ಡಿಜಿಟಲ್ ಸೇವೆ ಮತ್ತು ಪ್ರವೇಶಗಳನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕನ ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಭಾಗವಾಗಿದೆ. ಭಾರತದ ಗ್ರಾಮೀಣ ಜನಸಂಖ್ಯೆಯ ದೊಡ್ಡ ವರ್ಗಗಳು, ಹಿರಿಯ ನಾಗಕರಿಕರು, ಆರ್ಥಿಕವಾಗಿ ದುರ್ಬಲ ಸಮುದಾಯಗಳು, ಭಾಷಾ ಅಲ್ಪಸಂಖ್ಯಾತರು ಹಾಗೂ ವಿಭಿನ್ನ ಸಾಮರ್ಥ್ಯ ಹೊಂದಿರುವವರು ಎದುರಿಸುತ್ತಿರುವ ಡಿಜಿಟಲ್ ಅಂತರವನ್ನು ನಿವಾರಿಸುವುದು ಕೇಂದ್ರ ಸರ್ಕಾರ ಮತ್ತು ಅದರ ಅಧಿಕಾರಿಗಳ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಡಿಜಿಟಲ್ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೆಲವು ತಾಂತ್ರಿಕ ನಿಯಮಗಳು ಕಾರಣವಾಗಿವೆ ಎಂದು ಆಸಿಡ್ ದಾಳಿಯಿಂದ ದೃಷ್ಠಿ ಕಳೆದುಕೊಂಡಿದ್ದ ಇಬ್ಬರು ಸಂತ್ರಸ್ತರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಮೊಬೈಲ್ ಸಿಮ್ ಖರೀದಿ, ಕೆವೈಸಿ ಪ್ರಕ್ರಿಯೆ ಸೇರಿದಂತೆ ಕೆಲವು ಡಿಜಿಟಲ್ ಸೇವೆಗಳನ್ನು ಪಡೆಯಲು ಕಣ್ಣು ಮಿಟುಕಿಸುವ ಮೂಲಕ ‘ಲೈವ್ ಛಾಯಾಚಿತ್ರ’ ಕ್ಲಿಕ್ ಮಾಡಬೇಕು. ಆದರೆ, ದೃಷ್ಟಿದೋಷದಿಂದಾಗಿ ನಾವು ಡಿಜಿಟಲ್ ಸೇವೆಗಳಿಂದ ದೂರ ಉಳಿಯುತ್ತಿದ್ದೇವೆ. ಇದರಿಂದ, ಬ್ಯಾಂಕ್ ಖಾತೆ ತೆರೆಯಲು, ಸಿಮ್ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆ.ಬಿ ಪಾರ್ದಿವಾಲಾ ವಿಚಾರಣೆ ನಡೆಸಿದ್ದಾರೆ. “ದೃಷ್ಟಿ ಮತ್ತು ಶ್ರವಣದೋಷವುಳ್ಳ ಡಿಜಿಟಲ್ ಬಳಕೆದಾರರಿಗಾಗಿ ಈಗ ಜಾರಿಯಲ್ಲಿರುವ ಕೆವೈಸಿ ಪ್ರಕ್ರಿಯೆಯನ್ನು ಪರಿಷ್ಕರಿಸಬೇಕು. ಎಲ್ಲರಿಗೂ ಡಿಜಿಟಲ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ‘ಬ್ರೈಲ್ ಮತ್ತು ಧ್ವನಿ’ ಸಕ್ರಿಯ ಸೇವೆಗಳನ್ನು ಒಳಗೊಂಡಂತೆ ಪರ್ಯಾಯ ಕ್ರಮಗಳನ್ನು ರೂಪಿಸಬೇಕು” ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.
“ಅಗತ್ಯ ಸೇವೆಗಳು, ಆಡಳಿತ, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಅವಕಾಶಗಳಿಗೆ ಡಿಜಿಟಲ್ ವೇದಿಕೆಗಳ ಮೂಲಕ ಹೆಚ್ಚಾಗಿ ಪ್ರವೇಶ ಪಡೆಯುತ್ತಿರುವ ಸಮಕಾಲೀನ ಯುಗದಲ್ಲಿ, ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಬದುಕುವ ಹಕ್ಕನ್ನು ಈ ತಾಂತ್ರಿಕ ವಾಸ್ತವಗಳೊಂದಿಗೆ ಮರು ವ್ಯಾಖ್ಯಾನಿಸಬೇಕು” ಎಂದು ಸುಪ್ರಿಂ ಕೋರ್ಟ್ ಹೇಳಿದೆ.
