ಶ್ರಮಿಕ ಸಮುದಾಯಗಳ ದುಡಿಮೆಗೆ ಸಲ್ಲಿಸುವ ಗೌರವವಾಗಿದೆ. ಇದು ಮಿನಿ ದಸರೆಯ ತರವೇ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು
ತುಮಕೂರಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಸ್ಲಂ ಸಮಿತಿಯಿಂದ ಆಯೋಜಿಸಿದ ಸ್ಲಂ ಹಬ್ಬ, ಸಮಾವೇಶ ಮತ್ತು ಪ್ರತಿಭಾಪುಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಡಳಿತದ ಪರವಾಗಿ ತುಮಕೂರು ಸ್ಲಂ ಸಮಿತಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ತಳಸಮುದಾಯಗಳ ಕಲಾಪ್ರಕಾರಗಳು ವೇದಿಕೆಯಲ್ಲಿ ಅನಾವರಣವಾಗುತ್ತಿರುವುದು ಸಂತಸದ ಸಂಗತಿಯಾಗಿದ್ದು, ಇದು ನನಗೆ ಹೆಮ್ಮೆಯನ್ನು ತಂದಿದೆ. ಹೆಚ್ಚಾಗಿ ನಮ್ಮ ಮಕ್ಕಳು ಶಿಕ್ಷಣದಲ್ಲಿ ಉನ್ನತ ಮಟ್ಟದ ಸಾಧನೆಗಳನ್ನು ಮಾಡಿ ಪುರಸ್ಕಾರಕ್ಕೆ ಒಳಗಾಗಿರುವುದು ಹೆಮ್ಮೆಪಡುವಂತದ್ದು. ಯಾವುದೇ ಸೌಲಭ್ಯಗಳಿಲ್ಲದೆ ಕನಿಷ್ಟ ವಾತವರಣದಲ್ಲಿ ಈ ಸಾಧನೆ ಮಾಡಿರುವ ನಿಮಗೆ ಮತ್ತು ಪೋಷಕರಿಗೆ ಅಭಿನಂದನೆಗಳು ಎಂದರು.

ನಮ್ಮ ಜಿಲ್ಲೆಯಲ್ಲಿ ನಿರುದ್ಯೋಗಕ್ಕಿಂತ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ದೊರಯದಿರುವುದು ಸಮಸ್ಯೆಯಾಗಿದೆ. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಸದಾ ನಮ್ಮನ್ನು ಎಚ್ಚರಿಸುತ್ತ ಅವಕಾಶ ಇದ್ದಾಗ ಶೋಷಿತ ಸಮುದಾಯಗಳ ಪರವಾಗಿ ಕೆಲಸ ಮಾಡಿ ಎಂಬ ಸ್ಪೂರ್ತಿಯಿಂದ ಇಂದು ಸ್ಲಂ ಜನರ ವಿಷಯವಾಗಲಿ, ರೈತರ ವಿಷಯವಾಗಲಿ ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದು ಇಡೀ ರಾಜ್ಯಕ್ಕೆ ಮಾದರಿಯಾಗಿ ಕಂದಾಯ ಗ್ರಾಮಗಳ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕುಪತ್ರವನ್ನು ದೊರೆಯುವಂತೆ ಮಾಡಲಾಗಿದೆ ಎಂದು ವಿವರಿಸಿದರು.
ಸ್ಲಂ ನಿವಾಸಿಗಳಿಗೆ ನಗರ ಶಾಸಕರ ಸಹಕಾರದೊಂದಿಗೆ ಹೊನ್ನೆಹಳ್ಳಿಯಲ್ಲಿ 200 ವಸತಿ ಸಮುಚ್ಛಯಗಳನ್ನು ನಿರ್ಮಿಸುತ್ತಿದ್ದು, ವಿಶೇಷ ವರ್ಗದ ಮಹಿಳೆಯರಿಗೆ ಆಯ್ಕೆ ಮಾಡಲು ಕ್ರಮವಹಿಸಲಾಗಿದೆ. ಇದೇ ರೀತಿ ಮರಳೇನಹಳ್ಳಿ ಮತ್ತು ಸತ್ಯಮಂಗಳದಲ್ಲಿ 4 ಎಕರೆ ಭೂಮಿಯನ್ನು ನಿವೇಶನ ರಹಿತರಿಗೆ ಮೀಸಲಿಡಲಾಗಿದೆ. ಕಳೆದ 1 ವರ್ಷದಿಂದ ತುಮಕೂರು ಜಿಲ್ಲಾಡಳಿತದಿಂದ ಹಲವು ವಸತಿ ಕಾಮಗಾರಿಗಳನ್ನು ಕೈಗೊಂಡಿದ್ದು ತ್ವರಿತವಾಗಿ ಫಲಾನುಭವಿಗಳ ಕೈಸೇರಲಿವೆ. ಈಗಾಗಲೇ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಒತ್ತಾಸೆಯಂತೆ ದೇವರಾಜು ಅರಸು ಬಡಾವಣೆ ನಿವಾಸಿಗಳಿಗೆ ಜಿಲ್ಲಾಡಳಿತದಿಂದ 600 ಮನೆ ಹಂಚುಕಾತಿ ಪತ್ರಗಳನ್ನು ಮಾನ್ಯ ಉಸ್ತುವಾರಿ ಸಚಿವರ ಮೂಲಕ ಹಂಚಿಕೆ ಮಾಡಲಾಗಿದೆ. ಮಂಡಳಿಯಿಂದ 182 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದು, ಶಿರಾದಲ್ಲಿ 1008 ಮನೆಗಳನ್ನು ಹಂಚಿಕೆ ಮಾಡುವ ಹಂತದಲ್ಲಿದೆ. ಚಿಕ್ಕನಾಯಕನಹಳ್ಳಿಯಲ್ಲಿ 800 ಮತ್ತು ತುಮಕೂರಿನಲ್ಲಿ 850 ಮನೆಗಳು ಪ್ರಧಾನಮಂತ್ರಿ ಯೋಜನೆಯಲ್ಲಿ ನಿರ್ಮಾಣವಾಗುತ್ತಿದೆ. ಜಿಲ್ಲಾಡಳಿತದಿಂದ ಇದುವರೆಗೂ 5 ಸಾವಿರ ಆಟೋ ಚಾಲಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿದ್ದು, ಮುಂದಿನ ದಿನಗಳಲ್ಲಿ ಸ್ಲಂ ಸಮಿತಿಯ ಜೊತೆ ಕೊಳಗೇರಿಯಲ್ಲಿರುವ ಮನೆಗೆಲಸ ಕಾರ್ಮಿಕರು ಮತ್ತು ಇತರೆ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಕಾರ್ಯಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ನಮ್ಮಲ್ಲಿ ಕೀಳಿರಿಮೆ ಬಿಟ್ಟು ಗಾಂಧಿ ಅವರ ಮಾತಿನಂತೆ “ಕೆಲಸ ಆಗಬೇಕೆಂಬ ಧೃಡವಾದ ಆತ್ಮವಿಶ್ವ ನಮ್ಮಲ್ಲಿದ್ದರೆ ಮೊದಲು ಸಾಧ್ಯವಾಗದಿದ್ದರು ಮುಂದೆ ಎಲ್ಲವು ಕೈಗೂಡುತ್ತದೆ”. ಹಾಗೆಯೇ ನಾವು ಸಾಧಿಸುವ ಛಲ ಮತ್ತು ಧೃಡವಾದ ಆತ್ಮವಿಶ್ವಾವಿದ್ದರೆ ನಮ್ಮ ಸಾಧನೆ ಪಲಿಸುತ್ತದೆ, ನಮ್ಮ ಮಕ್ಕಳ ಮುಂದಿನ ಭವಿಷ್ಯ ಹಸನಾಗಿರಲಿ ಎಂದು ಆಶಿಸುತ್ತೇನೆಂದರು.
ಪ್ರಾಸ್ತಾವಿಕವಾಗಿ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಮಾತನಾಡಿದರು.
ಅಧ್ಯಕ್ಷತೆಯನ್ನು ಹಿರಿಯ ಚಿಂತಕರಾದ ಕೆ.ದೊರೆರಾಜ್ ವಹಿಸಿದ್ದರು. ಸಾಹಿತಿಗಳಾದ ಡಾ.ದು.ಸರಸ್ವತಿ ಆಶಯ ನುಡಿಗಳನ್ನಾಡಿದರು, ಬೆಂಗಳೂರು ವಿಶ್ವವಿದ್ಯಾಲಯದ ಡಾ. ಡಾಮಿನಿಕ್ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು.
ಮಾಜಿ ನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ದಾವಣಗೆರೆ ಜಿಲ್ಲಾ ಸಮಿತಿಯ ಎಸ್.ಎಲ್ ಆನಂದಪ್ಪ, ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯ ಚಂದ್ರಮ್ಮ, ತುಮಕೂರು ಸ್ಲಂ ಸಮಿತಿಯ ದೀಪಿಕಾ, ಚಿತ್ರದುರ್ಗ ಜಿಲ್ಲಾ ಸಮಿತಿಯ ರಾಜಣ್ಣ ಅಥಿತಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ತಿರುಮಲಯ್ಯ, ಸ್ವಾಗತವನ್ನು ಅರುಣ್, ವಂದನಾರ್ಪಣೆಯನ್ನು ಅನುಪಮ ನೇರವೇರಿಸಿದ್ದರು.