“ಗುತ್ತಲ ಪಟ್ಟಣ ಪಂಚಾಯತಿಗೆ ಸಂಬಂಧ ಪಟ್ಟ ರಾಣೇಬೆನ್ನೂರ ರಸ್ತೆಯಲ್ಲಿರುವ ನೀರಿನ ಹೊಂಡದಲ್ಲಿ ಅಂತರ ಗಂಗೆ(ಪಿಸಾಚಿ ಕಳೆ) ಬಳ್ಳಿಯು ಹೊಂಡದ ಪೂರ್ಣ ಪ್ರಮಾಣದಲ್ಲಿ ಹಬ್ಬಿದೆ. ಇದರಿಂದ ನೀರಿನ ಮಟ್ಟ ಕಡಿಮೆ ಆಗುತ್ತಿದೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ತೊಂದರೆ ಆಗುತ್ತಿದೆ” ಎಂದು ಕರವೇ ಹಾವೇರಿ ತಾಲ್ಲೂಕು ಅಧ್ಯಕ್ಷ ಹಾಲೇಶ ಹಾಲಣ್ಣವರ ಒತ್ತಾಯಿಸಿದರು.
ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗುತ್ತಲ ಗ್ರಾಮ ಮುಖ್ಯಧಿಕಾರಿಗಳಿಗೆ ಗುತ್ತಲ ಪಟ್ಟಣದ ರಾಣೇಬೆನ್ನೂರ ರಸ್ತೆಯಲ್ಲಿರುವ ನೀರಿನ ಹೊಂಡವನ್ನು ಸ್ವಚ್ಛಗೊಳಿಸಲು ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿ ಅವರು ಮಾತನಾಡಿದರು.
“ಕಾಲ ಬದಲಾದಂತೆ ಬೋರ್ವೆಲ್ ಕೊರೆವ ವ್ಯವಸ್ಥೆ ಬಂದ ಮೇಲೆ, ಮನೆ ಮನೆಗೆ ನಲ್ಲಿ ಮೂಲಕ ನೀರಿನ ವ್ಯವಸ್ಥೆ ಮಾಡಿದ ಪರಿಣಾಮ ಈ ಹೊಂಡಗಳು ನಿರ್ಲಕ್ಷಕ್ಕೆ ಒಳಗಾಗುತ್ತಿವೆ. ಹೊಂಡವನ್ನು ಸಂಪೂರ್ಣವಾಗಿ ಅಂತರ ಗಂಗೆ(ಪಿಸಾಚಿ ಕಳೆ) ಬಳ್ಳಿ ಆವರಿಸಿರುವುದರಿಂದ ಹಾಗೂ ಪಟ್ಟಣದ ಒಳಚರಂಡಿಯ ನೀರು ಹಲವು ತ್ಯಾಜ್ಯ ವಸ್ತುಗಳು ಹೊಂಡದಲ್ಲಿ ಸಂಗ್ರಹವಾಗುವುದರಿಂದ ಹೊಂಡದ ಸುತ್ತಮುತ್ತ ದುರ್ವಾಸನೆ ಹಾಗೂ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿದೆ. ಈ ವಿಚಾರವಾಗಿ ಪ.ಪಂಚಾಯತಿ ಒಂಚೂರು ಗಮನ ಹರಿಸುತ್ತಿಲ್ಲ” ಅಸಮಾಧಾನ ವ್ಯಕ್ತಪಡಿಸಿದರು.
“ಇದಲ್ಲದೆ ಕೆರೆ ಸುತ್ತಲೂ ಗಿಡಗಂಟೆಗಳು ಬೆಳೆದಿವೆ ಹೊಂಡದ ದಡವು ಬಯಲು ವಿಸರ್ಜನೆ ಜಾಗವಾಗಿ ಬಳಕೆಯಾಗುತ್ತಿದೆ. ಸೊಳ್ಳೆ, ಹಾವು, ಹುಳುಗಳು ಹಾಗೂ ದುರ್ನಾತದ ಹಾವಳಿ ಹೆಚ್ಚಾಗಿದೆ. ಪಟ್ಟಣದ ಹೊಂಡವನ್ನು ಅಭಿವೃದ್ಧಿ ಮಾಡಿದರೆ ನೀರಿನ ಅಭಾವ ತಡೆಯಬಹುದು ಹಾಗೂ ಅಂತರ್ಜಲ ಮಟ್ಟವನ್ನು ವೃದ್ಧಿಸಬಹುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಪ್ರೊ. ಬಿ. ಕೃಷ್ಣಪ್ಪ ಸಭಾಭವನ ನಿರ್ಮಿಸಲು ಸಚಿವರು ಹೆಚ್. ಕೆ. ಪಾಟೀಲರಿಗೆ ಒತ್ತಾಯ
“ಕ್ಷೇತ್ರದ ಶಾಸಕರು, ಪ್ರಪಂಚಾಯತಿ ಆಡಳಿತ ಮಂಡಳಿ ಹಾಗೂ ಪ.ಪಂಚಾಯತಿ ಅಧಿಕಾರಿಗಳು ಹೊಂಡದ ಸ್ವಚ್ಚತೆಗೆ ಗಮನ ಹರಿಸಬೇಕು. ಈ ಸಮಸ್ಯೆ ಬೇಗನೆ ನಿವಾರಣೆ ಆಗದಿದ್ದರೆ ಊರಿನ ಹಿರಿಯರ ಸಮ್ಮುಖದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತ ರಿಂದ ಉಗ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಮನವಿ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.
