- ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣ ಯೋಜನೆ ಅಡಿಯಲ್ಲಿ ಅಪಘಾತ ವಿಮೆ
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಪ್ರಿಮಿಯಂ ರಹಿತ ₹50 ಲಕ್ಷ ವಿಮೆ
ಅಪಘಾತದಲ್ಲಿ ಮೃತಪಟ್ಟ ಚಾಲನಾ ಸಿಬ್ಬಂದಿ ಎರಡು ಕುಟುಂಬದ ಅವಲಂಬಿತರಿಗೆ ತಲಾ ₹1 ಕೋಟಿ ಅಪಘಾತ ಪರಿಹಾರದ ಚೆಕ್ ವಿತರಣೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ದ ಕೇಂದ್ರ ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಅವರ ಅವಲಂಬಿತರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಯೋಜನೆಯಡಿ ₹1 ಕೋಟಿ ಅಪಘಾತ ಪರಿಹಾರ ವಿಮೆ ಚೆಕ್ ನೀಡುವ ಕಾರ್ಯಕ್ರಮವನ್ನು ಶನಿವಾರ ನಡೆಸಲಾಯಿತು.
ಈ ಯೋಜನೆಯಡಿಯಲ್ಲಿ ಸಿಬ್ಬಂದಿಗಳು ಕರ್ತವ್ಯದ ಮೇಲಿದ್ದಾಗ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಂದರ್ಭಗಳಲ್ಲಿಯೂ ಉಂಟಾಗುವ ಅಪಘಾತಗಳಿಗೂ ಸಹ ಈ ವಿಮಾ ಸೌಲಭ್ಯ ಅನ್ವಯಿಸುತ್ತದೆ. ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣ ವಿನೂತನ ಯೋಜನೆ ಅಡಿಯಲ್ಲಿ ಕೆಎಸ್ಆರ್ಟಿಸಿ ಅಪಘಾತವಾದ ತನ್ನ ಸಿಬ್ಬಂದಿಗೆ ₹1 ಕೋಟಿ ಮೊತ್ತದ ಅಪಘಾತ ವಿಮೆಯನ್ನು ಜಾರಿಗೊಳಿಸಿದೆ.
ಕೆಎಸ್ಆರ್ಟಿಸಿ ಜಾರಿಗೊಳಿಸಿದ ಈ ಯೋಜನೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಪ್ರಿಮಿಯಂ ರಹಿತ ₹50 ಲಕ್ಷ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಅವರಿಂದ ವಾರ್ಷಿಕ ₹885 ಪ್ರಿಮಿಯಂ (ನೌಕರರಿಂದ) ಪಾವತಿಯ ಮೇರೆಗೆ ₹50 ಲಕ್ಷಗಳ ವಿಮೆ ಒಳಗೊಂಡಿರುತ್ತದೆ.
ಕೆಎಸ್ಆರ್ಟಿಸಿ ವಿಮೆ ಯೋಜನೆ ಜಾರಿಗೊಳಿಸಿದ ನಂತರ ಚಾಲನಾ ಹಾಗೂ ನಿರ್ವಾಹಕ ಸಿಬ್ಬಂದಿ ಜಿ ವಿ ಛಲಪತಿ(41) ನಿಗಮದಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. 2023ರ ಜನವರಿ 29ರಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಛಲಪತಿ ಎಂಬುವವರು ಮೃತಪಟ್ಟಿದ್ದಾರೆ. ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರಿಗೆ ವಿಮಾ ಪರಿಹಾರದ ₹1 ಕೋಟಿ ಜತೆಗೆ ನಿಗಮದ ವತಿಯಿಂದ ₹17.21 ಲಕ್ಷ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಪೈಕಿ ₹12.71 ಲಕ್ಷ ಪರಿಹಾರವನ್ನು ನಿಗಮ ನೀಡಿದೆ. ಬಾಕಿ ಉಳಿದ ₹4.50 ಮೊತ್ತವನ್ನು ಮೃತ ಅವಲಂಬಿತರು ಸೂಕ್ತ ದಾಖಲೆ ಸಲ್ಲಿಸಿದೊಡನೆ ಭವಿಷ್ಯ ನಿಧಿ ಇಲಾಖೆಯಿಂದ ಶೀಘ್ರದಲ್ಲಿ ಪಾವತಿಯಾಗಲಿದೆ ಎಂದು ನಿಗಮ ಹೇಳಿದೆ.
