ಜಾತಿ ಆಧಾರಿತ ಮೀಸಲಾತಿಗಳು ರೈಲಿನ ಬೋಗಿಗಳು ಇದ್ದಂತಾಗಿದೆ. ತಾವಿರುವ ಬೋಗಿಯೊಳಗೆ ಇತರರು ಬರಬಾರದು ಎಂದು ಜನರು ಹೇಗೆ ಬಯಸುತ್ತಾರೋ, ಅದೇ ರೀತಿಯ ಸ್ಥಿತಿ ಮೀಸಲಾತಿಯದ್ದಾಗಿದೆ ಎಂದು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರೊಬ್ಬರು ಹೇಳಿದ್ದಾರೆ.
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿಗೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಸೂರ್ಯಕಾಂತ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದನ್ನು ಓದಿದ್ದೀರಾ? ಜಾತಿ ಉಪ-ವರ್ಗೀಕರಣದ ಕುರಿತ ಸುಪ್ರೀಂ ತೀರ್ಪು – ಸಾಮಾಜಿಕ ವ್ಯವಸ್ಥೆಯಲ್ಲಿ ಹೆಗ್ಗುರುತು
ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಕೊನೆಯದಾಗಿ 2016-2017ರಲ್ಲಿ ನಡೆದಿದೆ. ಒಬಿಸಿ ಅಭ್ಯರ್ಥಿಗಳಿಗೆ ಕೋಟಾ ನೀಡುವ ವಿಚಾರವು ಸದ್ಯ ಕಾನೂನು ಹೋರಾಟವಾಗಿರುವ ಕಾರಣದಿಂದಾಗಿ ಚುನಾವಣೆ ಇಷ್ಟೊಂದು ವಿಳಂಬವಾಗಿದೆ.
ಒಬಿಸಿಗಳಿಗೆ ಶೇಕಡ 27ರಷ್ಟು ಕೋಟಾವನ್ನು ಜಾರಿಗೊಳಿಸುವ ಮಹಾರಾಷ್ಟ್ರ ಸರ್ಕಾರದ ಸುಗ್ರೀವಾಜ್ಞೆಯನ್ನು 2021ರಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಅದಾದ ಬಳಿಕದಿಂದ ಈ ವಿಚಾರ ಉನ್ನತ ನ್ಯಾಯಾಲದಲ್ಲಿದ ಮೆಟ್ಟಿಲಲ್ಲಿದೆ.
ಅರ್ಜಿದಾರರ ಪರವಾಗಿ ವಕೀಲೆ ಇಂದಿರಾ ಜೈಸಿಂಗ್ ಹಾಜರಾಗಿದ್ದು, ಸ್ಥಳೀಯ ಸಂಸ್ಥೆಗಳಿಗೆ ಶೀಘ್ರದಲ್ಲೇ ಚುನಾವಣೆಗಳನ್ನು ನಡೆಸುವುದು ಅಗತ್ಯ ಎಂದು ಒತ್ತಿ ಹೇಳಿದ್ದಾರೆ. ರಾಜ್ಯ ಸರ್ಕಾರವು ಆಯ್ಕೆ ಮಾಡಿದ ಅಧಿಕಾರಿಗಳ ಮೂಲಕ ಸ್ಥಳೀಯ ಸಂಸ್ಥೆಗಳನ್ನು ಏಕಪಕ್ಷೀಯವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಇನ್ನು ಅರ್ಜಿದಾರರ ಪರವಾಗಿ ಹಾಜರಾದ ಮತ್ತೋರ್ವ ವಕೀಲ ಗೋಪಾಲ್ ಶಂಕರನಾರಾಯಣನ್, ಒಬಿಸಿಗಳಿಗೆ ಮೀಸಲಾತಿ ನೀಡುವಾಗ ರಾಜಕೀಯವಾಗಿ ಹಿಂದುಳಿದ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಬೇಕು ಎಂದು ನ್ಯಾಯಾಲಯಕ್ಕೆ ಹೇಳಿದರು.
ಇದನ್ನು ಓದಿದ್ದೀರಾ? ನಿಜಕ್ಕೂ ಜಾತಿಗಣತಿ ನಡೆಸುತ್ತದಾ ಬಿಜೆಪಿ; ಸಿದ್ಧವಿರುವ ವರದಿ ಜಾರಿ ಮಾಡದೆ ವಿಳಂಬ ಮಾಡುತ್ತಿರುವುದೇಕೆ ಕಾಂಗ್ರೆಸ್?
