ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಶಫಾ ಶಾರಿಕ ನಿಂಬಾಳ್ಕರ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದು ಇಂಗ್ಲಿಷ್ ವಿಷಯದಲ್ಲಿ ಮಾತ್ರ 99 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
“ನಾನು ನಿರೀಕ್ಷೆ ಮಾಡಿದ ಹಾಗೆ ಅಂಕಗಳು ದೊರಕಿವೆ. ಶಿಕ್ಷಕರು ಹಾಗೂ ಪೋಷಕರ ಬೆಂಬಲದಿಂದ ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಶಿಕ್ಷಣವನ್ನ ಮುಂದುವರೆಸಲು ಬಯಸುತ್ತೇನೆ” ಎನ್ನುತ್ತಾರೆ ಶಫಾ ನಿಂಬಾಳ್ಕರ. ಡಾ. ಶಾರಿಕ ಮತ್ತು ಡಾ. ಫಜಿಲತ್ ದಂತ ವೈದ್ಯ ದಂಪತಿಯ ಮಗಳಾದ ಶಫಾ, ʼಸಾಧನೆಗೆ ಕಠಿಣ ಪರಿಶ್ರಮ ಮುಖ್ಯ. ಜತೆಗೆ ಪೋಷಕರ ಬೆಂಬಲವಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದರು.
ಶಪಾಳ ಸಾಧನೆಗೆ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ ಟಿ ಪಾಟೀಲ ಅವರು ಕರೆ ಮಾಡಿ ವಿದ್ಯಾರ್ಥಿನಿಯ ಸಾಧನೆಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯ ಬಿ ಸಿ ಹೊಸಗೌಡರ ಮಾತನಾಡಿ, “ಶಫಾ ಶಾರಿಕ ನಿಂಬಾಳಕರ ಸಾಧನೆಯು, ಶಾಲೆಯ ಶಿಕ್ಷಕ ವರ್ಗಕ್ಕೆ ಹಾಗೂ ಎಸ್ಡಿಎಂಸಿ ತಂಡಕ್ಕೆ ಸಂತೋಷ ತಂದಿದೆ. ಮನೆಯ ಪರಿಸರ, ಶಾಲಾ ಶಿಕ್ಷಕರ ಪರಿಶ್ರಮ ಈ ಸಾಧನೆಗೆ ಕಾರಣ. ಪ್ರತಿ ವರ್ಷ ಆದರ್ಶ ವಿದ್ಯಾಲಯದಿಂದ ನೂರಕ್ಕೆ ನೂರರಷ್ಟು ಫಲಿತಾಂಶ ಬರುತ್ತಿದೆ. ಸುಮಾರು 15 ವಿದ್ಯಾರ್ಥಿಗಳು ರಾಜ್ಯಕ್ಕೆ ರ್ಯಾಂಕ್ ಬರುವ ವಿಚಾರದಲ್ಲಿ ಇವರಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿತ್ತು. 624, 619, 618, 617, 616 ಅಂಕಗಳನ್ನ ನಮ್ಮ ವಿದ್ಯಾಲಯದ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಹೇಳುವುದಕ್ಕೆ ಸಂತೋಷವಾಗುತ್ತಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಾಗಲಕೋಟೆ | ಸಿಬ್ಬಂದಿಗಳಿಲ್ಲದ ಬಲಕುಂದಿ ಗ್ರಾಮ ಪಂಚಾಯಿತಿಗೆ ಬೀಗ
ಈ ವೇಳೆ ಆದರ್ಶ ವಿದ್ಯಾಲಯದ ಎಸ್ ಡಿ ಎಂ ಸಿ ಅಧ್ಯಕ್ಷ ನಾಗೇಶ್ ಕುಂದರಗಿ, ಮಾಜಿ ಅಧ್ಯಕ್ಷ ಸಿದ್ದು ಗಡ್ಡದವರ, ವಿದ್ಯಾರ್ಥಿನಿಯ ಪೋಷಕರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ ಎಂ, ಜಿಲ್ಲಾ ಪಂಚಾಯತ್ ಸಿಇೊ ಶಶಿಧರ ಕುರೇರ ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶ ಎಚ್ ಜಿ ಮಿರ್ಜಿ, ಬೀಳಗಿ ತಹಶೀಲ್ದಾರ್ ವಿನೋದ ಹತ್ತಳ್ಳಿ, ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ಅಧಿಕಾರಿ ಎಸ್.ಎಸ್.ಹಾಲವರ ಅಭಿನಂದನೆ ಸಲ್ಲಿಸಿದ್ದಾರೆ.