ನಿಗಮದ ಮತ್ತೋರ್ವ ಚಾಲಕ ಹಾಗೂ ನಿರ್ವಾಹಕ ಪಿ ಎನ್ ನಾಗರಾಜು(52) ಎಂಬುವವರು ನಿಗಮದಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2023ರ ಫೆಬ್ರುವರಿ 1ರಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ನಾಗರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
“ವಿಮಾ ಪರಿಹಾರ ₹1 ಕೋಟಿ ಹೊರತುಪಡಿಸಿ, ನಿಗಮದ ವತಿಯಿಂದ ₹21.94 ಲಕ್ಷ ಪರಿಹಾರಕ್ಕೆ ದೊರೆತಿದೆ. ಈ ಪೈಕಿ ₹16.19 ಲಕ್ಷ ಪರಿಹಾರವನ್ನು ನಿಗಮ ಈಗಾಗಲೇ ನೀಡಿದ್ದು, ಉಳಿದ ₹5.75 ಲಕ್ಷ ಬಾಕಿ ಮೊತ್ತವನ್ನು ಮೃತರ ಅವಲಂಬಿತರು ಸೂಕ್ತ ದಾಖಲಾತಿ ಸಲ್ಲಿಸಿದೊಡನೆ ಭವಿಷ್ಯ ನಿಧಿ ಇಲಾಖೆಯಿಂದ ಶೀಘ್ರದಲ್ಲಿಯೇ ಪಾವತಿಯಾಗಲಿದೆ” ಎಂದು ತಿಳಿಸಿದೆ.
“ಮೃತಪಟ್ಟ ಚಾಲನಾ ಸಿಬ್ಬಂದಿ ಮರಳಿ ತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬಗಳ ಸುಭದ್ರತೆಗಾಗಿ ನಿಗಮವು ಜಾರಿಗೊಳಿಸಿರುವ ಈ ಅಪಘಾತ ಪರಿಹಾರ ವಿಮಾ ಯೋಜನೆಯು ಬಹಳ ಉತ್ತಮವಾಗಿದೆ. ಈ ಯೋಜನೆಯನ್ನು ಸದ್ಯದಲ್ಲಿಯೇ ಇತರೆ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜಾರಿಗೊಳಿಸಲು ಕೂಡಲೇ ಕ್ರಮ ಜರುಗಿಸಲಾಗುವುದು” ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಹಾರ ನಿರೀಕ್ಷಕನನ್ನು 15 ಕಿ.ಮೀ ಬೆನ್ನತ್ತಿ ಬಂಧಿಸಿದ ಲೋಕಾಯುಕ್ತ ಪೊಲೀಸರು
“ಕುಟುಂಬದವರು ಹಣವನ್ನು ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಇಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ತಮ್ಮ ಮುಂದಿನ ಜೀವನಕ್ಕಾಗಿ ಕಾಪಾಡಿಕೊಳ್ಳಬೇಕು. ಅನುಕಂಪ ಆಧಾರದ ಮೇಲಿನ ಕೆಲಸಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದರು. ನಿಗಮದ ಸಿಬ್ಬಂದಿಗಳ ಹಾಗೂ ಕುಟುಂಬದವರ ಹಿತಾಸಕ್ತಿ ಕಾಪಾಡಲು ನಾವು ನಿಮ್ಮೊಡನೆ ಸದಾ ಇರುತ್ತೇವೆ” ಎಂದು ತಿಳಿಸಿದರು.
“ಸಚಿವರು ಆದೇಶಿಸಿರುವಂತೆ ಕೂಡಲೇ ಅನುಕಂಪ ಆಧಾರದ ಮೇಲೆ ಕೆಲಸ ನೀಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಎಸ್ಬಿಐ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರುಗಳಾದ ಹೆಚ್.ವಿ. ಅನಂತ ಸುಬ್ಬರಾವ್, ಬಿ. ಜಯದೇವರಾಜೇ ಅರಸು, ಜಿ.ಎಸ್. ಮಹದೇವಯ್ಯ, ಹೆಚ್.ಡಿ. ರೇವಪ್ಪ, ಎಸ್. ನಾಗರಾಜ ಮತ್ತು ಇತರರು ಹಾಗೂ ನಿಗಮದ ಸಿಬ್ಬಂದಿ ಭಾಗವಹಿಸಿದ್ದರು.