ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದ ನಿಯಂತ್ರಣ ರೇಖೆ ಉದ್ದಕ್ಕೂ ಪಾಕಿಸ್ತಾನ ಸೇನೆ ನಡೆಸಿದ ಭಾರೀ ಶೆಲ್ ದಾಳಿಯಲ್ಲಿ 5ನೇ ಫೀಲ್ಡ್ ರೆಜಿಮೆಂಟ್ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ ಗುರುವಾರ ಮೃತಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆಯು ಭಾರತದ ಅಡಿಯಲ್ಲಿರುವ ಪೂಂಚ್ ಪ್ರದೇಶದಲ್ಲಿ ಜನ ವಾಸವಾಗಿರುವ ಪ್ರದೇಶಗಳು, ರಸ್ತೆಗಳ ಮೇಲೆ ದಾಳಿ ನಡೆಸಿದೆ. ಈ ಶೆಲ್ ದಾಳಿಯಿಂದ 15 ಮಂದಿ ನಾಗರಿಕರು ಮೃತಪಟ್ಟಿದ್ದು, 43 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಎಲ್ಒಸಿಯ ಪ್ರದೇಶವಾಗಿರುವ ಪೂಂಚ್ ಮತ್ತು ರಾಜೌರಿ, ತಂಗ್ದಾರ್ ಪ್ರದೇಶಗಳಲ್ಲಿನ ಜನವಸತಿಯ ಪ್ರದೇಶಗಳ ಹಲವೆಡೆ ಶೆಲ್ ದಾಳಿ ನಡೆಸಿರುವ ಪಾಕಿಸ್ತಾನವು, ನಾಗರಿಕರನ್ನು ಗುರಿಯಾಗಿಸಿರುವುದಾಗಿ ವರದಿಯಾಗಿದೆ.
ಬುಧವಾರ ತಡರಾತ್ರಿ ಆರಂಭವಾದ ಶೆಲ್ ದಾಳಿಯು ಭಾರತದ ಮುಂಚೂಣಿ ಠಾಣೆಗಳು ಮತ್ತು ಹತ್ತಿರದ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆದಿದೆ. ಮೋರ್ಟರ್ ಗುಂಡುಗಳು ಮತ್ತು ಫಿರಂಗಿ ಗುಂಡಿನ ದಾಳಿಗಳು ಹಳ್ಳಿಗಳ ಬಳಿ ಅಪಾಯಕಾರಿಯಾಗಿ ಬಿದ್ದವು. ಭಾರತದ ಇತ್ತೀಚಿನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯೆಯಾಗಿ ಈ ಕೃತ್ಯವನ್ನು ಸ್ಪಷ್ಟ ಕದನ ವಿರಾಮ ಉಲ್ಲಂಘನೆ ಮತ್ತು ಉದ್ದೇಶಪೂರ್ವಕ ಪ್ರಚೋದನೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಪರೇಷನ್ ಸಿಂಧೂರ – ಪಾಕ್ ಭಯೋತ್ಪಾದನೆಗೆ ತಕ್ಕ ಶಾಸ್ತಿ!
ದಾಳಿಯಲ್ಲಿ ಮಾರಣಾಂತಿಕವಾಗಿ ಗಾಯಗೊಂಡಾಗ ಯೋಧ ಮುಂಚೂಣಿಯ ಸ್ಥಾನಗಳಲ್ಲಿ ಸಕ್ರಿಯ ಕರ್ತವ್ಯದಲ್ಲಿದ್ದರು. ಭಾರತೀಯ ಸೇನೆಯ ಪ್ರಕಾರ, ಶರ್ಮಾ ಕೊನೆಯವರೆಗೂ ಧೈರ್ಯದಿಂದ ಹೋರಾಡಿದರು. ಪ್ರತಿಕೂಲ ಆಕ್ರಮಣದ ವಿರುದ್ಧ ದೇಶದ ಗಡಿಯನ್ನು ರಕ್ಷಿಸಿದರು.
ಹುತಾತ್ಮರಾದ 32 ವರ್ಷದ ಜವಾನ್ ದಿನೇಶ್ ಕುಮಾರ್ ಶರ್ಮಾ, ಹರಿಯಾಣದ ಪಲ್ವಾಲ್ನ ಮೊಹಮ್ಮದ್ಪುರ ಗ್ರಾಮದವರು. ಅವರು ಪಾಕಿಸ್ತಾನದ ಆಕ್ರಮಣ ನೆಡಿಸುವ ಅತೀ ಸೂಕ್ಷ್ಮ ಪ್ರದೇಶವಾದ ಎಲ್ಒಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.