“ಡಿಜಿಟಲ್ ಮೂಲಸೌಕರ್ಯಗಳ ಪ್ರವೇಶವಳಿಗೆ ಅಸಮಾನವಾಗಿ ನಿರೂಪಿಸಲ್ಪಟ್ಟ ಡಿಜಿಟಲ್ ವಿಭಜನೆಯು ವಿಶೇಷ ಚೇತನ ವ್ಯಕ್ತಿಗಳನ್ನು ಮಾತ್ರವಲ್ಲದೆ, ಗ್ರಾಮೀಣ ಜನಸಂಖ್ಯೆಯ ದೊಡ್ಡ ವರ್ಗಗಳು, ಹಿರಿಯ ನಾಗರಿಕರು, ಆರ್ಥಿಕವಾಗಿ ದುರ್ಬಲ ಸಮುದಾಯಗಳು ಹಾಗೂ ಭಾಷಾ ಅಲ್ಪಸಂಖ್ಯಾತರನ್ನು ವ್ಯವಸ್ಥಿತ ಹೊರಗಿಡುತ್ತದೆ. ಸಾಧಾರಣ ಸಮಾನತೆಯ ತತ್ವವು ಡಿಜಿಟಲ್ ಪ್ರವೇಶ ಎಲ್ಲರನ್ನೂ ಒಳಗೊಳ್ಳಬೇಕು ಮತ್ತು ಸಮಾನವಾಗಿರಬೇಕು ಎನ್ನುತ್ತದೆ” ಎಂದು ಕೋರ್ಟ್ ಹೇಳಿದೆ.
ಈ ವರದಿ ಓದಿದ್ದೀರಾ?: ಜಾತಿ ಗಣತಿ ವರದಿ ವಿರೋಧಿಸುತ್ತಿರುವ ಶಾಮನೂರು ಹುನ್ನಾರವೇನು? ಕಾಂಗ್ರೆಸ್ನಲ್ಲಿ ಕ್ರಮ ಯಾಕಿಲ್ಲ?
“ಡಿಜಿಟಲ್ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗ್ರಾಹಕರ ‘ಜೀವಂತತೆಯನ್ನು ಪರಿಶೀಲಿಸಲು ಅಥವಾ ‘ಲೈವ್ ಛಾಯಾಚಿತ್ರ’ವನ್ನು ಸೆರೆಹಿಡಿಯಲು ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಳ್ಳಲು ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಬೇಕು. ಅಗತ್ಯವಿದ್ದರೆ, ಕಾಗದ ಆಧಾರಿತ ಕೆವೈಸಿ ಪ್ರಕ್ರಿಯೆನ್ನೂ ಮುಂದುವರೆಸಬೇಕು” ಎಂದು ನ್ಯಾಯಾಲಯವು RBI ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.
“ಡಿಜಿಟಲ್ ಅಂತರವನ್ನು ನಿವಾರಿಸುವುದು ಕೇವಲ ನೀತಿ ವಿವೇಚನೆಯ ವಿಷಯವಲ್ಲ. ಬದಲಾಗಿ ಘನತೆ, ಸ್ವಾಯತ್ತತೆ ಮತ್ತು ಸಾರ್ವಜನಿಕ ಜೀವನದಲ್ಲಿ ಸಮಾನ ಭಾಗವಹಿಸುವಿಕೆಯ ಜೀವನವನ್ನು ಖಾತ್ರಿಪಡಿಸುವ ಸಾಂವಿಧಾನಿಕ ಹಕ್ಕಾಗಿದೆ. ಆದ್ದರಿಂದ, ಡಿಜಿಟಲ್ ಪ್ರವೇಶದ ಹಕ್ಕು ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಭಾಗವಾಗಿದೆ” ಎಂದು ನ್ಯಾಯಾಲಯ ಹೇಳಿದೆ.