ಭಾರತದ ಬಾಳೆ ತಾಪಮಾನ ಮತ್ತು ಹವಾಮಾನ ಸಂಬಂಧಿ ಕೀಟಬಾಧೆಯ ಅಪಾಯ ಎದುರಿಸುತ್ತಿದೆ. 2050ರ ವೇಳೆಗೆ ಉತ್ಪಾದನೆಯಲ್ಲಿ ಗಣನೀಯ ಕುಸಿತ ಕಾಣಬಹುದು ಎನ್ನುತ್ತದೆ ಇಂಗ್ಲೆಂಡ್ ಮೂಲದ ‘ಕ್ರಿಶ್ಚಿಯನ್ ಏಡ್’ ಅಧ್ಯಯನ.
ಭಾರತ ವಿಶ್ವದ ಅತಿದೊಡ್ಡ ಬಾಳೆ ಉತ್ಪಾದಕ ದೇಶಗಳಲ್ಲೊಂದು. 15ರಿಂದ 35 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬಾಳೆ ಚೆನ್ನಾಗಿ ಬೆಳೆಯುತ್ತದೆ. ಸಾಕಷ್ಟು ನೀರಿನ ಅಗತ್ಯವನ್ನೂ ಬೇಡುತ್ತದೆ.
ವಿಶ್ವದಲ್ಲಿ ಗೋಧಿ, ಅಕ್ಕಿ ಹಾಗೂ ಮೆಕ್ಕೆ ಜೋಳದ ನಂತರ ನಾಲ್ಕನೇ ಅತಿ ಮುಖ್ಯವಾದ ಆಹಾರ ಬೆಳೆಯಾಗಿದೆ ಬಾಳೆ. ಭಾರತದ ಒಟ್ಟು ಜಮೀನಿನ ಸುಮಾರು 20% ಭಾಗದಲ್ಲಿ ಬೆಳೆಯಲಾಗುತ್ತಿದೆ. ತಮಿಳುನಾಡು ಅತಿ ಹೆಚ್ಚು ವಿಸ್ತೀರ್ಣದಲ್ಲಿ ಬಾಳೆ ಬೆಳೆಯುವ ರಾಜ್ಯವಾಗಿದ್ದು, ಉತ್ಪಾದನೆ ಮತ್ತು ರಫ್ತಿನ ಪ್ರಮಾಮದಲ್ಲಿ ಮಹಾರಾಷ್ಟ್ರ ಮುಂದಿದೆ.
ಹವಾಮಾನ ಬದಲಾವಣೆಯಿಂದ ಉಂಟಾಗುವ ತಾಪಮಾನ ಏರಿಕೆಯಿಂದಾಗಿ ಬಾಳೆ ಬೆಳೆಯಲು ಉತ್ತಮವೆನಿಸಿದ ಶೇ.60ರಷ್ಟು ಪ್ರದೇಶಗಳು ಅಪಾಯದಲ್ಲಿವೆ ಎಂದು ಅಧ್ಯಯನ ಎಚ್ಚರಿಸಿದೆ.
ಚಂಡಮಾರುತದ ಮಳೆ, ತೀವ್ರ ಪ್ರವಾಹಗಳು ಮತ್ತು ಬರಗಾಲದಂತಹ ಸ್ಥಿತಿಗಳಂತಹ ಹವಾಮಾನ ಬದಲಾವಣೆ ಬಾಳೆ ಬೆಳೆಯನ್ನು ಪ್ರತಿಕೂಲವಾಗಿ ಬಾಧಿಸಲಿದೆ. ನಿರಂತರವಾಗಿ ಹೆಚ್ಚುತ್ತಿರುವ ತಾಪಮಾನ ಮತ್ತು ಮಳೆಗಾಲದ ಋತುವಿನ ಬದಲಾವಣೆಗಳು ಉತ್ಪಾದನೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರಲಿದೆ ಎಂದು ಅಧ್ಯಯನ ಹೇಳಿದೆ.
ಭಾರತದ ಮೇಲಿನ ಪರಿಣಾಮ
ಭಾರತವು 2050ರ ವೇಳೆಗೆ ಹವಾಮಾನ ಬದಲಾವಣೆಯಿಂದ ಬಾಳೆ ಇಳುವರಿಯಲ್ಲಿ ಕುಸಿತವನ್ನು ಕಾಣಲಿದೆ. ಪ್ರಕೃತಿಗೆ ಮಾರಕವಾದ ಮಾನವ ಚಟುವಟಿಕೆಗಳಿಂದ ಉಂಟಾಗುವ ತಾಪಮಾನದ ಏರಿಕೆಯು ಹೆಚ್ಚಿನ ಕೀಟ ದಾಳಿಗಳು ಮತ್ತು ವ್ಯಾಪಕ ಸೋಂಕು ಹರಡಲು ಕಾರಣವಾಗಿದೆ. ಉತ್ಪಾದನೆಯ ಜೊತೆಗೆ ಬಾಳೆಯ ಪೌಷ್ಟಿಕಾಂಶದ ಮೇಲೂ ಪರಿಣಾಮ ಬೀರಬಹುದು. ಅಕಾಲಿಕ ಪಕ್ವತೆಗೆ ದಾರಿ ಮಾಡಿಕೊಡುತ್ತದೆ. ಬದಲಾಗುತ್ತಿರುವ ಹವಾಮಾನವು ಭಾರತದಲ್ಲಿ ಶಿಲೀಂಧ್ರ ರೋಗಗಳಾದ ಪನಾಮ ರೋಗ ಮತ್ತು ಬಾಳೆ ಕೀಟಗಳನ್ನು ಉಲ್ಬಣಗೊಳಿಸುತ್ತದೆ. ಪರಿಣಾಮವಾಗಿ ಉತ್ಪಾದನೆ ಕುಸಿಯಲಿದೆ. ರೈತರ ಆದಾಯವೂ ಸೊರಗಲಿದೆ.
