕಲಿತಿಲ್ಲ” ಎಂದು ಕಿಡಿಕಾರಿದ್ದಾರೆ.
“ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಿಕೊಳ್ಳಗಾಗದವರು ಇಂದು ಸದನದ ನಿಯಮಾವಳಿ ಗಾಳಿಗೆ ತೂರಿ ‘ಮೊಂಡಾಟ’ ನಡೆಸಿದ್ದು ಅಕ್ಷಮ್ಯ ಅಪರಾಧ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದೇ ಬಿಜೆಪಿ, ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಾಗ ಒಂದು ತಿಂಗಳ ಕಾಲ ಸಂಪುಟವನ್ನೇ ರಚಿಸಿರಲಿಲ್ಲ. ಆದರೆ, ನಾವು ಸಂಪೂರ್ಣ ಸರ್ಕಾರದೊಂದಿಗೆ ಜನರಿಗೆ ನೀಡಿದ್ದ ವಾಗ್ದಾನ ಈಡೇರಿಸುತ್ತಿದ್ದೇವೆ” ಎಂದು ತಿರುಗೇಟು ನೀಡಿದ್ದಾರೆ.
“ನಾವಿಕನಿಲ್ಲದ ದೋಣಿಯಂತಿರುವ ಬಿಜೆಪಿ ಪಕ್ಷದವರ ಅನುಚಿತ ವರ್ತನೆ ಯಾವುದೇ ರೀತಿಯಲ್ಲೂ ಸದನ ಯೋಗ್ಯವಲ್ಲ” ಎಂದು ಟೀಕಿಸಿದ್ದಾರೆ.
“ರಾಜ್ಯದ ಜನತೆ ಹುಷಾರಾಗಿದ್ದು, ಈ ನಾಟಕಗಳಿಗೆ ಬಲಿಪಶುವಾಗುವುದಿಲ್ಲ ಎನ್ನುವುದು ಬಿಜೆಪಿ ನಾಯಕರಿಗೆ ಬೇಗ ಅರ್ಥವಾಗುವಂತಾಗಲಿ” ಎಂದು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಧಿವೇಶನ 2023 | ಪ್ರಶ್ನೋತ್ತರ ಕಲಾಪಕ್ಕೆ ಬಿಜೆಪಿ ಸದಸ್ಯರಿಂದ ಅಡ್ಡಿ, 15 ನಿಮಿಷ ಸದನ ಮುಂದೂಡಿಕೆ