ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನದಲ್ಲಿ ಮೃತ ಟೆರರಿಸ್ಟ್ ಗಳಿಗೆ ಒಂದು ಕೋಟಿ ರೂ ಪರಿಹಾರ ನೀಡಿದ್ದು ಬಲವಾದ ಸಾಕ್ಷಿಯಾಗಿದೆ. ಯುದ್ಧದ ಟ್ರೇಲರ್ ಅಂತಲೇ ಕದನ ವಿರಾಮ ನೀಡಿ ನಮ್ಮ ಪ್ರವಾಸಿಗರ ಸಾವಿನ ಪ್ರತೀಕಾರ ತೀರಿಸಿಕೊಳ್ಳುವ ಉತ್ತಮ ಅವಕಾಶ ಕಳೆದು ಕೊಂಡಿದ್ದು ವಿಷಾದ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಚಿಕ್ಕೋನಹಳ್ಳಿ ಜ್ಯೋತಿನಗರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಒಟ್ಟು 1.85 ಕೋಟಿ ರೂಗಳ ಐದು ಗ್ರಾಮದ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಟ್ರಂಪ್ ಹೇಳಿಕೆಗೆ ಯುದ್ದ ವಿರಾಮ ಕೊಟ್ಟಿದ್ದು ಉತ್ತಮ ಅವಕಾಶ ಕಳೆದು ಹೋಯಿತು. ನಮ್ಮ ವಿರುದ್ಧ ಪಾಕಿಸ್ತಾನದ ಸರ್ಕಾರ ಹೇಳಿಕೆ ನೀಡಲು ಸಮಯ ನೀಡದೆ ಮುಂದುವರೆದಿದ್ಧ ನಮ್ಮ ಸೇನೆಗೆ ಮೂರು ದಿನ ಸಮಯ ನೀಡಿದ್ದರೆ ಸಾಕಿತ್ತು. ಪಾಕಿಸ್ತಾನ ಭೂಪಟದಲ್ಲಿ ಹುಡುಕಬೇಕಿತ್ತು. ಈ ಬಿಗಿ ಹಿಡಿತ ಸಾಧಿಸಿ ಪಿಓಕೆ ನಮ್ಮದಾಗಿಸಿಕೊಳ್ಳಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಂದಾಯ ಗ್ರಾಮಗಳ ಪಟ್ಟಿಗೆ ಹೊಸದಾಗಿ 9 ಗ್ರಾಮಗಳನ್ನು ಸೇರಿಸಲಾಗಿದೆ. ಈಗಾಗಲೇ ಕಂದಾಯ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ನೋಂದಣಿ ಕಾರ್ಯ ನಡೆಸಲಾಗಿದೆ. ಈಗಾಗಲೇ 1600 ನೋಂದಣಿ ಕಾರ್ಯ ಮುಗಿದಿದೆ. ಮೂಲ ಗ್ರಾಮದಿಂದ 700 ಮೀಟರ್ ದೂರ ಇರುವ ಗ್ರಾಮಗಳನ್ನು ಗುರುತಿಸಿ ಸರ್ಕಾರದ ಮಾನದಂಡ ಅನುಸರಿಸಿ ಕಂದಾಯ ಗ್ರಾಮ ಮಾರ್ಪಾಟು ಮಾಡಲಾಗುತ್ತಿದೆ ಎಂದ ಅವರು ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಸ್ಥಳೀಯ ಚುನಾವಣೆ ನಡೆಸಲು ಕಾಂಗ್ರೆಸ್ ಸಿದ್ಧವಿದೆ. ಈ ಹಿಂದೆ ಬಿಜೆಪಿ ಸರ್ಕಾರ ಎರಡು ವರ್ಷ ಮುಂದೂಡಿತ್ತು. ಆಗ ಮಾತನಾಡದ ಶಾಸಕ ಕೃಷ್ಣಪ್ಪ ಅವರು ತಾಕತ್ತಿಲ್ಲ ಎಂದು ಕಾಂಗ್ರೆಸ್ ಟೀಕಿಸುತ್ತಾರೆ. ಮೈತ್ರಿ ಮಾಡಿಕೊಂಡು ಹಿನ್ನಲೆ ಬಿಜೆಪಿ ಮಾಡಿದ ತಪ್ಪು ಮಾತನಾಡುತ್ತಿಲ್ಲ ಎಂದು ಟಾಂಗ್ ನೀಡಿದ ಅವರು ಈಗ 5 ಕೋಟಿ ರೂಗಳ ಸಿಸಿ ರಸ್ತೆಗಳ ಕಾಮಗಾರಿ ಎಲ್ಲಡೆ ನಡೆದಿದೆ. ಬೆಲವತ್ತ ಗ್ರಾಮಕ್ಕೆ ಒಂದು ಕೋಟಿ, ನಿಟ್ಟೂರು 60 ಲಕ್ಷ, ತ್ಯಾಗಟೂರು 90 ಲಕ್ಷ ಕೆಲಸ ಆರಂಭವಾಗಲಿದೆ. ಈ ಜೊತೆಗೆ ಎತ್ತಿನಹೊಳೆ ಯೋಜನೆಯ 30 ಕೋಟಿ ಹಾಗೂ ಹೇಮಾವತಿ ಇಲಾಖೆಯ 100 ಕೋಟಿ ರೂಗಳಲ್ಲಿ ಗ್ರಾಮೀಣ ರಸ್ತೆ ಅಭಿವೃದ್ದಿಗೆ ಶೀಘ್ರ ಪೂಜೆ ನಡೆಯಲಿದೆ ಎಂದರು.
ಗಣಿಭಾದಿತ ಗ್ರಾಮಗಳ ಅಭಿವೃದ್ಧಿಗೆ 75 ಕೋಟಿ ಮಂಜೂರು ಆಗಿದೆ. ಗ್ರಾಮಗಳ ಪಟ್ಟಿ ಸಿದ್ಧಗೊಳಿಸಿ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು. ಶಾಲೆಗಳ ಅಭಿವೃದ್ಧಿಗೆ ನಾನು ಸಚಿವನಾಗಿದ್ದ ಸಮಯದಲ್ಲಿ 10 ಕೋಟಿ ರೂಗಳನ್ನು ಬಿಡುಗಡೆ ಮಾಡಿ ಕೆಲಸ ಮಾಡಲಾಗಿದೆ. ಈಗ ಹೊಸ 35 ಕೊಠಡಿಗಳಿಗೆ ಬೇಡಿಕೆ ಇದೆ. ನಮ್ಮಲ್ಲಿನ ಎಚ್ ಎಎಲ್ ಘಟಕದಿಂದ ಬರುವ ಅನುದಾನವನ್ನು ಶಾಲೆಗಳಿಗೆ ಬಳಸಲಾಗಿದೆ ಎಂದ ಅವರು ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದೆ. ಕೊಟ್ಟ ಮಾತಿನಂತೆ ನಡೆದು ಐದು ಗ್ಯಾರಂಟಿ ಯೋಜನೆ ಸಫಲತೆ ಕಂಡಿದೆ. ಮುಂದಿನ ಮೂರು ವರ್ಷ ಸಹ ಇದೇ ರೀತಿ ಜನಪರ ಕೆಲಸ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಉಂಡೆ ರಾಮಣ್ಣ, ಸಿ.ಜಿ.ಲೋಕೇಶ್, ಯು.ರಾಜಣ್ಣ, ಸತ್ತಿಗಪ್ಪ, ಬೆಲವತ್ತ ಶಿವಕುಮಾರ್, ಪಣಗಾರ್ ವೆಂಕಟೇಶ್, ಗಳಗ ದಿವಾಕರ್, ಗುತ್ತಿಗೆದಾರರಾದ ನಟರಾಜ್, ರವಿ, ಸಿದ್ದರಾಜು, ಪಂಚಾಯತ್ ರಾಜ್ ಎಇಇ ಚಂದ್ರಶೇಖರ್ ಇತರರು ಇದ್ದರು.