- ಜು.9ರಿಂದ ದೆಹಲಿಯ ಕಡೆಗೆ ಬರುವ ನಾಲೆಯನ್ನು ಮಾತ್ರ ತೆರೆದಿಡಲಾಗಿದೆ
- ರಾಜಕೀಯ ದ್ವೇಷದಿಂದ ದೆಹಲಿಯಲ್ಲಿ ಸೃಷ್ಟಿಸಿದ ಪ್ರವಾಹ : ಸಂಜಯ್ ಸಿಂಗ್
ರಾಜಕೀಯ ದುರುದ್ದೇಶದಪೂರ್ವಕವಾಗಿ ಹರಿಯಾಣದಿಂದ ದೆಹಲಿಗೆ ಬಿಜೆಪಿಯವರು ನೀರು ಬಿಡುತ್ತಿದ್ದಾರೆ. ಇದುವೇ ಪ್ರವಾಹಕ್ಕೆ ಕಾರಣ ಎಂದು ಆಮ್ ಆದ್ಮಿ ಪಾರ್ಟಿ ಗಂಭೀರ ಆರೋಪ ಮಾಡಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆಪ್ ಸಂಸದ ಸಂಜಯ್ ಸಿಂಗ್, ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಮಳೆಯೇ ಸುರಿಯುತ್ತಿಲ್ಲ. ಆದರೂ ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಮತ್ತು ಬಿಜೆಪಿ. ದೆಹಲಿಯ ಬಗ್ಗೆ ಇರುವ ದ್ವೇಷವನ್ನು ಈ ಮೂಲಕ ಸಾಧಿಸಲಾಗುತ್ತಿದೆ. ಯಾಕೆಂದರೆ ಹರಿಯಾಣದ ಹತ್ನಿಕುಂಡ್ ಬ್ಯಾರೇಜ್ನಲ್ಲಿ ಮೂರು ಗೇಟ್ಗಳಿದ್ದರೂ ಹರಿಯಾಣ ಮತ್ತು ಉತ್ತರ ಪ್ರದೇಶದ ಗೇಟ್ಗಳನ್ನು ಬಂದ್ ಮಾಡಿ, ದೆಹಲಿಗೆ ಕಡೆಗೆ ಬರುವ ಯಮುನಾ ನದಿಗೆ ಮಾತ್ರ ನೀರನ್ನು ಬಿಡಲಾಗುತ್ತಿದೆ ಎಂದು ವಿಡಿಯೋ ದಾಖಲೆ ಸಹಿತ ಆರೋಪ ಮಾಡಿದರು.
ಹರಿಯಾಣದ ಹತ್ನಿಕುಂಡ್ ಬ್ಯಾರೇಜ್ನ ಮೂಲಕ ಕಳೆದ ಜುಲೈ 9ರಿಂದ 13ರವರೆಗೆ ನಿರಂತರವಾಗಿ ದೆಹಲಿಯ ಕಡೆಗೆ ಬರುವ ನಾಲೆಯನ್ನು ಮಾತ್ರ ತೆರೆದಿಟ್ಟು, ನೀರು ಬಿಡಲಾಗುತ್ತಿದೆ. ಇದರಿಂದಾಗಿ ಇತಿಹಾಸದಲ್ಲೇ ಕಂಡರಿಯದ ಪ್ರವಾಹ ಪರಿಸ್ಥಿತಿ ದೆಹಲಿಗೆ ಬಂದೊದಗಿದೆ. ಆದ್ದರಿಂದ ಇದು ಪ್ರಕೃತಿ ನಿರ್ಮಿತ ಪ್ರವಾಹ ಅಲ್ಲ, ಬಿಜೆಪಿಯವರು ದುರುದ್ದೇಶಪೂರ್ವಕವಾಗಿ ದೆಹಲಿಯಲ್ಲಿ ಸೃಷ್ಟಿಸಿದ ಪ್ರವಾಹ ಎಂದು ಹರಿಯಾಣದ ಹತ್ನಿಕುಂಡ್ ಬ್ಯಾರೇಜ್ನಲ್ಲಿ ಬಿಡುಗಡೆಗೊಳಿಸಲಾದ ನೀರಿನ ಪ್ರಮಾಣದ ದಾಖಲೆಯನ್ನು ತೋರಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದರು.
ಹರಿಯಾಣ, ಉತ್ತರಾಖಂಡ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಹಾಗೂ ದೆಹಲಿಯ ಜನರು ಸಮಸ್ಯೆಗಳ ನಡುವೆ ಪರಿತಪಿಸುತ್ತಿರುವಾಗ ಅವರ ಕಷ್ಟಸುಖ ಆಲಿಸಬೇಕಾದ ಪ್ರಧಾನಿ ಮೋದಿ, ಫ್ರಾನ್ಸ್ಗೆ ಪ್ರವಾಸ ತೆರಳಿದ್ದಾರೆ. ಒಂದು ವೇಳೆ ಉತ್ತರ ಪ್ರದೇಶ ಹಾಗೂ ಹರಿಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ದೆಹಲಿ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಸಮ ಪ್ರಮಾಣದಲ್ಲಿ ಎಲ್ಲ ಕಡೆಗೆ ನೀರು ಹರಿಯ ಬಿಡುತ್ತಿದ್ದರೆ ಇಷ್ಟೊಂದು ಭಯಾನಕ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಅರವಿಂದ್ ಕೇಜ್ರಿವಾಲ್ ಹಾಗೂ ಆಪ್ ಪಕ್ಷದ ಮೇಲೆ ಬಿಜೆಪಿಯವರಿಗೆ ಇರುವ ದ್ವೇಷವೇ ಈ ಎಲ್ಲ ಬೆಳವಣಿಗೆಗೆ ಕಾರಣ. ಜನ ಇದನ್ನೆಲ್ಲ ನೋಡುತ್ತಿದ್ದಾರೆ ಎಂಬುದು ಬಿಜೆಪಿಯವರಿಗೆ ಗೊತ್ತಿರಲಿ. ಜನ ನಿಮ್ಮನ್ನು ಕ್ಷಮಿಸಲ್ಲ ಎಂದು ಆಪ್ ಸಂಸದ ಸಂಜಯ್ ಸಿಂಗ್ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸಂಚು ರೂಪಿಸಿ ದೆಹಲಿಯನ್ನು ಹೇಗೆ ಮುಳುಗಿಸಿ ಹತ್ನಿಕುಂಡ್ ಬ್ಯಾರೇಜ್ನಿಂದ ದೆಹಲಿಯ ಕಡೆಗೆ ಎಲ್ಲ ನೀರನ್ನು ಹೇಗೆ ಬಿಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುವ ವಿಡಿಯೋವನ್ನು ಕೂಡ ಪ್ರದರ್ಶಿಸಿದರು.