ನಮ್ಮದ್ದು ನಿರಂತರತೆಯ ಬುದ್ಧನ ತತ್ವ ಮಾರ್ಗದ ಶ್ರಮ ಸಂಸ್ಕೃತಿ, ಇಲ್ಲಿ ಕೀಳು ಮೇಲು ಎಂಬ ಪರಿಕಲ್ಪನೆ ಇಲ್ಲ ಎಂದು ಲೇಖಕಿ ಡಾ. ದು.ಸರಸ್ವತಿ ಅಭಿಪ್ರಾಯಪಟ್ಟರು
ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಸ್ಲಂ ಸಮಿತಿಯಿಂದ ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಸ್ಲಂ ಜನರ ಸಾಂಸ್ಕೃತಿಕ ಕಲಾ ಜಾಥಾದಲ್ಲಿ ಮಾತನಾಡಿದ ಅವರು, ಶ್ರಮ ಸಂಸ್ಕೃತಿಯ ಹಬ್ಬದಲ್ಲಿ ಭಾಗಿಯಾದದ್ದು ನಿಜವಾದ ಶ್ರಮದ ಆಚರಣೆಯಲ್ಲಿ ನನಗೆ ಸಿಕ್ಕ ಗೌರವವಾಗಿದೆ. ಗೊರವಯ್ಯನ ಕುಣಿತ ದುರ್ವೇಶ್ಗಳ ಹಾಡುಗಳು ಮತ್ತು ಹಕ್ಕಿಪಿಕ್ಕಗಳ ನೃತ್ಯ, ತಮಟೆ, ಸೋಮನ ಕುಣಿತ ನಿಜವಾದ ಶ್ರಮ ಸಂಸ್ಕೃತಿಯ ಪ್ರತಿರೋಧದ ನೆಲೆಗಳಾಗಿವೆ. ಸ್ಲಂ ನಿವಾಸಿಗಳು ಕೀಳಲ್ಲ ಅವರು ಈ ನಗರೀಕರಣದ ತಾರತಮ್ಯದ ಧೋರಣೆಗಳನ್ನು ಹೊತ್ತು ನಗರಗಳನ್ನು ಕಟ್ಟುತ್ತಿರುವವರು ಆದ್ದರಿಂದ ನಾನೂ ಅವರನ್ನು ಈ ನಗರಗಳ ಉಸಿರು ಎಂದು ಕರೆಯಲಿಚ್ಛಿಸುತ್ತೇನೆ ಎಂದರು
ಭಾರತೀಯ ಶಾಸ್ತ್ರೀಯ ಕಲಾಪ್ರಕಾರಗಳಿಗೆ ಸಿಗುವ ಮಾನ್ಯತೆ ನಮ್ಮ ನೆಲ ಮೂಲದ ಕಲಾಪ್ರಕಾರಗಳಿಗೂ ಸಿಗಬೇಕು. ನಮ್ಮ ದುಡಿಮೆಯ ಆಚರಣೆ ನೀರಿನ ಸಂಸ್ಕೃತಿ ಮತ್ತು ಪ್ರಕೃತಿಯೊಟ್ಟಿಗೆ ಸಂಬಂಧ ಹೊಂದಿರುವ ಆಚರಣೆಯಾಗಿದೆ. ಶ್ರಮಿಕ ಸಂಸ್ಕೃತಿಯು ದೇವರನ್ನು ಮನಷ್ಯರೆಂದು ಭಾವಿಸುತ್ತದೆ ಮತ್ತು ಚಲನಶೀಲತೆಯ ಸಂಕೇತವಾಗಿದ್ದು ಬದುಕುವ ಮತ್ತು ಬದುಕಿಸುವ ಮನುಷ್ಯ ಸಂಸ್ಕೃತಿಯಾಗಿದೆ ಎಂದು ಆಶಿಸುತ್ತ ತಮ್ಮ ಕಲಾ ಪ್ರಕಾರಗಳನ್ನು ಗೌರವಿಸಬೇಕು ಸರ್ಕಾರ 25 ವರ್ಷಗಳ ನಂತರ ಪೌರಕಾರ್ಮಿಕರನ್ನು ಖಾಯಂ ಮಾಡಿದೆ ಇದು ಹೋರಾಟದ ಫಲ ಮುಂದೆ ಸ್ಲಂ ನಿವಾಸಿಗಳಿಗೆ ಲ್ಯಾಂಡ್ ಬ್ಯಾಂಕ್ ಯೋಜನೆ ಮತ್ತು ವಸತಿ ಹಕ್ಕು ಕಾಯಿದೆಯನ್ನು ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ಸಂಸ್ಕೃತಿ ಚಿಂತಕ ಡಾ.ಡಾಮಿನಿಕ್ ಮಾತನಾಡಿ ವಂಚಿತ ಸಮುದಾಯಗಳ ಆಚರಣೆ ಅಥವಾ ಕಲಾಚರವೇ ನಿಜವಾದ ಆಚರಣೆಗಳು, ಈ ದೇಶದ ಸಂಪತ್ತನ್ನು ಉದ್ಪಾದನೆ ಮಾಡುವ ಮಾನವ ಸಂಪನ್ಮೂಲವೆಂದರೆ ಅದು ಸ್ಲಂ ಜನರೇ. ಆದ್ದರಿಂದ ನಾವು ಆಳುವ ಜನರಾಗಿ ಬದಲಾಗಬೇಕಿದೆ. ನಮ್ಮ ಬದುಕಿನ ಮೇಲಿನ ಬದ್ಧತೆಯನ್ನು ಹೆಚ್ಚು ಮಾಡಿಕೊಳ್ಳಲು ಇಂತಹ ತಳ ಸಮುದಾಯಗಳ ಕಲಾಚಾರಗಳು ಶಕ್ತಿ ತುಂಬುತ್ತವೆ ಕಳೆದ 15 ವರ್ಷಗಳಲ್ಲಿ ಕರ್ನಾಟಕದ ಸ್ಲಂ ಜನರಿಗೆ ಒಂದು ಗುರುತನ್ನು ಈ ಸ್ಲಂ ಹಬ್ಬ ತಂದುಕೊಟ್ಟಿದೆ. ನಗರಗಳಲ್ಲಿ ಅಭಿವೃದ್ಧಿಯ ನಿರಂತರ ಶೋಷಣೆಗೆ ಪ್ರತಿರೋಧಿಸಲು ತಳ ಸಮುದಾಯಗಳ ಕಲಾಚಾರಗಳು ಅಸ್ತ್ರಗಳಾಗಿರುವುದರಿಂದ ನಾವು ನಗರಗಳ ಮೇಲೆ ಹಕ್ಕುಪತ್ರಿಪಾಧಿಸಲು ಸಾಧ್ಯವಾಗುತ್ತಿದೆ. ಕರ್ನಾಟಕದಲ್ಲಿ ಜಾತಿಯ ನೆಲೆಗಟ್ಟಿನಲ್ಲಿ ಸ್ಲಂ ಸಂಘಟನೆ ಕಟ್ಟಿರುವ ಸಾಂಸ್ಕೃತಿಕ ಪ್ರಜ್ಞೆಯಿಂದ ಹಲವಾರು ಪಲ್ಲಟಗಳಾಗಿದ್ದು ಇದು ಸರ್ಕಾರ ಮತ್ತು ವ್ಯವಸ್ಥೆಯ ಮೇಲೆ ಪ್ರಭಾವ ಭೀರಿದೆ ಎಂದರು.
ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಮಾತನಾಡಿ ಸ್ಲಂ ಜನರಿಗೆ ನೀಡಿರುವ ಚುನಾವಣೆ ಪ್ರಣಾಳಿಕೆಯ ಭರವಸೆಗಳನ್ನು ಹಾಗೂ ಭೂಮಿ, ವಸತಿಗೆ ಸಂಬಂಧಿಸಿದ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು. ನಗರದಲ್ಲಿರುವ ಸ್ಲಂ ಜನರು ಕನಿಷ್ಟ ಸೌಲಭ್ಯದಲ್ಲಿ ಬದುಕುತ್ತಿದ್ದು ಸಂವಿಧಾನದ ಸಾಮಾಜಿಕ ನ್ಯಾಯವನ್ನು ಈ ಜನರಿಗೆ ತಲುಪಿಸಲು ಈಗಿನ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಲ್ಯಾಂಡ್ ಬ್ಯಾಂಕ್, ವಸತಿ ಹಕ್ಕು ಕಾಯಿದೆ ಮತ್ತು ನಗರ ಉದ್ಯೋಗ ಖಾತ್ರಿ ಜಾರಿಗೆ ಈಗಾಗಲೇ ವಿಧಾನ ಸಭೆಯಲ್ಲಿ ಸಂಘಟನೆ ನೀಡಿದ ಮಾಹಿತಿ ಆಧಾರಿಸಿ ಪ್ರಶ್ನೆ ಕೇಳಲಾಗಿದೆ. ತುಮಕೂರಿನ ವಸತಿ ರಹಿತರಿಗೆ ಮತ್ತು ಕೋಡಿಹಳ್ಳ, ಇಸ್ಮಾಯಿಲ್ ನಗರ ಹಂದಿ ಜ್ಯೋಗಿಗಳಿಗೆ ಶೀಘ್ರದಲ್ಲೇ ವಸತಿ ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗುವುದು. ನಗರ ಪ್ರದೇಶದಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಲು ಭೂಮಿ ಸಿಗುತ್ತಿಲ್ಲ, ಹಾಗಾಗಿ ಸಮಸ್ಯೆ ಜ್ವಲಂತವಾಗಿವೆ, ನಮ್ಮ ಅನುದಾನದಲ್ಲಿ ಕೊಳಗೇರಿಗಳ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಮಾತನಾಡಿದರು. ಅಧ್ಯಕ್ಷತೆಯನ್ನು ಹಿರಿಯ ಚಿಂತಕರಾದ ಕೆ.ದೊರೆರಾಜ್ ವಹಿಸಿದ್ದರು. ಮಾಜಿ ನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ದಾವಣಗೆರೆ ಜಿಲ್ಲಾ ಸಮಿತಿಯ ಎಸ್.ಎಲ್ ಆನಂದಪ್ಪ, ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯ ಚಂದ್ರಮ್ಮ, ತುಮಕೂರು ಸ್ಲಂ ಸಮಿತಿಯ ದೀಪಿಕಾ, ಚಿತ್ರದುರ್ಗ ಜಿಲ್ಲಾ ಸಮಿತಿಯ ರಾಜಣ್ಣ ಅಥಿತಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ತಿರುಮಲಯ್ಯ, ಸ್ವಾಗತವನ್ನು ಅರುಣ್, ವಂದನಾರ್ಪಣೆಯನ್ನು ಅನುಪಮ ನೇರವೇರಿಸಿದ್ದರು.