“ಯುವಕರು ಸಂಘಟಿತ ಹೋರಾಟದಿಂದ ಮಾತ್ರ ಸಂವಿಧಾನಬದ್ದ ಹಕ್ಕುಗಳನ್ನು ಪಡೆಯಲು ಸಾಧ್ಯ” ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಕರೆ ನೀಡಿದರು. ದಾವಣಗೆರೆ ನಗರದ ಪಂಪಾಪತಿ ಭವನದಲ್ಲಿ ಆಲ್ ಇಂಡಿಯಾ ಯೂತ್ ಫೆಡರೇಷನ್ (ಎಐವೈಎಫ್) ಜಿಲ್ಲಾ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, “ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಕನಿಷ್ಠ 5 ಶಾಖೆಗಳನ್ನು ಸ್ಥಾಪಿಸುವ ಮೂಲಕ ಎಐವೈಎಫ್ ಸಂಘಟನೆ ಸಿದ್ದಾಂತ, ಧ್ಯೇಯೋದ್ದೇಶಗಳನ್ನು ಸಂಘಟನೆ ಮುಖಂಡರು ಯುವಕರಿಗೆ ತಿಳಿಸುವ ಮೂಲಕ ಯುವಕರನ್ನು ಜಾಗೃತಗೊಳಿಸಬೇಕಿದೆ” ಎಂದು ಸಲಹೆ ನೀಡಿದರು.

“ವಿದ್ಯಾರ್ಥಿಯುವ ಸಮೂಹ ಮೊಬೈಲ್ ಗೀಳು, ಕ್ರಿಕೆಟ್ ಬೆಟ್ಟಿಂಗ್, ಮಾದಕ ವಸ್ತುಗಳ ಸೇವನೆಗಳಿಗೆ ಮಾರುಹೋಗದೆ, ಸಮಾಜಮುಖಿಯಾಗಿ ಸಂಘಟನಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ವಿದ್ಯಾಭ್ಯಾಸ, ದುಡಿಮೆಯ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಇತ್ತೀಚೆಗೆ ಯುವಕರು ದುಶ್ಚಟಗಳ ದಾಸರಾಗಿ ವೈಯಕ್ತಿಕ, ಕೌಟುಂಬಿಕ ಜವಾಬ್ದಾರಿಯಿಂದ ವಿಮುಖವಾಗಿದ್ದು, ಸಮಾಜದಲ್ಲಿ ಕೆಲವರ ಕೈಗೊಂಬೆಯಂತೆ ವರ್ತಿಸುತ್ತಿರುವುದು ಬೇಸರದ ಸಂಗತಿ” ವಿಷಾದ ವ್ಯಕ್ತಪಡಿಸಿದರು.

ಎಐವೈಎಫ್- ಅಖಿಲ ಭಾರತ ಯುವಜನ ಫೆಡರೇಷನ್ ರಾಷ್ಟ್ರೀಯ ಮಂಡಳಿ ಸದಸ್ಯ ಎಚ್.ಎಂ. ಸಂತೋಷ್ ಕುಮಾರ್ ಮಾತನಾಡಿ, “ದೇಶದಲ್ಲಿ ಬಿಜೆಪಿ ಆಡಳಿತ ಸರಕಾರ ಯುವಕರಿಗೆ ನೀಡಿದ್ದ 2 ಕೋಟಿ ಉದ್ಯೋಗ ಸೃಷ್ಠಿಯ ಭರವಸೆ ಹುಸಿಯಾಗಿದೆ. ಯುವಕರು ದೇಶದಲ್ಲಿನ ನಿರುದ್ಯೋಗ, ಉಚಿತ ಶಿಕ್ಷಣ, ಇತರೆ ಜ್ವಲಂತ ಸಮಸ್ಯೆಗಳನ್ನು ಮರೆತು ದೇವರು,ಧರ್ಮದ ಹೆಸರಿನಲ್ಲಿ ಕೋಮುವಾದದ ಕೂಪದಲ್ಲಿ ಮುಳುಗಿರುವುದು ಆತಂಕಕಾರಿ ಬೆಳವಣಿಗೆ” ಎಂದು ಬೇಸರ ವ್ಯಕ್ತಪಡಿಸಿದರು.

“ಎಐವೈಎಫ್ ಸಂಘಟನೆ ರಾಷ್ಟ್ರೀಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಂತೆ ವಿಶ್ವಪರಿಸರ ದಿನಾಚರಣೆ, ಮಾದಕವಸ್ತುಗಳ ನಿಷೇಧ ಕಾರ್ಯಕ್ರಮ, ಸ್ಥಳೀಯವಾಗಿ ಉದ್ಯೋಗಕ್ಕಾಗಿ ಕೈಗಾರಿಕೆ ಸ್ಥಾಪನೆಗಾಗಿ ಹೋರಾಟ, ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಚಟುವಟಿಕೆಗಳ ಆಯೋಜನೆಯೊಂದಿಗೆ ಸಂಘಟನೆಯನ್ನು ಬಲವರ್ಧನೆಗೊಳಿಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನರೇಗಾ ಉದ್ಯೋಗಖಾತ್ರಿ ಕೆಲಸದ ವೇಳೆ ಗ್ರಾಕೂಸ್ ಕೂಲಿ ಕಾರ್ಮಿಕ ಸಾವು.
ಪೂರ್ವಭಾವಿ ಸಭೆಯಲ್ಲಿ ಅಕ್ಷರದಾಸೋಹ ಬಿಸಿಯೂಟ ತಯಾರಕರ ಸಂಘಟನೆಯ ರಮೇಶ್ ದಾಸರ್, ಸರೋಜಮ್ಮ, ಪಂಪಾಪತಿ ಟ್ರಸ್ಟ್ ನ ಯಲ್ಲಪ್ಪ, ಎಐವೈಎಫ್ ಜಿಲ್ಲಾಧ್ಯಕ್ಷ ರಾಜು ಕೆರನಹಳ್ಳಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ತಿಪ್ಪೇಸ್ವಾಮಿ, ಜಗಳೂರು ತಾಲೂಕು ಅಧ್ಯಕ್ಷ ಮಾದಿಹಳ್ಳಿ ಮಂಜುನಾಥ್, ಮುಖಂಡರಾದ ಗದುಗೇಶ್, ಪರುಶರಾಮ್, ಶೇಖರನಾಯ್ಕ ಸೇರಿದಂತೆ ಮತ್ತಿತರರು ಹಾಜರಿದ್ದರು