ಈ ವೇಳೆ ನ್ಯಾಯಮೂರ್ತಿ ಸೂರ್ಯಕಾಂತ್, “ದೇಶದಲ್ಲಿ ಮೀಸಲಾತಿ ರೈಲು ಬೋಗಿಗಳಂತೆ ಆಗಿದೆ. ಒಳಗೆ ಬಂದ ಜನರು ಇತರರನ್ನು ಒಳಗೆ ಬರಲು ಬಿಡುವುದಿಲ್ಲ. ಇದು ಒಳಗೊಳ್ಳುವಿಕೆಯ ತತ್ವ. ಸರ್ಕಾರಗಳು ಹೆಚ್ಚಿನ ವರ್ಗಗಳನ್ನು ಗುರುತಿಸುವ ಕರ್ತವ್ಯ ಹೊಂದಿವೆ” ಎಂದು ಅಭಿಪ್ರಾಯಿಸಿದರು.
“ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ವಂಚಿತರಾದ ಜನರಿದ್ದಾರೆ. ಅವರೇಕೆ ಮೀಸಲಾತಿಯ ಪ್ರಯೋಜನವನ್ನು ಪಡೆಯಬಾರದು? ಕೆಲವೇ ಕುಟುಂಬಗಳು ಮತ್ತು ಗುಂಪುಗಳು ಮಾತ್ರ ಪ್ರಯೋಜನವನ್ನು ಪಡೆಯುತ್ತಿವೆ” ಎಂದು ನ್ಯಾಯಮೂರ್ತಿಗಳು ಆರೋಪಿಸಿದರು.
ಈ ತಿಂಗಳ ಕೊನೆಯಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳುವ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಇಂತಹ ಅಭಿಪ್ರಾಯವನ್ನೇ ಇತ್ತೀಚೆಗೆ ವ್ಯಕ್ತಪಡಿಸಿದ್ದರು. ಎಸ್ಸಿ/ಎಸ್ಟಿ ವರ್ಗಗಳ ಉಪ-ವರ್ಗೀಕರಣವನ್ನು ಅನುಮತಿಸಿದ ಮತ್ತು ರಾಜ್ಯಗಳು ಈ ಉಪ-ವರ್ಗೀಕರಣಗಳನ್ನು ಮಾಡಬಹುದು ಎಂಬ ತಮ್ಮ ತೀರ್ಪಿನ ವೇಳೆ ಈ ರೈಲು ಬೋಗಿಯ ಉಲ್ಲೇಖವನ್ನು ಗವಾಯಿ ಮಾಡಿದ್ದರು.
“ಇಂತಹ ಉಪ-ವರ್ಗೀಕರಣವನ್ನು ವಿರೋಧಿಸುವ ಮನೋಭಾವವನ್ನು ನಾನು ರೈಲಿನ ಸಾಮಾನ್ಯ ಬೋಗಿಯಲ್ಲಿರುವ ವ್ಯಕ್ತಿಯಂತೆ ಕಾಣುತ್ತೇನೆ. ಬೋಗಿ ಹೊರಗಿನ ಜನರು ಬೋಗಿಯೊಳಗೆ ಬರಲು ಹೆಣಗಾಡುತ್ತಾರೆ. ಇನ್ನೊಂದೆಡೆ ಬೋಗಿ ಒಳಗಿನ ಜನರು ಹೊರಗಿನ ಜನರು ಒಳಗೆ ಪ್ರವೇಶಿಸುವುದನ್ನು ತಡೆಯಲು ಅವರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ” ಎಂದು ಹೇಳಿದ್ದರು.
ಕೇಂದ್ರವು ಮುಂದಿನ ಜನಗಣತಿಯಲ್ಲಿ ಜಾತಿ ಜನಗಣತಿಯನ್ನೂ ಮಾಡುವ ನಿರ್ಧಾರವನ್ನು ಪ್ರಕಟಿಸಿದ ಬಳಿಕ ಹಿರಿಯ ನ್ಯಾಯಾಧೀಶರುಗಳು ನೀಡಿರುವ ಈ ಹೇಳಿಕೆ ಮಹತ್ವವನ್ನು ಪಡೆದಿದೆ.
ಜಾತಿ ಜನಗಣತಿ ನಡೆಸಬೇಕು ಎಂಬುದು ವಿರೋಧ ಪಕ್ಷಗಳ ಬೇಡಿಕೆಯಾಗಿದೆ. ಆದರೆ ನಿರಂತರವಾಗಿ ಜಾತಿ ಜನಗಣತಿಯನ್ನು ವಿರೋಧಿಸುತ್ತಾ ಬಂದಿದ್ದ ಕೇಂದ್ರ ಸರ್ಕಾರವು ಈಗ ಯುಟರ್ನ್ ಹೊಡೆದು ಜಾತಿ ಜನಗಣತಿ ನಡೆಸಲು ಮುಂದಾಗಿದೆ. ಹಿಂದುಳಿದ ವರ್ಗಗಳನ್ನು ಗುರುತಿಸಲು ಮತ್ತು ಸಕಾರಾತ್ಮಕ ಕ್ರಮಕ್ಕೆ ಜಾತಿ ಜನಗಣತಿ ಸಹಾಯ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
