ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಇದೇ ಮೇ. 14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ರಾಜ್ಯ ಸಮಿತಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಇಂದು ಕಲಬುರಗಿ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್ಯುಸಿಐ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ ಶಶಿಧರ್, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪರ್ಧೆಗೆ ಬಿದ್ದಂತೆ ಬೆಲೆ ಏರಿಕೆಯ ಮೂಲಕ ಜನರನ್ನು ದೋಚುತ್ತಾ ಒಬ್ಬರ ಮೇಲೊಬ್ಬರು ಆರೋಪ ಹೊರೆಸುತ್ತಿದ್ದಾರೆ. ಅಡುಗೆ ಅನೀಲ, ಔಷಧಿಗಳು, ವಿದ್ಯುತ್, ಹಾಲು, ಡೀಸೆಲ್, ಮೆಟ್ರೋ, ನೀರು, ಆಸ್ತಿ ತೆರಿಗೆ ಎಲ್ಲವೂ ದುಬಾರಿಯಾಗಿದೆ. ಎಲ್ಲಾ ತೆರಿಗೆಗಳ ಹೊರೆ ಹೊರುವ ನಾವು ನಮ್ಮ ಶಿಕ್ಷಣಕ್ಕೂ ನಾವೇ ಖರ್ಚು ಮಾಡಬೇಕಾದ, ನಮ್ಮ ಆರೋಗ್ಯದ ವೆಚ್ಚವನ್ನು ನಾವೇ ಭರಿಸಬೇಕಾದ ದುರ್ಗತಿಯನ್ನು ಅನುಭವಿಸುತ್ತಿದ್ದೇವೆ. ಈ ತೆರಿಗೆಯನ್ನು ಬಳಸಿ ಅವಶ್ಯಕ ಅನುದಾನ ನೀಡದ ಕಾರಣ ಸರ್ಕಾರಿ ಶಾಲೆ, ಕಾಲೇಜು, ಆಸ್ಪತ್ರೆಗಳು ದಯನೀಯ ಸ್ಥಿತಿಗೆ ತಳ್ಳಲ್ಪಟ್ಟಿವೆ. ಬದಲಿಗೆ, ಈ ತೆರಿಗೆಯ ಹಣ ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೋರೇಟ್ ಕಂಪನಿಗಳ, ದೊಡ್ಡ ಗುತ್ತಿಗೆದಾರರ ಕೆಂಪು ಗೂಟದ ರಾಜಕಾರಣಿಗಳ ಮತ್ತು ಹಿರಿಯ ಅಧಿಕಾರಿಗಳ ಜೇಬು ಸೇರುತ್ತಿವೆ” ಎಂದು ಆರೋಪಿಸಿದರು.
“ಇದಕ್ಕೆಲ್ಲಾ ಈ ಶೋಷಕ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣವಾಗಿದ್ದು, ಅದರ ವಿರುದ್ದ ಜನತೆ ವಿಶೇಷವಾಗಿ ಯುವ ಜನತೆ ಸಿಡಿದೇಳದಂತೆ ಇರಲು, ಅವರನ್ನು ಸಮೂಹ ಮಾಧ್ಯಮಗಳ ಮೂಲಕ ಪ್ರಸಾರವಾಗುತ್ತಿರುವ ಅಶ್ಲೀಲತೆ, ಎಲ್ಲೆಡೆ ಸಿಗುವ ಮದ್ಯ, ಡ್ರಗ್ಸ್ ಮುಂತಾದ ವ್ಯಸನಗಳಲ್ಲಿ ಮುಳುಗಿಸಲಾಗುತ್ತಿದೆ. ಇದರಿಂದಾಗುವ ಸಾಂಸ್ಕೃತಿಕ ಅಧಃಪತನದಿಂದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಮೇರೆ ಮೀರುತ್ತಿವೆ. ಜೊತೆಗೆ, ನಿರುದ್ಯೋಗದ ಜ್ವಾಲೆಯಲ್ಲಿ ನಮ್ಮ ಯುವಜನತೆ ತತ್ತರಿಸುತ್ತಿದೆ” ಎಂದು ಅಸಮಾಧಾನಗೊಂಡರು.
ಇದನ್ನೂ ಓದಿ: ಕಲಬುರಗಿ | ಹೊರಗುತ್ತಿಗೆ ನೌಕರರ ಶೋಷಣೆ ಆರೋಪ; ಪ್ರತಿಭಟನೆ
“ಅಚ್ಛೆ ದಿನದ ಭರವಸೆಯಾಗಲೀ, ಗ್ಯಾರಂಟಿಗಳಾಗಲೀ ರೈತ ಕಾರ್ಮಿಕರ ಬದುಕನ್ನು ಹಸನು ಮಾಡಿಲ್ಲ. ಬದಲಿಗೆ, ಜನರನ್ನು ಜಾತಿ, ಮತ ಧರ್ಮಗಳ ಅಮಲಿನಲ್ಲಿ ಮುಳುಗಿಸಿ, ಸಮಸ್ಯೆಗಳನ್ನು ಮರೆಮಾಚುವ ಷಡ್ಯಂತ್ರ ನಡೆಯುತ್ತಿದೆ. ರಾಜ್ಯ ರಾಜಕಾರಣದಲ್ಲಿ ಹೋರಾಟದ ಜನಪರ ದನಿಗಳೇ ಉಡುಗಿ ಹೋಗಿರುವ ಇಂದಿನ ಪರಿಸ್ಥಿತಿಯಲ್ಲಿ ಜನರ ನೈಜ ಸಮಸ್ಯೆಗಳನ್ನು ಮುನ್ನೆಲೆಗೆ ತರುವುದಕ್ಕಾಗಿ ನಮ್ಮ ಪಕ್ಷ (ಎಸ್ಯುಸಿಐ) ರಾಜ್ಯ ಸಮಿತಿಯ ನೇತೃತ್ವದಲ್ಲಿ ರಾಜ್ಯ ಮಟ್ಟದ ಬೃಹತ್ ಜನ ಹೋರಾಟವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ರೈತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು” ಕರೆ ನೀಡಿದರು.