ಬಡವರ ಹಸಿವನ್ನು ನೀಗಿಸಲು ಸರ್ಕಾರ ರೂಪಿಸಿರುವ ಮಹತ್ತರ ಯೋಜನೆಯಾದ ‘ಇಂದಿರಾ ಕ್ಯಾಂಟೀನ್’ ಅನ್ನು ನಿಜ ಅರ್ಥದಲ್ಲಿ ಬಡವರ ಮನೆಯ ಊಟ ಎಂದೇ ಕರೆಯಬಹುದು. ಕಡಿಮೆ ವೆಚ್ಚದಲ್ಲಿ ಆಹಾರ ನೀಡುವ ಈ ಯೋಜನೆ ಹಲವರಿಗೆ ಆಶಾದಾಯಕವಾಗಿದ್ದರೂ, ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಸ್ಥಿತಿ ಭಿನ್ನವಾಗಿದೆ. ಇಲ್ಲಿನ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣವಾಗಿ 6 ತಿಂಗಳು ಕಳೆದರೂ ಇನ್ನೂ ಉದ್ಘಾಟನೆಯಿಲ್ಲದೆ ನಿಂತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಆರಂಭವಾಗದೆ ವಿಳಂಬವಾಗುತ್ತಿರುವುದು ಸ್ಥಳೀಯರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶವನ್ನು ಉಂಟುಮಾಡಿದೆ.
ಬಸ್ ತಂಗುದಾಣದಿಂದ ಕೇವಲ ಕೂಗಳತೆ ದೂರದಲ್ಲಿದ್ದರೂ ಪ್ರಯಾಣಿಕರಿಗೆ ಇಲ್ಲೊಂದು ಕ್ಯಾಂಟೀನ್ ಇದೆ ಎಂದೇ ಗೊತ್ತಾಗುವುದಿಲ್ಲ. ಕಾರಣ ಅಲ್ಲೊಂದು ಸೂಕ್ತ ನಾಮಫಲಕವೂ ಇಲ್ಲ. ಇಂದಿರಾ ಗಾಂಧಿಯವರ ಭಾವಚಿತ್ರ ಮಾತ್ರ ಕಾಣಿಸುತ್ತದೆ. ಆ ಚಿತ್ರದಿಂದಲೇ ಇದು ಇಂದಿರಾ ಕ್ಯಾಂಟೀನ್ ಎಂದು ತಿಳಿದುಕೊಳ್ಳಬೇಕಷ್ಟೆ. ತಂಗುದಾಣದ ಪಕ್ಕದಲ್ಲೆ ಕೃಷಿ ಮಾರುಕಟ್ಟೆ, ಐತಿಹಾಸಿಕ ದೇವಸ್ಥಾನ, ಮಸೀದಿ, ಆಟೋ ನಿಲ್ದಾಣಗಳಿವೆ. ಪ್ರತಿನಿತ್ಯ ಸುತ್ತ ಮುತ್ತಲ ಹಳ್ಳಿಗಳಿಂದ ಕೂಲಿ-ಕಾರ್ಮಿಕರು ಹಾಗೂ ದೇವಸ್ಥಾನದ ಭಕ್ತರು ಹಸಿದುಓಡಾಡುತ್ತಾರೆ. ಇವರಲ್ಲಿ ಬಹುತೇಕರು ಬಡವರು ಹಾಗೂ ಕೆಳ ಮಧ್ಯಮ ವರ್ಗದವರು. ಹಸಿವು ನೀಗಿಸಿಕೊಳ್ಳಲು ದೊಡ್ಡ ಹೋಟೆಲ್ಗೂ ಹೋಗದ ಪರಿಸ್ಥಿತಿಯವರು. ಇಲ್ಲಿ ನಿರ್ಮಾಣವಾಗಿರುವ ಕಟ್ಟಡ ಸೇವೆ ಆರಂಭಿಸಿದ್ದರೆ ಅವರೆಲ್ಲರ ಹಸಿವು ನೀಗುತ್ತಿತ್ತು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚನೆ ಬಂದಿತ್ತು. ಅದರೆ, ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕುಕುನೂರು, ಯಲಬುರ್ಗಾ, ಕಾರಟಗಿಯಲ್ಲಿ ಕಟ್ಟಡ ತಲೆಯೆತ್ತಿವೆಯೇ ಹೊರತು ಸಾರ್ವಜನಿಕವಾಗಿ ಮುಚ್ಚಿವೆ.
ಇದೀಗ ಸರ್ಕಾರ ತನ್ನ 2 ವರ್ಷದ ಅವಧಿ ಪೂರ್ಣಗೊಳಿಸಿ 3ನೇ ವರ್ಷಕ್ಕೆ ಹೆಜ್ಜೆ ಇಟ್ಟಿದೆ. ಆ ಪ್ರಯುಕ್ತ 2 ವರ್ಷದ ಸಾಧನೆಯನ್ನು ಪ್ರಶಂಸಿಕೊಂಡು ಬೃಹತ್ ಪ್ರಮಾಣದಲ್ಲಿ ‘ಸಮರ್ಪಣಾ ಸಂಕಲ್ಪ’ ಎಂಬ ಕಾರ್ಯಕ್ರಮ ಕೂಡ ಆಯೋಜಿಸಿತ್ತು. ಆದರೆ, ಜಿಲ್ಲೆಯಲ್ಲಿ ಸರ್ಕಾರದ ಯೋಜನೆಯಡಿ ಆಗಬೇಕಿದ್ದ ಕೆಲ ಕಾಮಗಾರಿಗಳು ಸಮರ್ಪಕವಾಗಿ ಆಗಿಲ್ಲ. ಕೆಲವು ಕಡೆ ಉದ್ಘಾಟನೆಗೊಂಡರೂ ಸಾರ್ವಜನಿಕ ಸೇವೆಗೆ ತೆರೆದುಕೊಳ್ಳುತ್ತಿಲ್ಲ.
ಇಲ್ಲಿಯ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ, ವಿಳಂಬ ನೀತಿಯಿಂದ ಇಂದಿರಾ ಕ್ಯಾಂಟೀನ್ ಮತ್ತೆ ಕುಡುಕರ ಅಡ್ಡೆಯಾಗಿ ಮಾರ್ಪಡುತ್ತಿದೆ. ಕ್ಯಾಂಟೀನ್ ಸುತ್ತಮುತ್ತ ಎತ್ತ ಕಣ್ಣು ಹಾಯಿಸಿದರೂ ಸಾರಾಯಿ ಬಾಟಲಿಗಳೇ ಕಾಣಸಿಗುತ್ತಿವೆ. ಕ್ಯಾಂಟೀನ್ಗೆ ನಾಯಿಗಳ ವಾಸಸ್ಥಾನವಾಗಿ ಬದಲಾಗಿಬಿಟ್ಟಿದೆ. ಕಟ್ಟಡದ ಕಿಟಕಿ ಗ್ಲಾಸ್ಗಳು ಅಲ್ಲಲ್ಲಿ ಒಡೆದಿರುವುದನ್ನೂ ಕಾಣಬಹುದು. ಕ್ಯಾಂಟೀನ್ ಹೆಸರಿನಲ್ಲಿ ಅನುದಾನವನ್ನೆಲ್ಲಾ ಹೀಗೆ ದುಂದುವೆಚ್ಚ ಮಾಡುವ ಬದಲು ಬೇರೆ ಕಾಮಗಾರಿಗಳಿಗಾದರೂ ಬಳಸಿಕೊಳ್ಳಬಹುದಿತ್ತಲ್ಲವೇ ಎನ್ನುವುದು ಅಲ್ಲಿನ ಪ್ರಜ್ಞಾವಂತ ನಾಗರಿಕರ ಪ್ರಶ್ನೆ.