ಇತರ ಹಣ್ಣುಗಳಿಗಿಂತ ಭಿನ್ನವಾಗಿ, ಬಾಳೆ ವರ್ಷಪೂರ್ತಿ ಲಭ್ಯವಿರುತ್ತದೆ. ಬಡಜನರಿಗೂ ಕೈಗೆಟುಕುವ ಮತ್ತು ಪೌಷ್ಟಿಕ ಆಹಾರವಾಗಿರುತ್ತದೆ. ಇದರ ಜೊತೆಗೆ, ಬಾಳೆಯ ನಾರಿನಿಂದ ಕಾಗದ, ಚೀಲಗಳು ಮತ್ತು ಹಗ್ಗ ತಯಾರಿಕೆಯನ್ನು ಅವಲಂಬಿಸಿರುವ ಕುಟುಂಬಗಳು ದೊಡ್ಡ ಸಂಖ್ಯೆಯಲ್ಲಿವೆ.
ವಿಶ್ವದ ಪರಿಸ್ಥಿತಿ
ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳು ವಿಶ್ವದ ಶೇ.80ರಷ್ಟು ಬಾಳೆಯನ್ನು ಬೆಳೆಯುತ್ತವೆ. ಬಾಳೆ ಬೆಳೆಯಲು ಯೋಗ್ಯವಾದ ಶೇ.60ರಷ್ಟು ಪ್ರದೇಶಗಳು ಹಾಳಾಗಬಹುದು ಎಂದು ಅಧ್ಯಯನಗಳು ಎಚ್ಚರಿಸಿವೆ. ಭಾರತ, ಬ್ರೆಜಿಲ್, ಕೊಲಂಬಿಯಾ ಹಾಗೂ ಕೋಸ್ಟರಿಕಾದಂತಹ ದೇಶಗಳಲ್ಲಿ ತೀವ್ರ ಇಳುವರಿ ತೀವ್ರವಾಗಿ ಕುಸಿಯಲಿದೆ. ಅನೇಕ ಆಫ್ರಿಕನ್ ದೇಶಗಳಲ್ಲಿ ಬಾಳೆ ಪ್ರಧಾನ ಆಹಾರ. ಹೀಗಾಗಿ ಯಾವುದೇ ಕುಸಿತವು ಇಳುವರಿ ಕುಸಿತವು ಇಂತಹ ದೇಶಗಳಲ್ಲಿ ಅಪೌಷ್ಟಿಕತೆಯನ್ನು ಉಲ್ಬಣಗೊಳಿಸಲಿದೆ.
ಹವಾಮಾನ ವೈಪರೀತ್ಯ ಮತ್ತು ತಾಪಮಾನ ಹೆಚ್ಚಳವನ್ನು ತಡೆಯವ ಕ್ರಮಗಳನ್ನು ಆಚರಣೆಗೆ ತರುವ ಅಗತ್ಯವನ್ನು ಬಾಳೆ ಕುರಿತ ಅಧ್ಯಯನಗಳು ರೇಖಾಂಕಿತಕೊಳಿಸಿವೆ.
ರೈತರ ಆದಾಯವನ್ನು ಹೆಚ್ಚಿಸುವುದು ಸುಸ್ಥಿರತೆಯನ್ನು ಸಾಧಿಸಲು ಪ್ರಮುಖವಾಗಿದೆ ಎಂದು ತಜ್ಞರು ಒತ್ತಿಹೇಳುತ್ತಾರೆ. ಇಂಗ್ಲೆಂಡ್ ಮತ್ತು ಐರೋಪ್ಯ ರಾಷ್ಟ್ರಗಳು ಬಾಳೆ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದರೂ, ಸೂಪರ್ ಮಾರ್ಕೆಟ್ ಗಳು ಬಾಳೆ ಬೆಳೆಗಾರರಿಗೆ ಕಡಿಮೆ ದರ ನೀಡಿ ಶೋಷಿಸುತ್ತಿವೆ. ಹೀಗಾಗಿ ಬಾಳೆ ಬೆಳೆಗಾರರ ಆದಾಯ ಸುಸ್ಥಿರಗೊಳ್ಳುತ್ತಿಲ್ಲ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಅವರನ್ನು ಹೈರಾಣಾಗಿಸಿವೆ. ಬಾಳೆ ಉತ್ಪಾದನೆ ಕುಸಿಯಲು ಈ ಅಂಶವೂ ಮುಖ್ಯ ಕಾರಣವಾಗಿದೆ ಎಂದು ಅಧ್ಯಯನಗಳು ಹೇಳಿವೆ.