ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ 500ನೇ ರಕ್ತದಾನ ಶಿಬಿರದ ಪ್ರಚಾರಾರ್ಥವಾಗಿ ಝಮಾನ್ ಬಾಯ್ಸ್ ಕಲ್ಲಡ್ಕ ಸಂಸ್ಥೆಯ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಏಕಕಾಲಕ್ಕೆ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮೊದಲು ರಕ್ತದಾನದ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಕಲ್ಲಡ್ಕದಿಂದ ಹೊರಟ ಜಾಥಾ ಮಂಗಳೂರಿನ ರಾಜ ಬೀದಿಯಲ್ಲಿ ಸಂಚರಿಸಿತು. ಜಾಥಾದಲ್ಲಿ ಪಾಲ್ಗೊಂಡಿದ್ದ ಯುವಕರ ತಂಡ ವಿವಿಧ ಆಸ್ಪತ್ರೆಗಳಿಗೆ ತೆರಳಿ ರಕ್ತದಾನ ಮಾಡಿ ಮಾದರಿಯಾದರು. ಸುಮಾರು ನೂರಕ್ಕೂ ಅಧಿಕ ಯುವಕರು ರಕ್ತದಾನ ಮಾಡಿ ರಕ್ತದಾನದ ಅಭಾವವನ್ನು ಸ್ವಲ್ಪಮಟ್ಟಕ್ಕೆ ನೀಗಿಸುವಲ್ಲಿ ಸಫಲರಾದರು.
ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ದೇಶ ವಿದೇಶಗಳಲ್ಲಿ ಆಯೋಜಿಸುತ್ತಿದ್ದು, ಸಂಸ್ಥೆಯ ಸಮಾಜಮುಖಿ ಸೇವೆಗೆ ಈಗಾಗಲೇ ಹಲವಾರು ಪ್ರಶಸ್ತಿಗಳು ಲಭಿಸಿದ್ದು, ಈ ಸೇವೆಯನ್ನು ಮತ್ತಷ್ಟು ಮುಂದುವರಿಸಿ ನಾಗರಿಕರಲ್ಲಿ ರಕ್ತದಾನದ ಕುರಿತು ಅರಿವನ್ನು ಮೂಡಿಸಲು ಸಂಸ್ಥೆ ಸಹಕರಿಸುತ್ತಿದೆ.

ಇದನ್ನೂ ಓದಿ: ಮಂಗಳೂರು | ಮೇ 10ರಂದು ಪತ್ರಕರ್ತ ಬಿ.ಎಂ.ಬಶೀರ್ ಅವರ ‘ಅಗ್ನಿಪಥ’ ಕಾದಂಬರಿ ಬಿಡುಗಡೆ
ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಝಮಾನ್ ಬಾಯ್ಸ್ ಕಲ್ಲಡ್ಕ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.