ಈ ಕುರಿತು ಈದಿನ.ಕಾಮ್ನೊಂದಿಗೆ ಮಾತನಾಡಿದ ಕನಕಗಿರಿಯ ನಿವಾಸಿ ಪಾಮಣ್ಣ “ಸರ್ರ, ಕನಕಗಿರಿ ಬಸ್ಟಾಂಡ್ನ್ಯಾಗ ‘ಇಂದಿರಾ ಕ್ಯಾಂಟೀನ್’ ಕಟಡ ಕಟ್ಟಿ ಈಗೊಂದು ಆರು ತಿಂಗಳು ಆಗಿರಬೋದ್ರಿ. ಇಷ್ಟ ದಿವ್ಸಾದ್ರೂ ಅದು ಇನ್ನು ಉದ್ಘಾಟನಿ ಆಗಿಲ್ರಿ, ಜನ್ರಿಗಿನೂ ಅನುಕೂಲ ಆಗಿಲ್ರಿ. ಅಲ್ಲಿ ಉಡಾಳ್ರ ಹೋಗಿ ಕುಡಿತಾರ, ರಾತ್ರಿ ಬ್ಯಾರಿಬ್ಯಾರಿ ಚಟವಟಿಕೆ ನಡಿತವರೀ. ಇದ್ನ ಕಟ್ಸಿದ ಮ್ಯಾಗ್ ಜನ್ರಿಗೆ ಉಪಯೋಗ ಮಾಡಬೇಕ್ರಿ, ಇಲ್ಲಂದ್ರ ಇದ್ರದ ರೊಕ್ಕನ ಈ ಪಟ್ಟಣದಾಗ ಗಟಾರಿಲ್ರಿ ಅದ್ಕರ ಬಳಸ್ಬೇಕ್ರಿ. ಇದು ಯದ್ಕ ಉಪಯೋಗ ಐತ್ರಿ ಕುರುಡು ಸರ್ಕಾರ-ಹುಚ್ಚ ಸರ್ಕಾರಿದು. ಇಂತವನ್ನ ಕಟ್ಸತಾರ ಹಾಳಗೆಡುವುತಾರಿ” ಎಂದು ಬೇಸರ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲಾ ಎಎಪಿ ಮಾಧ್ಯಮ ಸಂಯೋಜಕ ಶರಣು ಶೆಟ್ಟರ ಮಾತನಾಡಿ, “ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆ ತಂದಿದ್ದು ಸರಿಯಿದೆ. ಹಸಿದು ಬಡವರಿಗೆ ಕಡಿಮೆ ಬೆಲೆಯಲ್ಲಿ ಊಟ ಸಿಗ್ತಾ ಇದೆ. ಶಾಲೆ ಹಾಗೂ ಕಾಲೇಜ್ ವಿದ್ಯಾರ್ಥಿಗಳಿಗೆ, ಕಟ್ಟಡ-ಕೂಲಿ ಕಾರ್ಮಿಕರಿಗೆ ಇದು ಬಹಳ ಉಪಯೋಗ ಆಗಿದೆ. ಆದರೆ, ಇಂತಹ ಯೋಜನೆ ತಂದು ಜನರಿಗೆ ಸರಿಯಾದ ರೀತಿಯಲ್ಲಿ ತಲುಪಿಸಲು ಕ್ರಮವಹಿಸುತ್ತಿಲ್ಲ. ನಿರ್ಲಕ್ಷ್ಯ ವಹಿಸುತ್ತಿರುವುದು ಅಧಿಕಾರಿಗಳೋ, ಜನಪ್ರತಿನಿಧಿಗಳೋ ತಿಳಿಯುತ್ತಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್ ಕಟ್ಟಡದ ಉದ್ಘಾಟನೆಗೆ ಕ್ರಮವಹಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕೊಪ್ಪಳ | ಮನರೇಗಾ ಕಾಮಗಾರಿ ಸ್ಥಳದಲ್ಲಿ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ
ಈಗಾಗಲೇ ರಾಜ್ಯದ ಹಲವು ನಗರಗಳಲ್ಲಿ ‘ಇಂದಿರಾ ಕ್ಯಾಂಟೀನ್’ ಯೋಜನೆ ಬಡಜನರ ಹಸಿವನ್ನು ನೀಗಿಸುವ ಮಹತ್ವಪೂರ್ಣ ಯೋಜನೆಯಾಗಿ ಪರಿಣಮಿಸಿದೆ. ಇದು ಬಡ ಕೂಲಿ-ಕಾರ್ಮಿಕರ ಬದುಕಿಗೆ ಆಸರೆಯೂ ಆಗಿದೆ. ಇಂತಹ ಯೋಜನೆಯ ವಿಳಂಬವೇ ಕನಕಗಿರಿಯ ನೂರಾರು ಬಡವರಲ್ಲಿ ನಿರಾಸೆ ಮೂಡಿಸಿದೆ. ಇನ್ನಾದರೂ ಶಾಸಕರು, ಸಂಸದರು ಹಾಗೂ ಸಂಬಂಧಿತ ಅಧಿಕಾರಿಗಳು ಎಚ್ಚೆತ್ತು, ಜನರ ಆಕಾಂಕ್ಷೆ ಅರಿತು, ‘ಇಂದಿರಾ ಕ್ಯಾಂಟೀನ್’ ಶೀಘ್ರದಲ್ಲಿ ಕಾರ್ಯಾರಂಭವಾಗುವಂತೆ ಕ್ರಮ ಕೈಗೊಳ್ಳಬಹುದೇ ಎಂಬ ಆಶಾಭಾವನೆ ಮಾತ್ರ ಸ್ಥಳೀಯರ ಮನದಲ್ಲಿದೆ.


ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್