ಭಾರತದ ಸಂವಿಧಾನ ಆಶಯ, ಸಮಾನತೆಯ ತತ್ವ ಆಧಾರದ ಮೇಲೆ ಅವಕಾಶದಿಂದ ವಂಚಿತರಾದವರಿಗೆ ಸರ್ಕಾರದ ಪ್ರತಿ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗವು ಪ.ಜಾತಿಗಳ ಸಮಗ್ರ ಸಮೀಕ್ಷೆ-2025 ಮೊದಲ ಹಂತದ ಸಮೀಕ್ಷೆ ಮೇ.5ರಿಂದ 17 ರ ತನಕ ನಡೆಯಲಿದೆ ಎಂದು ತಹಶೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಗುಂಡಾಂಜನೇಯ ಸ್ವಾಮಿ ದೇವಾಲಯದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ದತ್ತಾಂಶಗಳ ಸಂಗ್ರಹಣೆ ಕಾರ್ಯಕ್ಕೆ ಸೋಮವಾರ ಬೆಳಗ್ಗೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ಸರ್ಕಾರದ ಆದೇಶದ ಅನ್ವಯ ಪ.ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಉದ್ದೇಶದ ಪರಿಶಿಷ್ಟ ಜಾತಿ ಪ್ರತಿಯೊಂದು ಕುಟುಂಬದ ದತ್ತಾಂಶ ಸಂಗ್ರಹಣೆಯನ್ನು ಶಿಕ್ಷಕರಿಗೆ ಈಗಾಗಲೇ ನೀಡಿರುವ ತರಬೇತಿಯಂತೆ ನಡೆಸಬೇಕು. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ , ಲಂಬಾಣಿ ಸೇರಿ 101 ಜಾತಿಗಳು ಪ.ಜಾತಿಗೆ ಒಳಪಡುತ್ತವೆ. ಪ.ಪಂ ವ್ಯಾಪ್ತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಮೀಕ್ಷೆ ನಡೆಸಲು ಕ್ರಮವಹಿಸಲಾಗಿದೆ ಎಂದು ಹೇಳಿದರು.
ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ಕೆ ನಾಗಣ್ಣ ಮಾತನಾಡಿ, ಗೃಹ ಸಚಿವ ಡಾ.ಜಿ ಪರಮೇಶ್ವರ್ರವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪ.ಜಾತಿಯ ಒಳಮೀಸಲಾತಿ ದತ್ತಾಂಶ ಸಂಗ್ರಹಣೆ ಕಾರ್ಯವು ಒಳ ಮೀಸಲಾತಿ ಜಾರಿಗೆ ಬಹುಮುಖ್ಯ ಪಾತ್ರವಹಿಸುತ್ತದೆ. ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಸಂಪೂರ್ಣ ವಿವರವನ್ನು ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್ ಅನಿಲ್ಕುಮಾರ್ ಮಾತನಾಡಿ ಕರ್ನಾಟಕದಲ್ಲಿನ ಪ.ಜಾತಿಯಲ್ಲಿನ ಉಪಜಾತಿಗಳ ಬಗ್ಗೆ ನಿಖರವಾದ ಮಾಹಿತಿ ಕೊರತೆಯಿಂದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದಿಂದ ರಾಜ್ಯದಲ್ಲಿ ಪ.ಜಾತಿಗಳ ಜಾತಿ ಜನಗಣತಿ ನಡೆಯುತ್ತಿದೆ. ಪ್ರಮುಖವಾಗಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಉಪಜಾತಿಗಳಲ್ಲಿನ ಗೊಂದಲ ನಿವಾರಣೆಗೆ ಮೊದಲ ಹಂತದ ಸಮೀಕ್ಷೆ ಅಗತ್ಯವಾಗಿದೆ ಎಂದರು.
ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ ಪ.ಜಾತಿಯಲ್ಲಿನ 101 ಜಾತಿಗಳಲ್ಲಿ ಒಳಮೀಸಲಾತಿ ವರ್ಗೀಕರಣಕ್ಕೆ ಒತ್ತು ನೀಡಿ ಶಿಕ್ಷಕರಿಗೆ ಈಗಾಗಲೇ ತರಬೇತಿಯನ್ನು ನೀಡಿದೆ. ಒಳ ಮೀಸಲಾತಿ ಜಾರಿಗೆ ಪ.ಜಾತಿಯ ಜನಾಂಗದ ಕೂಗು. ಆದಿ ಕರ್ನಾಟಕ, ಆದಿ ದ್ರಾವಿಡ ಜಾತಿಗಳಲ್ಲಿನ ಉಪಜಾತಿಗಳ ಬಗ್ಗೆ ೮ಜಿಲ್ಲೆಗಳಲ್ಲಿ ಗೊಂದಲವನ್ನು ಉಂಟುಮಾಡಿದೆ. ಅಪ್ಲಿಕೇಷನ್ನಲ್ಲಿ ಜಾತಿ ಮತ್ತು ಉಪಜಾತಿ ಹೆಸರನ್ನು ನಮೂದಿಸಿ ಗೊಂದಲಗಳಿಗೆ ತೆರೆ ಎಳೆಯಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಇಓ ನಟರಾಜ್, ಪ.ಪಂ ಅಧ್ಯಕ್ಷೆ ಅನಿತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಮಂಜುನಾಥ್, ಪ.ಪಂ ಮುಖ್ಯಾಧಿಕಾರಿ ಉಮೇಶ್, ಸದಸ್ಯರಾದ ಕೆ.ಆರ್ ಓಬಳರಾಜು, ಪ್ರದೀಪ್ಕುಮಾರ್, ಪುಟ್ಟನರಸಪ್ಪ, ಮಂಜುಳಾ ಗೋವಿಂದರಾಜು, ಮುಖಂಡರಾದ ದಾಡಿ ವೆಂಕಟೇಶ್, ಶಿವರಾಮ್, ಜಯರಾಮಣ್ಣ, ವೀರಕ್ಯಾತಯ್ಯ ಸೇರಿದಂತೆ ಇತರರು ಇದ್ದರು.